Mysore
25
overcast clouds
Light
Dark

ವಿದೇಶ ವಿಹಾರ : ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಇನ್ನೆಷ್ಟು ದಿನ? ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಸುಯೆಲಾ ಕೊಕ್ಕೆ!

– ಡಿ.ವಿ. ರಾಜಶೇಖರ

ಶಿಕ್ಷಣ, ವಾಣಿಜ್ಯ, ಉದ್ಯೋಗ, ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಬ್ರಿಟನ್- ಭಾರತ ಉಭಯ ದೇಶಗಳ ಗಡಿಯನ್ನು ಮುಕ್ತಗೊಳಿಸುವ ಉದ್ದೇಶದ ಮುಕ್ತ ವಾಣಿಜ್ಯ ಒಪ್ಪಂದ ಸಿದ್ದವಾಗಿದೆ. ಈ ದೀಪಾವಳಿ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಿಗಳು ಸಹಿ ಹಾಕಬೇಕಿತ್ತು. ಆದರೆ ಈ ಸಾಧ್ಯತೆಗಳು ಕಡಿಮೆ ಎನ್ನುವಂಥ ಬೆಳವಣಿಗೆಗಳು ಹೊಸ ಸರ್ಕಾರ ಬಂದನಂತರ ಆಗುತ್ತಿವೆ. ಮುಖ್ಯವಾಗಿ ಬ್ರಿಟನ್‍ನ ಹೊಸ ಗೃಹಸಚಿವರಾಗಿ ನೇಮಕಗೊಂಡಿರುವ ಸುಯೇಲಾ ಬ್ರೇವರ್‍ಮ್ಯಾನ್ ಅವರು ಈ ಒಪ್ಪಂದದ ಕೆಲ ವಿವರಗಳ ಬಗ್ಗೆ ಬಹಿರಂಗವಾಗಿ ಆಕ್ಷೇಪ ಎತ್ತಿದ್ದಾರೆ.

ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರಕ್ಕೆ ಬಂದು ಕೇವಲ 40 ದಿನ ಕಳೆದಿವೆ. ಆಗಲೇ ಅವರು ಅಧಿಕಾರದಲ್ಲಿ ಇನ್ನೆಷ್ಟು ದಿನ ಇರುತ್ತಾರೆ, ಅವರೇ ಅಧಿಕಾರ ತ್ಯಜಿಸಬಹುದು ಅಥವಾ ಆಡಳಿತ ಕನ್ಸರ್‍ವೇಟಿವ್ ಪಕ್ಷ ಆ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಬಹುದು ಎನ್ನುವ ಮಾತು ಬ್ರಿಟಿನ್‍ನ ರಾಜಕೀಯವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಈ ಪರಿಸ್ಥಿತಿಗೆ ಮತ್ತಾರೂ ಕಾರಣರಲ್ಲ, ಟ್ರಸ್ ಅವರೇ ತಂದುಕೊಂಡಂಥ ಸ್ಥಿತಿ ಇದು.
ಟ್ರಸ್ ಅವರು ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ಪಕ್ಷದಲ್ಲಿ ಅವರ ಬೆಂಬಲಿಗರ ಗುಂಪೊಂದು ದೊಡ್ಡ ದನಿಯಲ್ಲಿ ಹೇಳುತ್ತಿದೆಯಾದರೂ ಪಕ್ಷದಲ್ಲಿ ಅವರ ಬೆಂಬಲ ಮೊದಲಿನಂತೆ ಇಲ್ಲ ಎನ್ನುವುದು ಸತ್ಯ. ಹೀಗಾಗಿಯೇ ವಿರೋಧಿ ಲೇಬರ್ ಪಾರ್ಟಿಯೂ ಈಗ ಟ್ರಸ್ ಅವರ ರಾಜೀನಾಮೆಯನ್ನು ಕೇಳುತ್ತಿದೆ. 2025ರಲ್ಲಿ ಚುನಾವಣೆ ನಡೆಯಬೇಕಿದ್ದು ಅದುವರೆಗೆ ಕಾಯದೆ ಈಗಲೇ ಸಂಸತ್ ಚುನಾವಣೆ ಘೋಷಿಸಬೇಕೆಂದು ಲೇಬರ್ ಪಾರ್ಟಿ ಒತ್ತಾಯಿಸುತ್ತಿದೆ.
ಈ ಮೊದಲು ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಕನ್ಸರ್‍ವೇಟಿವ್ ಪಕ್ಷ ಚುನಾವಣೆ ನಡೆಸಿತು. ಆ ಚುನಾವಣೆಯಲ್ಲಿ ಟ್ರಸ್ ಅವರು ಭಾರತ ಮೂಲದ ರಿಶಿ ಸುನಕ್ ಅವರಿಗಿಂತಾ ಹೆಚ್ಚು ಮತ ಗಳಿಸಿದ ಪರಿಣಾಮವಾಗಿ ಪ್ರಧಾನಿಯಾದರು. ತೆರಿಗೆಗಳನ್ನು ತಗ್ಗಿಸುವುದು ಅದರಲ್ಲಿಯೂ ಅತಿ ಶ್ರೀಮಂತರ ಮೇಲೆ ಹಾಕಲಾಗಿದ್ದ ತರಿಗೆಗಳನ್ನು ಕಡಿಮೆಮಾಡುವುದು, ಇಂಧನ ಬೆಲೆಯನ್ನು ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ನಿಗದಿ ಮಾಡುವುದು ಅವರ ಚುನಾವಣಾ ಭರವಸೆಯಾಗಿತ್ತು. ಹಣದುಬ್ಬರ, ನಿರುದ್ಯೋಗ ಹೆಚ್ಚಿರುವಾಗ ತೆರಿಗೆ ಇಳಿಸುವುದು ಸೂಕ್ತ ಅಲ್ಲ ಎಂಬುದು ಸುನಕ್ ಅವರ ವಾದವಾಗಿತ್ತು. ಆದರೆ ಕನ್ಸರ್‍ವೇಟಿವ್ ಪಕ್ಷದ ಸಂಪ್ರದಾಯಸ್ಥ ಮತ್ತು ಹಳೆಯ ಸದಸ್ಯರು ಟ್ರಸ್ ಪರ ಮತಚಲಾಯಿಸಿದರು. ಹೀಗಾಗಿ ಅವರು ಪ್ರಧಾನಿಯಾದರು.
ಅಧಿಕಾರಕ್ಕೆ ಬಂದ ಹೊಸದರಲ್ಲಿಯೇ ಟ್ರಸ್ ಅವರು ಮಿನಿ ಬಜೆಟ್ ಮಂಡಿಸಿ ಸುಮಾರು 45 ಬಿಲಿಯನ್ ಪೌಂಡ್ ಮೊತ್ತದ ತೆರಿಗೆ ರಿಯಾಯ್ತಿಗಳನ್ನು ಪ್ರಕಟಿಸಿಬಿಟ್ಟರು. ಇದರ ಜೊತೆಗೆ ಇಂಧನ ದರವನ್ನು ನಿಗದಿ ಮಾಡಿ ಎರಡು ವರ್ಷ ಕಾಲ ಅದಕ್ಕಿಂತ ಹೆಚ್ಚು ಹಣವನ್ನು ಯಾರೂ ಕೊಡಬೇಕಾದ್ದಿಲ್ಲ. ಆದನ್ನು ಸರ್ಕಾರ ಭರಿಸುತ್ತದೆ ಎನ್ನುವ ಆಶ್ವಾಸನೆ ನೀಡಲಾಯಿತು. ಈ ರೀತಿಯ ರಿಯಾಯ್ತಿ ಮತ್ತು ತೆರಿಗೆ ಕಡಿಮೆ ಮಾಡುವುದರಿಂದ ಒಟ್ಟು ಆದಾಯದಲ್ಲಿ ಉಂಟಾಗಬಹುದಾದ ಭಾರಿ ಪ್ರಮಾಣದ ಕೊರತೆ ತುಂಬಿಕೊಳ್ಳುವ ಯಾವುದೇ ಯೋಜನೆಯನ್ನು ಅವರು ರೂಪಿಸಿರಲಿಲ. ತೆರಿಗೆ ಕಡಿತ ಮಾಡಿದ ಒಂದೇ ದಿನದಲ್ಲಿ ವಾಣಿಜ್ಯ ಮಾರುಕಟ್ಟೆ ಮತ್ತು ಆರ್ಥಿಕ ವಲಯದಲ್ಲಿ ಅಲ್ಲೋಲಕಲ್ಲೋಲವಾಯಿತು. ಪೌಂಡ್‍ನ ಬೆಲೆ ಕುಸಿಯಿತು. ಹಣದುಬ್ಬರ ಹಠಾತ್ತನೆ ಏರಿತು. ಕುಸಿಯುತ್ತಿರುವ ಆರ್ಥಿಕತೆಯನ್ನು ಸರಿದೂಗಿಸಲು ಬ್ಯಾಂಕ್ ಆಫ್ ಇಂಗ್ಲೆಂಡ್ ಬಾಂಡ್‍ಗಳನ್ನು ಬಿಡುಗಡೆ ಮಾಡಿ ಆ ಮೂಲಕ ಖಜಾನೆಯನ್ನು ಸ್ವಲ್ಪಮಟ್ಟಿಗಾದರೂ ತುಂಬಿಕೊಳ್ಳಲು ಪ್ರಯತ್ನಿಸಿತು.
ಈ ಬೆಳವಣಿಗೆಗಳಿಂದ ಬೆಚ್ಚಿದ ಟ್ರಸ್ ಅವರು ತೆರಿಗೆ ಪ್ರಮಾಣದಲ್ಲಿ ಕಡಿತ ಮಾಡುವಲ್ಲಿ ತಪ್ಪಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡರಷ್ಟೇ ಅಲ್ಲ ಮುಖ ಉಳಿಸಿಕೊಳ್ಳಲು ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರು ರಾಜೀನಾಮೆ ಕೊಡುವಂತೆ ಮಾಡಿದರು. ಜರೆಮಿ ಹಂಟ್ ಈಗ ಹೊಸ ಹಣಕಾಸು ಸಚಿರಾಗಿದ್ದಾರೆ. ಅವರು ಬಂದ ಹೊಸದರಲ್ಲಿಯೇ ಹಿಂದೆ ತಪ್ಪಾಗಿದೆ ಅದನ್ನು ಸರಿಪಡಿಸಲಾಗುವುದು. ಆ ದಿಸೆಯಲ್ಲಿ ತೆರಿಗೆಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ತೆರಿಗೆಗಳನ್ನು ಇಳಿಸಿದ ಪರಿಣಾಮವಾಗಿ ವಾಣಿಜ್ಯ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಈಗ ತೆರಿಗೆ ಹೆಚ್ಚಿಸಿದರೆ ಮಾರುಕಟ್ಟೆ ಮತ್ತು ಸಾಮಾನ್ಯ ಜನರು ಹೇಗೆ ಪ್ರತಿಕ್ರಯಿಸುತ್ತಾರೋ ಕಾದು ನೋಡಬೇಕು. ಜನರ ಪ್ರತಿಕ್ರಿಯೆ ಏನೇ ಇದ್ದರೂ ದೇಶದ ಆರ್ಥಿಕ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಅಧಿಕಾರದಿಂದ ಟ್ರಸ್ ಇಳಿಯಲೇ ಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆಡಳಿತ ಪಕ್ಷ ಯಾರನ್ನು ನಾಯಕರನ್ನಾಗಿ ಆರಿಸುತ್ತದೆ ಎನ್ನುವುದು ಕುತೂಹಲಕಾರಿ. ರಿಶಿ ಸುನಕ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸುವ ವಿಚಾರದಲ್ಲಿ ಒಮ್ಮತ ಬರುವ ಸಾಧ್ಯತೆ ಇಲ್ಲ. ಸ್ಥಳೀಯರನ್ನೇ ಕನ್ಸರ್‍ವೇಟಿವ್ ಪಕ್ಷ ಆರಿಸುವ ಸಾಧ್ಯತೆಯೇ ಹೆಚ್ಚು. ಈ ಹಿಂದೆ ಪಕ್ಷದ ಚುನಾವಣೆಯಲ್ಲಿ ರಿಶಿ ಸುನಕ್ ಅವರು ಭಾರತೀಯರು ಎನ್ನುವ ವಿಚಾರ ಸಾಕಷ್ಟು ಕೆಲಸ ಮಾಡಿತು ಎನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಲಿಜ್ ಟ್ರಸ್ ಅವರನ್ನು ಕೆಳಕ್ಕಿಳಿಸಿ ಹೌಸ್ ಆಫ್ ಕಾಮನ್ಸ್‍ನ ನಾಯಕಿಯಾದ ಮತ್ತು ಬೋರಿಸ್ ಜಾನ್ಸನ್ ಸಂಪುಟದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಖಾತೆ ಸಚಿವೆಯಾಗಿದ್ದ ಪೆನ್ನಿ ಮಾಡರೆಂಟ್ ಅವರನ್ನು ಪ್ರಧಾನಿ ಮಾಡುವುದು ಮತ್ತು ರಿಶಿ ಸುನಕ್ ಅವರನ್ನು ಮತ್ತೆ ಹಣಕಾಸು ಸಚಿವರನ್ನಾಗಿ ಮಾಡುವುದು ಅಥವಾ ರಿಶಿ ಸುನಕ್ ಅವರನ್ನು ಪ್ರಧಾನಿ ಸ್ಥಾನಕ್ಕೆ ತಂದು ಪೆನ್ನಿ ಮಾಡರೆಂಟ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡುವ ದಿಕ್ಕಿನಲ್ಲಿ ಸದ್ಯ ಕನ್ಸರ್‍ವೇಟಿವ್ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.

ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಕುತ್ತು?
———————-
ಹೊರಗಿನವರು ಮತ್ತು ಒಳಗಿನವರು ಎನ್ನುವ ಭಾವನೆ ಬ್ರಿಟನ್‍ನಲ್ಲಿ ಈಗ ದೊಡ್ಡದಾಗಿ ಬೆಳೆದಿದೆ. ಈ ಭಾವನೆ ಈಗ ಭಾರತ ಮತ್ತು ಬ್ರಿಟನ್ ಬಾಂಧವ್ಯದ ಸ್ವರೂಪವನ್ನೇ ಬದಲಾಯಿಸುವ ಹಂತಕ್ಕೆ ಬಂದಿದೆ. ಎರಡೂ ದೇಶಗಳ ನಡುವೆ ಬಾಂಧವ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಕಾಲದಲ್ಲಿ ಸಚಿವರು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಮಾತುಕತೆಗಳು ನಡೆದಿದ್ದವು. ಮುಕ್ತ ವಾಣಿಜ್ಯ ಒಪ್ಪಂದ ವಿವರಗಳು ಸಹಿ ಹಾಕುವ ಹಂತಕ್ಕೆ ಬಂದಿದ್ದವು. ಶಿಕ್ಷಣ, ವಾಣಿಜ್ಯ, ಉದ್ಯೋಗ, ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಎರಡೂ ದೇಶಗಳ ಗಡಿಯನ್ನು ಮುಕ್ತಗೊಳಿಸುವ ಉದ್ದೇಶದ ಈ ಒಪ್ಪಂದಕ್ಕೆ ದೀಪಾವಳಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಲಿನ ಪ್ರಧಾನಿ ಅವರು ಸಹಿ ಹಾಕಬೇಕಿತ್ತು. ಆದರೆ ಈ ಸಾಧ್ಯತೆಗಳು ಕಡಿಮೆ ಎನ್ನುವಂಥ ಬೆಳವಣಿಗೆಗಳು ಹೊಸ ಸರ್ಕಾರ ಬಂದನಂತರ ಆಗುತ್ತಿವೆ.
ಮುಖ್ಯವಾಗಿ ಬ್ರಿಟನ್‍ನ ಹೊಸ ಗೃಹಸಚಿವರಾಗಿ ನೇಮಕಗೊಂಡಿರುವ ಸುಯೇಲಾ ಬ್ರೇವರ್‍ಮ್ಯಾನ್ ಅವರು ಈ ಒಪ್ಪಂದದ ಕೆಲ ವಿವರಗಳ ಬಗ್ಗೆ ಬಹಿರಂಗವಾಗಿ ಆಕ್ಷೇಪ ಎತ್ತಿದ್ದಾರೆ. “ಈ ಒಪ್ಪಂದ ಆದರೆ ಇನ್ನಷ್ಟು ಭಾರತೀಯರು ಬ್ರಿಟನ್‍ಗೆ ವಲಸೆ ಬರುತ್ತಾರೆ. ಈಗಾಗಲೇ ವಿಸಾ ಅವಧಿ ಮುಗಿದ ಭಾರತೀಯರು ಅಧಿಕ ಸಂಖ್ಯೆಯಲ್ಲಿದ್ದಾರೆ ( ಸುಮಾರು ಒಂದುವರೆ ಲಕ್ಷ ಭಾರತೀಯರು ವಿಸಾ ಅವಧಿ ಮುಗಿದರೂ ಭಾರತಕ್ಕೆ ಹಿಂತಿರುಗದೆ ಅಲ್ಲಿಯೇ ಇದ್ದಾರಂತೆ). ಈಗ ರೂಪಿಸಿರುವ ಭಾರತದ ಜೊತೆಗಿನ ಒಪ್ಪಂದ ಬ್ರೆಕ್ಸಿಟ್ ಒಪ್ಪಂದದಲ್ಲಿರುವ ನಿಯಮಗಳಿಗೆ ವಿರುದ್ಧವಾಗಿದೆ” ಎಂದು ಬಹಿರಂಗವಾಗಿ ಬ್ರೇವರ್‍ಮ್ಯಾನ್ ಹೇಳಿ ವಿವಾದವನ್ನು ಎಬ್ಬಿಸಿದ್ದಾರೆ. ವಾಸ್ತವವಾಗಿ ಸುಯೇಲಾ ಬ್ರೇವರ್‍ಮ್ಯಾನ್ ತಂದೆ ಕ್ರಿಸ್ಟಿ ಫರ್ನಾಂಡಿಸ್ ಮತ್ತು ತಾಯಿ ಉಮಾ ಮೂಲತಃ ಭಾರತೀಯರಾಗಿದ್ದು ಬೇರೆ ದೇಶಗಳಿಗೆ ಹೋಗಿ ನಂತರ ಬ್ರಿಟನ್‍ಗೆ ವಲಸೆ ಹೋದವರು. ತಂದೆ ಗೋವಾದಿಂದ ಹೋಗಿ ಕೀನ್ಯದಲ್ಲಿ ನೆಲೆಸಿದವರು. ತಾಯಿ ಮೊರಿಷಿಯಸ್‍ನಲ್ಲಿ ನೆಲೆಸಿದ್ದ ತಮಿಳು ಭಾಷಿಕರು. ಅವರು ಬ್ರಿಟನ್‍ಗೆ ವಲಸಿಗರಾಗಿ ಬಂದು ಅಲ್ಲಿಯೇ ಶಾಶ್ವತವಾಗಿ ನೆಲೆಸಿದವರು. ಇಂಥ ಹಿನ್ನೆಲೆಯಿಂದ ಬಂದ ಬ್ರೇವರ್‍ಮ್ಯಾನ್ ಈಗ ಭಾರತದ ವಲಸಿಗರ ಬಗ್ಗೆ ಅಸಹನೆಯ ಮಾತುಗಳನ್ನಾಡಿರುವುದು ಭಾರತದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ. ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಎಲ್ಲಿ ಕಲ್ಲುಹಾಕುತ್ತಾರೋ ಎಂಬ ಆತಂಕ ಉಂಟಾಗಿದೆ.
ಬ್ರಿಟನ್ ಸರ್ಕಾರದ ಸ್ಪಷ್ಟನೆಯನ್ನು ಭಾರತ ಬಯಸಿದೆ. ಬ್ರಿಟನ್ ಅಧಿಕಾರಿಗಳು “ಒಪ್ಪಂದ ಆಗುವುದರ ಬಗ್ಗೆ ಅನುಮಾನ ಬೇಡ. ಬ್ರೇವರ್‍ಮ್ಯಾನ್ ಅವರು ವ್ಯಕ್ತ ಮಾಡಿರುವ ಅಭಿಪ್ರಾಯ ವೈಯಕ್ತಿಕವಾದುದು’ ಎಂದು ಹೇಳಿರುವುದು ಸಮಾಧಾನದ ವಿಚಾರ. ಆದರೆ ಲಿಜ್ ಟ್ರಸ್ ಸರ್ಕಾರ ಹಿಂದಿನ ಸರ್ಕಾರ ಅಂತಿಮಗೊಳಿಸಿದ ಒಪ್ಪಂದಕ್ಕೆ ಸಹಿಹಾಕುವುದೇ ಎಂಬುದು ಕಾದು ನೋಡಬೇಕಾದ ವಿಚಾರ. ವಿಪರ್ಯಾಸ ಎಂದರೆ ಬ್ರೇವರ್‍ಮ್ಯಾನ್ ಅಸಾಧ್ಯ ಬುದ್ದಿವಂತೆ. ಕೇಂಬ್ರಿಜ್ಡ್‍ನಲ್ಲಿ ಓದಿದವರು. ವಲಸೆ ಕಾನೂನನ್ನು ಅಧ್ಯಯನ ಮಾಡಿದವರು. ಫ್ರಾನ್ಸ್‍ನಲ್ಲಿ ಯೂರೋಪ್ ಬಗ್ಗೆ ಸ್ನಾತಕೋತ್ತರ ಡಿಗ್ರಿ ಪಡೆದವರು. ಅಟಾರ್ನಿ ಜನರಲ್ ಆಗಿ ಕೆಲಸ ಮಾಡಿದವರು. ಇಷ್ಟೆಲ್ಲಾ ಓದು ಮತ್ತು ಅನುಭವ ಇದ್ದರೂ ಬ್ರಿಟನ್‍ನ ವಸಾಹತಶಾಹಿ ಆಡಳಿತ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಮಾಡಿರುವುದು ವಿಪರ್ಯಾಸವೇ ಸರಿ.
ಭಾರತದಲ್ಲಿ ಬ್ರಿಟನ್ ಆಡಳಿತಗಾರರು ನಡೆಸಿದ ದೌರ್ಜನ್ಯ, ಅಪಾರ ಸಂಪತ್ತಿನ ಲೂಟಿ ಅವರ ಅರಿವಿನಲ್ಲೇ ಇಲ್ಲ ಎನಿಸುತ್ತದೆ. ಬ್ರಿಟನ್ ಆಡಳಿತಗಾರರನ್ನು ಹೊಗಳುವ ಅವರು ಭಾರತದ ಪರ ಇರುವ ಸಾಧ್ಯತೆ ಇಲ್ಲ. ಈ ಹಿನ್ನೆಯಲ್ಲಿ ಲಿಜ್ ಟ್ರಸ್ ಯಾವ ನಿಲುವು ತಳೆಯುತ್ತಾರೆ ಎನ್ನುವುದು ಕುತೂಹಲಕಾರಿ. ಅಕಸ್ಮಾತ್ ಲಿಜ್ ಟ್ರಸ್ ಅವರು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶವಾದರೆ ಮತ್ತೆ ಭಾರತ ಆ ಒಪ್ಪಂದದ ಸುತ್ತ ಸರ್ಕಸ್ ಮಾಡಬೇಕಾಗಿ ಬರುತ್ತದೆ. ಹೊಸ ಸರ್ಕಾರ ಬಂದರೆ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ವಿರೋಧ ಇರಲಾರದು ಎಂಬುದೇ ಭಾರತದ ನಿರೀಕ್ಷೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ