ಪ್ರತಿ ವರ್ಷದಂತೆ ಈ ವರ್ಷವೂ ಮೊನ್ನೆ ಶ್ರೀರಾಮನವಮಿ ಸರಿದು ಹೋಯಿತು. ಶ್ರೀರಾಮನ ಭವ್ಯ ಮಂದಿರವನ್ನು ಕಟ್ಟಲು ಮೂವತ್ತು ವರ್ಷಗಳ ಹಿಂದೆ ಬಾಬರಿ ಮಸೀದಿ ಕೆಡವಲಾಯಿತು. ಸಾವಿರಾರು ಸಾವು–ನೋವುಗಳಿಗೆ, ಅಂತ್ಯವಿಲ್ಲದ ರೋಷ–ದ್ವೇಷಕ್ಕೆ ದಾರಿ ಮಾಡಲಾಯಿತು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮುಂದಿನ ವರ್ಷ ಈ ಹೊತ್ತಿಗೆ ಪೂರ್ಣಗೊಳ್ಳಲಿದೆ. ಬಯಲಿನಲ್ಲಿರುವ ರಾಮಲಲ್ಲಾ ಮಂದಿರದಲ್ಲಿ ನೆಲೆಸಲಿದ್ದಾನೆ ಎಂದು ಗೃಹಮಂತ್ರಿ ಅಮಿತ್ ಶಾ ಎರಡು ದಿನಗಳ ಹಿಂದೆ ಸಾರಿ ಹೇಳಿದ್ದಾರೆ. ಅಂದ ಹಾಗೆ ಮುಂದಿನ ವರ್ಷ ಲೋಕಸಭಾ ಚುನಾವಣೆ.
ರಾಮನ ಗುಡಿಯೊಳಕ್ಕೆ ತಮ್ಮನ್ನು ಬಿಟ್ಟುಕೊಳ್ಳದೆ ಹೊರಗಿಟ್ಟ ಮೇಲರಿಮೆಗಳನ್ನು ಧಿಕ್ಕರಿಸಿ, ರಾಮನಾಮವನ್ನು ಅಡಿಯಿಂದ ಮುಡಿತನಕ ಹಚ್ಚೆ ಹೊಯ್ಯಿಸಿಕೊಂಡು ಅಸ್ಮಿತೆಗಾಗಿ ಹಂಬಲಿಸಿದ ಅಸ್ಪೃಶ್ಯರ ನೈಜ ಕಥೆಯನ್ನು ಈ ಸಂದರ್ಭದಲ್ಲಿ ನೆನೆಯಬೇಕಿದೆ.
ಗುಡಿಯಿಂದ ನಮ್ಮನ್ನು ದೂರ ಇಟ್ಟರೇನಂತೆ,… ಗುಡಿಯೊಳಗಣ ನಿಮ್ಮ ಅದೇ ದೇವರು ನಮ್ಮ ಮೈ ಮನಸುಗಳ ಮೇಲಿನ ಹಚ್ಚೆಯಾಗಿ ಶ್ರದ್ಧೆಯಾಗಿ ಹಗಲಿರುಳು ನಮ್ಮೊಡನಿದ್ದಾನೆ ನೋಡಿರಯ್ಯಾ ಎಂದು ಸೋತು ಗೆದ್ದು ಅಣಕಿಸಿದವರ ವ್ಯಥೆ.
ಶಿಲಾಮೂರ್ತಿ ರಾಮನ ಗೊಡವೆಯೇ ಬೇಡೆಂದು ಆತನನ್ನು ನಿರಾಕಾರನನ್ನಾಗಿಯೂ ನಿರ್ಗುಣನನ್ನಾಗಿಯೂ ಪ್ರೀತಿಸಿ ಪೂಜಿಸಿದ ಸಹನಶೀಲರು ಪ್ರಗತಿಪರರು ಪ್ರಬುದ್ಧರು ಛತ್ತೀಸಗಢದ ಚಮ್ಮಾರರು. ಇವರೇ ಮಧ್ಯಭಾರತದ ರಾಮನಾಮಿಗಳು. ಜಾತಿವ್ಯವಸ್ಥೆಯ ಕ್ರೌರ್ಯದ ವಿರುದ್ಧ ಬಂಡೆದ್ದು ಬದುಕಿ ಬಾಳಿದ ಈ ಅನನ್ಯ ಪ್ರತಿಭಟನೆಯ ಪಂಥ ಈಗ ಗತದ ಕತ್ತಲಿಗೆ ಸರಿದಿದೆ.
ಮಂದಿರ ಮೂರ್ತಿಗಳ ಗೊಡವೆ ಬಿಟ್ಟ ರಾಮನಾಮಿಗಳು ತುಳಸೀದಾಸರ ರಾಮಚರಿತ ಮಾನಸ ಗ್ರಂಥದ ಸುತ್ತ ಕುಳಿತು ಭಜನೆ ಮಾಡಿದರು. ಇವರ ಮೈಮೇಲಿನ ಹಚ್ಚೆಯಾದ ರಾಮನು ಜಂಗಮನೇ ಆಗಿಬಿಟ್ಟ. ರಾಮನನ್ನು ಸ್ಥಾವರವಾಗಿ ನೆಲೆಗೊಳಿಸಿದ ‘ಮೇಲ್ಜಾತಿ’ಗಳನ್ನು ರಾಮನಾಮಿಗಳು ಅಪ್ರತಿಭಗೊಳಿಸಿಬಿಟ್ಟಿದ್ದರು.
ನಖಶಿಖಾಂತ ರಾಮನಾಮದ ಹಚ್ಚೆ ಹೊಯ್ಯಿಸಿಕೊಂಡರು. ಮೈಮುರಿವ ದುಡಿತ ಮತ್ತು ಜಾತಿವ್ಯವಸ್ಥೆಯ ದಮನಕ್ಕೆ ಸಿಕ್ಕಿದ ಈ ಜನ ತಮ್ಮದೇ ಸಮಸಮಾಜದ ಕಿರು ಜಗತ್ತುಗಳ ಸೃಷ್ಟಿಸಿಕೊಂಡರು. ರಾಮನಾಮ ಬರೆದ ದುಪ್ಪಟಿಗಳ ಹೊದ್ದರು. ಮಾಂಸಾಹಾರ ಮದ್ಯಪಾನ ತ್ಯಜಿಸಿದರು.
ಏಣಿಶ್ರೇಣಿಗಳು, ಸ್ವರ್ಗ ನರಕಗಳು, ಉಚ್ಚ ನೀಚವೆಂಬ ತರತಮಗಳನ್ನು ಇಂದಿಗೂ ಜತನದಿಂದ ಕಾಯುತ್ತ ಬರಲಾಗಿದೆ. ಅಂಚಿಗೆ ಜೋತು ಬಿದ್ದು, ಜೀವ ಹಿಡಿದುಕೊಂಡಿವೆ ಕೆಳಜಾತಿಗಳು. ನ್ಯಾಯಬದ್ಧ ಅಸ್ಮಿತೆಗೆ ಹಂಬಲಿಸಿ ಹಿಂದುವಾದಿ ಚೌಕಟ್ಟಿನ ಒಳ–ಹೊರಗೆ ಕೈಕಾಲು ಬಡಿಯುತ್ತಲೇ ಬಂದಿವೆ. ಇಂತಹ ಒಂದು ಹೋರಾಟಗಾಥೆ ಅಂದಿನ ಮಧ್ಯಪ್ರದೇಶ ಮತ್ತು ಇಂದಿನ ಛತ್ತೀಸಗಢದ ರಾಮನಾಮಿ ಪಂಥದ್ದು.
ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಿಟಿಷರ ಆಡಳಿತದಡಿ ಉಂಟಾಗಿದ್ದ ಸಾಮಾಜಿಕ ಧಾರ್ಮಿಕ ತಳಮಳದ ಕಾಲಘಟ್ಟ. ಜನಿವಾರ ಧರಿಸಿ ಬಲವಂತ ದೇವಾಲಯ ಪ್ರವೇಶಕ್ಕೆ ಮುಂದಾದ ಸತ್ನಾಮಿಗಳು ಸವರ್ಣೀಯರಿಂದ ತೀವ್ರ ಪ್ರತಿರೋಧ ಎದುರಿಸಿದ್ದರು.
ಜಾತಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿ ಸಂತ ಕಬೀರ ಸಾರಿದ ಸಮಾನತೆಯ ತತ್ವಗಳ ಕಬೀರಪಂಥಕ್ಕೆ ಮಧ್ಯಭಾರತದ ಚರ್ಮಕಾರ ಅಸ್ಪೃಶ್ಯ ಜನಾಂಗ ಮನಸೋತಿತ್ತು. ಸಂತ ರವಿದಾಸ ಮತ್ತು ರಾಮಸ್ನೇಹಿ ಸಂಪ್ರದಾಯಗಳೂ ಈ ಜನರನ್ನು ತಮ್ಮತ್ತ ಸೆಳೆದಿದ್ದವು. ಆದರೆ ಮೇಲು ಕೀಳುಗಳ ಕಟ್ಟರ್ ವಾದೀ ಕಟ್ಟು ಕಟ್ಟಳೆಗಳಿಗೆ ಪ್ರಬಲ ಸವಾಲು ಕಡೆದು ನಿಲ್ಲಿಸಿದ್ದು ಸತ್ನಾಮೀ ಸಮಾಜ. ಬಡ ಚಮ್ಮಾರ ರೈತ ಘಾಸೀದಾಸ ಹುಟ್ಟಿ ಹಾಕಿದ ಪಂಥವಿದು. ಜನಿವಾರ ಧರಿಸಿ ಬಲವಂತ ದೇವಾಲಯ ಪ್ರವೇಶಕ್ಕೆ ಮುಂದಾದ ಸತ್ನಾಮಿಗಳು ಸವರ್ಣೀಯರಿಂದ ತೀವ್ರ ಪ್ರತಿರೋಧ ಎದುರಿಸಿದ್ದ ದಿನಗಳು.
ಆಗ 1890ರಲ್ಲಿ ಪ್ರಬಲ ಶಕ್ತಿಯಾಗಿ ಮೈತಳೆದಿತ್ತು ರಾಮನಾಮಿ ಸಮಾಜ. ಪಂಥದ ಸ್ಥಾಪಕ ಅನಕ್ಷರಸ್ಥ ಚಮ್ಮಾರ ಪರಶುರಾಮ. ಈತನಿಗೆ ತಗುಲಿದ ಕುಷ್ಠರೋಗವನ್ನು ರಾಮಾನಂದೀ ಜೋಗಿಯೊಬ್ಬ ಗುಣಪಡಿಸಿದ್ದ. ರಾಮಚರಿತ ಮಾನಸವನ್ನೇ ದೇವರೆಂದು ತಿಳಿದು ಅದಕ್ಕಾಗಿ ಬದುಕು ಸವೆಸಿದನಂತೆ ಪರಶುರಾಮ. ದೇವಾಲಯ ಪ್ರವೇಶಕ್ಕಾಗಿ ಕದನದ ಹಾದಿ ಸಾಕೆನಿಸಿತ್ತು ಸತ್ನಾಮಿಗಳಿಗೆ. ಪರಶುರಾಮನತ್ತ ಹೊರಳಿದರು.
ಸತ್ಯನಾಮಿಗಳು ರಾಮನಾಮಿಗಳಾದರು ಜನಿವಾರ ಧರಿಸಿದರೂ, ನೈರ್ಮಲ್ಯ ಪಾಲಿಸಿದರೂ ದೇವಾಲಯ ಪ್ರವೇಶ ದೊರೆಯದ ಅಸ್ಪೃಶ್ಯರು ರಾಮನಾಮವನ್ನು ಮೈ ಮೇಲೆ ಹಚ್ಚೆ ಚುಚ್ಚಿಸಿಕೊಂಡಿದ್ದರು. ಮಂದಿರ ಪ್ರವೇಶಕ್ಕಾಗಿ ಸವರ್ಣೀಯ ಹಿಂದೂಗಳೊಂದಿಗೆ ಘರ್ಷಣೆ ಬೇಡವೆಂದು ವಿಧಿಸಿದ ಪರಶುರಾಮ. ಬಹುಪಾಲು ಸವರ್ಣೀಯರು ಹಿಂಸಾಚಾರಕ್ಕೆ ಇಳಿದರು. ರಾಮನಾಮಿಗಳು ಹೊದೆಯುತ್ತಿದ್ದ ರಾಮನಾಮದ ಶಾಲುಗಳನ್ನು ಮತ್ತು ಅವರು ಟೋಪಿಗಳಿಗೆ ಸಿಕ್ಕಿಸಿಕೊಳ್ಳುತ್ತಿದ್ದ ನವಿಲುಗರಿಯನ್ನು ಸುಟ್ಟರು. ರಾಮನಾಮಿಗಳನ್ನು ಅಪಹರಿಸಿ ರಾಮನಾಮ ಬರೆದಿದ್ದ ಹಣೆಯ ಚರ್ಮವನ್ನು ಸುಡುವ–ಕೊಯ್ದು ಹಾಕುವ ಹೀನ ಕೃತ್ಯಗಳಿಗೆ ಇಳಿದರು. ಹಲ್ಲೆಗಳು ಎಲ್ಲೆ ಮೀರಿದಾಗ ಪರಶುರಾಮ ಬ್ರಿಟಿಷ್ ಆಡಳಿತಕ್ಕೆ ದೂರು ನೀಡಿದ. 1910ರಲ್ಲಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತು. ಸವರ್ಣೀಯರು ಹಲ್ಲೆಗಳನ್ನು ಸಮರ್ಥಿಸಿಕೊಂಡರು. ರಾಮನಾಮ ಕೇವಲ ಸವರ್ಣೀಯರ ಸ್ವತ್ತು ಎಂದು ವಾದಿಸಿದ್ದರು. 1912ರ ಅಕ್ಟೋಬರ್ 12 ರಾಮನಾಮಿಗಳು ಕೇಸು ಗೆದ್ದ ದಿನ. ರಾಮನಾಮ ಸರ್ವರಿಗೂ ಸೇರಿದ್ದು ಎಂದು ತೀರ್ಪು ನೀಡಲಾಗಿತ್ತು.
ಬ್ರಾಹ್ಮಣ್ಯದ ಅಹಂಕಾರದ ವಿರುದ್ಧ ಗಳಿಸಿದ ವಿಜಯವೆಂದು ರಾಮನಾಮಿಗಳು ಬೀಗಿದರು. ಪಂಥದ ಜನಪ್ರಿಯತೆ ಪಸರಿಸಿತು. ಪರಶುರಾಮ 1920ರ ಸುಮಾರಿಗೆ ಕಡೆಯುಸಿರೆಳೆದ. ಆ ಹೊತ್ತಿಗೆ ಹಚ್ಚೆ ಹೊಯ್ಯಿಸಿಕೊಂಡಿದ್ದ ರಾಮನಾಮಿಗಳ ಸಂಖ್ಯೆ 20 ಸಾವಿರಕ್ಕೆ ಏರಿತ್ತಂತೆ. ಹೊಯ್ಯಿಸಿಕೊಳ್ಳದಿದ್ದ ರಾಮನಾಮಿಗಳು ನಲವತ್ತು ಸಾವಿರದಷ್ಟಿದ್ದರಂತೆ. ಪರಶುರಾಮ ಬೇಕೆಂದೇ ತನ್ನ ಉತ್ತರಾಧಿಕಾರಿಯನ್ನು ಆರಿಸಿರಲಿಲ್ಲ. ರಾಮನಾಮಿಗಳೆಲ್ಲ ಸಮಾನರಾಗಿ ಸಹಬಾಳ್ವೆಯ ಸಮುದಾಯವಾಗಿ ಬದುಕಬೇಕೆಂದು ಬೋಧಿಸಿದ್ದ.
ರಾಮನಾಮಿ ಪಂಥದ ಅಧಿ
ಕೃತ ಧರ್ಮಗ್ರಂಥ ತುಳಸೀದಾಸರ ರಾಮಚರಿತ ಮಾನಸ. ಆದರೆ ತುಳಸೀದಾಸರ ರಾಮನಿಗಿಂತ ಭಿನ್ನ ನೆಲೆಯಲ್ಲಿ ನಿಲ್ಲುವ ಬಹುಮುಖೀ ರಾಮನ ಮೌಖಿಕ ಕಥನ ಪರಂಪರೆಗಳನ್ನು ಈ ಆಂದೋಲನದ ಚರಿತ್ರೆ ಮತ್ತು ಆಚರಣೆಗಳಲ್ಲಿ ನೋಡಬಹುದು.
ಭೌತಿಕ ರೂಪದಲ್ಲಿ ರಾಮಚರಿತ ಮಾನಸ ಗ್ರಂಥವೇ ರಾಮನಾಮಿಗಳ ದೈವ ಎನಿಸಿಕೊಂಡಿತು. ಅದರ ಪಠಣವೇ ಪೂಜೆಯಾಯಿತು. ಕಾಲ ಉರುಳಿದಂತೆ ನಿರಾಕಾರ ನಿರ್ಗುಣ ರಾಮನ ಪರ್ಯಾಯ ಕಥನಗಳು ಭಜನೆಗೆ ಸೇರಿಕೊಂಡವು. ಉಳಿದದ್ದೆಲ್ಲವೂ ಮರುವ್ಯಾಖ್ಯಾನಕ್ಕೆ ಒಳಗಾಯಿತು. ತಮ್ಮ ನಂಬಿಕೆಗಳು ಮತ್ತು ಮೌಲ್ಯಗಳಿಗೆ ವ್ಯತಿರಿಕ್ತವಾದ ಅಂಶಗಳನ್ನು ರಾಮನಾಮಿಗಳು ಬದಿಗೆ ಸರಿಸಿದರು. ಹೀಗೆ ಮಾನಸವು ಏಕ ಕಾಲಕ್ಕೆ ಪವಿತ್ರ ಗ್ರಂಥವೂ, ಮರುವ್ಯಾಖ್ಯಾನಗಳು ಮತ್ತು ಟೀಕೆ ಟಿಪ್ಪಣಿಗಳನ್ನು ಸೇರಿಸಿಕೊಂಡ ಮುಕ್ತ ಗ್ರಂಥವೂ ಆಯಿತು.
ರಾಮನಾಮಿಗಳ ಬದುಕಿನ ರೀತಿಗೆ ಮನಸೋತ ಕ್ಯಾಲಿಫೋರ್ನಿಯಾದ ಪ್ರೊಫೆಸರ್ ಒಬ್ಬರು ಅವರಲ್ಲೊಬ್ಬರಾಗಿ ಹತ್ತಾರು ವರ್ಷಗಳ ಕಾಲ ಛತ್ತೀಸಗಢದಲ್ಲೇ ಬದುಕಿದ್ದರು. ತಮ್ಮ ಹೆಸರನ್ನು ರಾಮದಾಸ
ಎಂದು ಬದಲಾಯಿಸಿಕೊಂಡರು. ರಾಮನಾಮಿಗಳ ಬದುಕನ್ನು ಎಲ್ಲ ವಿವರಗಳೊಂದಿಗೆ ದಾಖಲಿಸಿದರು. ರಾಮದಾಸ್ ಲ್ಯಾಂಬ್ ಎಂಬ ಈ ಪ್ರೊಫೆಸರ್ ಹೀಗೆ ದಾಖಲಿಸದೆ ಹೋಗಿದ್ದರೆ ಗೆದ್ದವರೇ ಇತಿಹಾಸ
ಬರೆಯುವ ಈ ವ್ಯವಸ್ಥೆಯಲ್ಲಿ ರಾಮನಾಮಿ ಪಂಥ ಹೇಳಹೆಸರಿಲ್ಲದೆ ಅಳಿಸಿ ಹೋಗುತ್ತಿತ್ತು.
ಕಾಲಪ್ರವಾಹದ ಹೊಡೆತ ಬಡಪಾಯಿ ರಾಮನಾಮಿಗಳನ್ನು ಯಥಾಸ್ಥಿತಿವಾದೀ ವ್ಯವಸ್ಥೆಗೆ ತಳ್ಳಿದೆ. ಪಂಥದ ಬೇರುಗಳು
ಶಿಥಿಲವಾಗಿವೆ. ಮತಾಂಧ ಶಕ್ತಿಗಳು ಕಲಿಯಬೇಕಾದದ್ದು
ಬಹಳಷ್ಟಿದೆ. ಮನತೆರೆದು ಕುಳಿತರೆ ರಾಮನಾಮಿಗಳು ಪಾಠ ಹೇಳಬಲ್ಲರು.





