Mysore
21
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮೈಸೂರು ಜಿಲ್ಲೆಗೆ ಭರಪೂರ ಕೊಡುಗೆ; ಸಮಗ್ರ ಅಭಿವೃದ್ಧಿಗೆ ನಾಂದಿ

ಒಂದು ಕಾಲದಲ್ಲಿ ಬಡವರ ದೊಡ್ಡಾಸ್ಪತ್ರೆ ಅನಿಸಿಕೊಂಡಿದ್ದ ಕೆ.ಆರ್.ಆಸ್ಪತ್ರೆಯ ಒತ್ತಡ ತಗ್ಗಿಸಲು ಜಿಲ್ಲಾ ಆಸ್ಪತ್ರೆ ನಿರ್ಮಾಣ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಉದಾರವಾಗಿ ಅನುದಾನ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ನಿರೀಕ್ಷೆಗೂ ಮೀರಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದು, ಮೈಸೂರಿನ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಿದೆ.

ನಿರ್ದಿಷ್ಟವಾಗಿ ಕೇಳಿದ್ದನ್ನು ಕೊಡದೆ ಇದ್ದರೂ ಮೈಸೂರು ನಗರ ಮತ್ತು ಜಿಲ್ಲೆಯ ಬೆಳವಣಿಗೆಯ ದೃಷ್ಟಿಯಿಂದ ಪ್ರಕಟಿಸಿರುವ ಎಲ್ಲಾ ಯೋಜನೆಗಳು ಭವಿಷ್ಯದಲ್ಲಿ ಜನರಿಗೆ ವರದಾನವಾಗಲಿವೆ. ತಮ್ಮ ನೆಲೆಯ ಮಗನೊಬ್ಬ ಸಿಎಂ ಆಗಿಬಿಟ್ಟರೆ ಏನೆಲ್ಲಾ ಸಿಗಬಹುದು ಎನ್ನುವ ಜನರ ನಿರೀಕ್ಷೆಯನ್ನು ಮೀರಿ ಜಿಲ್ಲೆಗೆ ೨೩ ಕೊಡುಗೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ.

ವಿಶೇಷವಾಗಿ ಡಿ.ದೇವರಾಜ ಅರಸು ಅವರ ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಇತಿಹಾಸದ ಪುಟಗಳಲ್ಲಿ ಸೇರುವಂತಹ ಹಾಗೂ ಶಾಶ್ವತವಾಗಿ ನೆಲೆಗೊಳ್ಳುವಂತಹ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿರುವುದು ಗಮನಾರ್ಹ.

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಲ್ಲಿ ಉಂಟಾದ ಹಲವಾರು ಬೆಳವಣಿಗೆಗಳಿಂದ ಬೇಸರಗೊಂಡಿದ್ದ ಮುಖ್ಯಮಂತ್ರಿಗಳು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದರೆ, ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಪ್ರತ್ಯೇಕವಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದಂತೆಯೇ, ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ, ಸಿದ್ದರಾಮಯ್ಯ ಅವರು ಆ ಬಗ್ಗೆ ಹೆಚ್ಚಿನ ಗಮನಕೊಟ್ಟಿಲ್ಲ.

ಈಗಾಗಲೇ ಚಾಮುಂಡೇಶ್ವರಿ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದರಿಂದ ಸಮೂಹ ದೇವಸ್ಥಾನಗಳ ಅಭಿವೃದ್ಧಿ ಆಗಲಿದೆ. ಉಳಿದಂತೆ ಬೇರೆ ಕೆಲಸಗಳು ಅಷ್ಟೇನೂ ಇಲ್ಲದ ಕಾರಣ ದಸರಾ ಪ್ರಾಧಿಕಾರ ರಚನೆ ಮಾತ್ರ ಬಾಕಿ ಉಳಿದಿದೆ. ನೆರೆಯ ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನಕ್ಕಾಗಿ ಸಚಿವರು, ಶಾಸಕರು ಬೇಡಿಕೆ ಇಟ್ಟಿದ್ದರೂ ನಿರೀಕ್ಷಿಸಿದಷ್ಟು ಪರಿಗಣಿಸಿಲ್ಲ. ಆದರೆ, ಜಿಲ್ಲೆಯ ಜನಪ್ರತಿನಿಧೀಗಳು ತಮ್ಮ ಕ್ಷೇತ್ರಕ್ಕೆ ಪೂರಕವಾಗು ವಂತಹ ಯೋಜನೆಗಳನ್ನು ಕೇಳಿಕೊಂಡಿದ್ದರು. ಇದ್ಯಾವುದನ್ನೂ ಮನಸ್ಸಿನಲ್ಲಿಟ್ಟು ಕೊಳ್ಳದ ಸಿದ್ದರಾಮಯ್ಯ ಅವರು ಆರೋಗ್ಯ, ಪ್ರವಾಸೋದ್ಯಮ, ಕ್ರೀಡಾ, ಪರಂಪರೆ ಸೇರಿದಂತೆ ಎಲ್ಲಾ ಕ್ಷೇತ್ರಗಳತ್ತ ಕಣ್ಣು ಹಾಯಿಸಿದ್ದರಿಂದ ಕೇಳದೇ ಇದ್ದರೂ ಬೇಕಾದಷ್ಟು ಕೊಟ್ಟಿದ್ದಾರೆ ಎಂಬುದಕ್ಕೆ ಯೋಜನೆಗಳ ಪಟ್ಟಿಯೇ ಸಾಕ್ಷಿಯಾಗಿದೆ. ಇಡೀ ರಾಜ್ಯದ ಸಮಗ್ರ ಅಭಿವೃದ್ಧಿ, ಹಿಂದುಳಿದ ಸಮುದಾ ಯಗಳ ಆರ್ಥಿಕ ಸಬಲತೆಗೆ ಸಿದ್ದರಾಮಯ್ಯ ಆದ್ಯತೆ ನೀಡಿದ್ದಾರೆ. ಅದರೆ, ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಅದರ ನಡುವೆಯೇ ಮೈಸೂರಿಗೆ ಸಾಕಷ್ಟು ಯೋಜನೆಗಳನ್ನು ಘೋಷಿಸುವ ಮೂಲಕ ಸಿದ್ದರಾಮಯ್ಯ ಅವರು ತವರು ಜಿಲ್ಲೆಯ ಜನರ ಬಗ್ಗೆ ಸ್ವಲ್ಪ ಹೆಚ್ಚು ಅನಿಸುವಂತಹ ಕಾಳಜಿ ತೋರಿಸಿದ್ದಾರೆ.

ಹತ್ತಾರು ಪ್ರವಾಸಿತಾಣಗಳನ್ನು ಮೈಗೂಡಿಸಿಕೊಂಡಿರುವ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಈ ಬಾರಿ ಅನುದಾನ ಮೀಸಲಿಟ್ಟಿರುವುದರಿಂದ ಮುಂದೆ ದೊಡ್ಡ ದೊಡ್ಡ ಚಿತ್ರ ನಿರ್ಮಾಣದ ಚಿತ್ರೀಕರಣ ನಡೆದರೆ ಸ್ಥಳೀಯ ಜನರಿಗೂ ಅನುಕೂಲವಾಗಲಿದೆ. ತುರ್ತು ಪ್ರಕರಣಗಳಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಶ್ರಯಿಸಬೇಕಿದ್ದರಿಂದ ಈಗ ಮೈಸೂರಿನಲ್ಲೇ ನಿಮ್ಹಾನ್ಸ್ ಮಾದರಿ ಸಂಸ್ಥೆ, ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರ ಆರಂಭ ಮಾಡುವುದಕ್ಕೆ ಅನುದಾನ ಮೀಸಲಿಡಲಾಗಿದೆ. ಅದು ಬಡ ವರ್ಗದ ಜನರಿಗೆ ನೆರವಾಗಲಿದೆ. ವಿಶ್ವಕಪ್ ಖೋ ಖೋ ಪಂದ್ಯಾವಳಿಯಲ್ಲಿ ಗೆದ್ದು ಬೀಗಿದ ಕುರುಬೂರಿನ ಚೈತ್ರಾ ಅವರ ಸಾಧನೆಯ ನಂತರ ಕ್ರೀಡಾಸಕ್ತರು ಮೈಸೂರಿನತ್ತ ನೋಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂಗಡಪತ್ರದಲ್ಲಿ ಕುಸ್ತಿ, ವಾಲಿಬಾಲ್, ಖೋ ಖೋ ಅಕಾಡೆಮಿ ಸ್ಥಾಪಿಸುವ ಜತೆಗೆಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ತೆರೆಯಲಾಗುವುದು ಎಂದು  ಘೋಷಿಸಲಾಗಿದೆ. ಇದು ಹಳೆಯ ಮೈಸೂರು ಭಾಗದ ಜಿಲ್ಲೆಗಳ ಕ್ರೀಡಾಪಟುಗಳಿಗೆ ಮತ್ತಷ್ಟು ನೆರವಾಗಲಿದೆ. ಬೆಂಗಳೂರು ನಂತರ ಐಟಿ-ಬಿಟಿ ಕ್ಷೇತ್ರಗಳನ್ನು ಹೊಂದಿರುವ ಕಾರಣ ಎಲೆಕ್ಟ್ರಾನಿಕ್ ಉತ್ಪಾದನೆಗೆ ಪೂರಕ ವ್ಯವಸ್ಥೆ ನಿರ್ಮಾಣಕ್ಕೆ ೧೫೦ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಪ್ರಿಂಟೆಡ್ ಸರ್ಕೀಟ್ ಬೋರ್ಡ್ ಪಾರ್ಕ್ ಅಭಿವೃದ್ದಿ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ಸಾಕಷ್ಟು ಪ್ರಗತಿಗೆ ದಾರಿಯಾಗಲಿದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ಕೊರತೆ ಎದುರಾಗಿರುವ ಕಾರಣ ಒಂದಿಷ್ಟು ವಿಶೇಷ ಅನುದಾನ ಕೊಡಬಹುದೆಂಬ ನಿರೀಕ್ಷೆ, ನಗರಪಾಲಿಕೆಗೆ ವಿಶೇಷ ಅನುದಾನ ಸಿಗಬಹುದು ಎಂಬ ಅಭೀಷ್ಟ ಹುಸಿಯಾಗಿದೆ. ಅದೇ ರೀತಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಒಂದಿಷ್ಟು ಅನುದಾನ ಕೊಡಬೇಕೆಂಬ ಸಲಹೆಯನ್ನು ಪರಿಗಣಿಸದಿದ್ದರೂ, ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಮ್ಯೂಸಿಯಂ ಮಾಡಲು ತೀರ್ಮಾನಿಸಿರುವ ಮೂಲಕ ಐತಿಹಾಸಿಕ ಕಟ್ಟಡದಲ್ಲಿ ಗತವೈಭವವನ್ನು ಮರು ಸ್ಥಾಪಿಸುವ ಆಶಾಭಾವನೆಗೆ ಸಿದ್ದರಾಮಯ್ಯ ಅವರು ನೀರೆರೆದಿದ್ದಾರೆ.

” ವಿಶ್ವಕಪ್ ಖೋ ಖೋ ಪಂದ್ಯಾವಳಿಯಲ್ಲಿ ಗೆದ್ದು ಬೀಗಿದ ಕುರುಬೂರಿನ ಚೈತ್ರಾ ಅವರ ಸಾಧನೆಯ ನಂತರ ಕ್ರೀಡಾಸಕ್ತರು ಮೈಸೂರಿನತ್ತ ನೋಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂಗಡಪತ್ರದಲ್ಲಿ ಕುಸ್ತಿ, ವಾಲಿಬಾಲ್, ಖೋ ಖೋ ಅಕಾಡೆಮಿ ಸ್ಥಾಪಿಸುವ ಜತೆಗೆ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ತೆರೆಯಲಾಗುವುದು ಎಂದು ಘೋಷಿಸಲಾಗಿದೆ. ಇದು ಹಳೆಯ ಮೈಸೂರು ಭಾಗದ ಜಿಲ್ಲೆಗಳ ಕ್ರೀಡಾಪಟುಗಳಿಗೆ ಮತ್ತಷ್ಟು ನೆರವಾಗಲಿದೆ.”

Tags:
error: Content is protected !!