Mysore
20
broken clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಅಂದು ಯಡಿಯೂರಪ್ಪ, ಇಂದು ಸಿದ್ದರಾಮಯ್ಯ

  • ಸಂಪಾದಕೀಯ

2011ರಲ್ಲಿ ರಾಚೇನಹಳ್ಳಿ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಅಂದಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದು, ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯಪಾಲಭಾರದ್ವಾಜ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದರು.

ಈಗ ಇದೇ ಸಿದ್ದರಾಮಯ್ಯ ಅವರು ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಮುಡಾದಿಂದ ನಿವೇಶನ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ತನಿಖೆಗೆ ಅನುಮತಿ ನೀಡಿರುವುದು ಸಂಚಲನ ಮೂಡಿಸಿದೆ. ಅಂದಹಾಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಎರಡನೇ ಪ್ರಕರಣ ಇದಾಗಿದೆ.

ಇದು ಈಗ ರಾಜಭವನ ಮತ್ತು ರಾಜ್ಯಪಾಲರನ್ನು ಬೀದಿಯಲ್ಲಿ ನಿಂತು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ರಾಜ್ಯಪಾಲರು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೋಲೆ” ಎಂದೆಲ್ಲ ನೈತಿಕತೆಯ ಪಾಠ ಮಾಡುತ್ತಿದ್ದಾರೆ. ಹಿಂದೆ ಭಾರದ್ವಾಜ್ ವಿರುದ್ಧವೂ ಬಿಜೆಪಿ ನಾಯಕರು ಇದೇ ರೀತಿ ಆರೋಪ ಮಾಡಿದ್ದರು ಎಂಬುದು ಉಲ್ಲೇಖನೀಯ.

ಸದ್ಯಕ್ಕೆ ಮುಡಾ ಪ್ರಕರಣ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಬಹುದು ಎಂಬ ವಿಚಾರ ತೀವ್ರ ಕುತೂಹಲ ಮೂಡಿಸಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಎದುರಾದ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೂ ಬರುತ್ತದಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.

ರಾಜ್ಯಪಾಲರ ನಡವಳಿಕೆಗಳು ಕೂಡ ಸಾಕಷ್ಟು ಬಾರಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿವೆ. ಅದರಲ್ಲೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜಭವನ ಮತ್ತು ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಕಾಣುತ್ತಿಲ್ಲ ಎಂಬ ಗಂಭೀರ ಆರೋಪವನ್ನು ವಿಪಕ್ಷಗಳು ಪದೇ ಪದೇ ಮಾಡುತ್ತಿವೆ.

ಕೇಂದ್ರ ಸರ್ಕಾರ ಕೇವಲ ರಾಜ್ಯಪಾಲರಲ್ಲದೆ ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ), ಐಟಿ (ಆದಾಯ ತೆರಿಗೆ) ಸೇರಿದಂತೆ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನನಡೆಸುತ್ತಿದೆ ಎಂಬ ಆರೋಪವಿದೆ.

ಈಗ ರಾಜ್ಯಪಾಲ ಥಾವರ್‌ಚಂದ್ ಗೆಲ್ಲೋಟ್ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿ ಸುತ್ತಿದೆ. ರಾಜ್ಯಪಾಲರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡು ಆರು ಪಟದ ನೋಟಿಸನ್ನು ದೂರುದಾರರಿಗೆ ನೀಡಿದ್ದಾರೆ. ಅದರಲ್ಲಿ ಸಿಎಂ ವಿರುದ್ಧ ಏಕೆ ತನಿಖೆಗೆ ಅನುಮತಿ ನೀಡಲಾಗುತ್ತಿದೆ ಕಾರಣಗಳನ್ನೂ ಪ್ರಸ್ತಾಪಿಸಿದ್ದಾರೆ.

ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುವುದು ಬಹಳ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಡೆದಿತ್ತು. ಆಗ ವಿರೋಧಿಸುತ್ತಿದ್ದವರು ಈಗ ಅದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು ಇಡೀ ರಾಜಕೀಯ ವ್ಯವಸ್ಥೆ ಬಗ್ಗೆ ತಿರಸ್ಕಾರ ಮೂಡಿಸುವಂತೆ ಇದೆ. ಸಿಎಂ ವಿರುದ್ಧದ ದೂರುಗಳನ್ನು ತಿರಸ್ಕರಿಸುವಂತೆ ಸಂಪುಟ ತೆಗೆದುಕೊಂಡ ನಿರ್ಣಯ ಕಾನೂನುಬಾಹಿರ ಮತ್ತು ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಣಯ ವಿಶ್ವಾಸಾರ್ಹವಲ್ಲ ಎಂಬುದು ರಾಜ್ಯಪಾಲರ ಪ್ರತಿಪಾದನೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಅತ್ತ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯ ಪರ ಬೀದಿಗಿಳಿದಿದ್ದಾರೆ. ಅವರ ಹೋರಾಟ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸಿವೆ.

ಸಿದ್ದರಾಮಯ್ಯ ಅವರು ರಾಜೀನಾಮೆ ಬಗ್ಗೆ ಯೋಚಿಸಲು ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಪ್ರಕರಣದಲ್ಲಿ ಚಾರ್ಜ್‌ ಶೀಟ್ ಸಲ್ಲಿಕೆಯಾದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರು ಅಬಕಾರಿ ನೀತಿ ಅಕ್ರಮ ಸಂಬಂಧದ ಪ್ರಕರಣದಲ್ಲಿ ಜೈಲಿನಿಂದಲೇ ಆಡಳಿತ ನಡೆಸುತ್ತಿದ್ದಾರೆ.

ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿ, ನಂತರ ತನಿಖೆ ನಡೆದು, ಚಾರ್ಜ್‌ಶೀಟ್ ಸಲ್ಲಿಕೆಯಾಗಬೇಕು. ಆಗಷ್ಟೇ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೊ ಅಥವಾ ಸ್ಥಾನದಲ್ಲಿದ್ದುಕೊಂಡೇ ಪ್ರಕರಣವನ್ನು ಎದುರಿಸಬೇಕೋ ಎಂಬುದನ್ನು ತೀರ್ಮಾನಿಸ ಬಹುದು. ಹಾಗಾಗಿ ಅವರು ಸದ್ಯಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇಲ್ಲವೆನ್ನಬಹುದು. ಈಗೇನಿದ್ದರೂ ನೈತಿಕತೆಯ ಪ್ರಶ್ನೆಯನ್ನು ಎದುರಾಗಿದೆ.

ಆಡಳಿತ ಪಕ್ಷ ಅಥವಾ ಪ್ರತಿ ಪಕ್ಷಗಳೇ ಆಗಲಿ ಸಾರ್ವಜನಿಕರಿಗೆ ಉತ್ತರಾದಾಯಿತ್ವವಾಗಿರಬೇಕು. ಸಾರ್ವಜನಿಕ ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು. ಇಂತಹ ಆರೋಪಗಳು ಕೂಡ ಕೇಳಿಬರದಂತೆ ಜನಪ್ರತಿನಿಧಿಗಳು ತಮ್ಮ ನಡೆಯಲ್ಲಿ ಪಾರದರ್ಶಕತೆಯನ್ನು ರೂಢಿಸಿಕೊಳ್ಳಬೇಕು. ಸ್ವಜನ ಪಕ್ಷಪಾತದ ಆರೋಪಕ್ಕೆ ಆಸ್ಪದವೇ ಇಲ್ಲದಂತೆ ಎಚ್ಚರ ವಹಿಸಬೇಕು. ಇದು ನಾಡಿನ ಹಿತ ರಕ್ಷಣೆಯಲ್ಲಿ ಪ್ರಮುಖವಾಗಿದೆ.

ರಾಜಭವನವನ್ನು ದುರ್ಬಳಕೆ ಮಾಡಿ ಕೊಳ್ಳುವುದು ಬಹಳ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಡೆದಿತ್ತು. ಆಗ  ವಿರೋಧಿಸುತ್ತಿದ್ದವರು ಈಗ ಅದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು ಇಡೀ ರಾಜಕೀಯ ವ್ಯವಸ್ಥೆ ಬಗ್ಗೆ ತಿರಸ್ಕಾರ ಮೂಡಿಸುವಂತೆ ಇದೆ.

Tags:
error: Content is protected !!