Mysore
29
few clouds

Social Media

ಬುಧವಾರ, 11 ಮಾರ್ಚ್ 2026
Light
Dark

ದಾಖಲೆ ಬಜೆಟ್; ಹಾದಿ ಸುಲಭದ್ದಲ್ಲ

ಹದಿನೇಳನೇ ಬಾರಿಗೆ ರಾಜ್ಯದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿರುವ ವಿತ್ತ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದರ ಬೆನ್ನಲ್ಲೇ ಪಕ್ಷದ ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನೂ ಎರಡು ಬಜೆಟ್ ಮಂಡಿಸುವುದಾಗಿ ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ಈ ವರ್ಷದ ಬಜೆಟ್ ಗಾತ್ರ ೪,೪೮,೦೦೪ ಕೋಟಿ ರೂ.ಗಳಷ್ಟಿದ್ದು, ಕಳೆದ ವರ್ಷದ ಬಜೆಟ್ ಗಾತ್ರ ೪,೦೯,೫೪೯ ರೂ. ಗಳಷ್ಟಿತ್ತು. ಈ ಬಜೆಟ್‌ನಲ್ಲಿ ೩೮,೪೫೫ ಕೋಟಿ ರೂ.ಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಿದ್ದು, ಶೇ.೯.೪ ರಷ್ಟು ಬೆಳವಣಿಗೆಯಾಗಿದೆ. ಹದಿನೆಂಟು ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಗುಜರಾತ್ ಹಣಕಾಸು ಸಚಿವರಾಗಿದ್ದ ವಜುಭಾಯ್ ವಾಲಾ ಅವರ ಹಾದಿಯಲ್ಲಿ ಸಾಗಿರುವ ಸಿದ್ದರಾಮಯ್ಯ ಅವರು ಈ ಸಾಧನೆಗೆ ಸವೆಸಿದ ಹಾದಿ ಸುಲಭದ್ದಲ್ಲ, ೧೩ ಬಾರಿ ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ, ಎಂಟು ಬಾರಿ ಬಜೆಟ್ ಮಂಡಿಸಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಹಿಂದಿಕ್ಕಿ ೧೭ನೇ ಬಾರಿಗೆ ಬಜೆಟ್ ಮಂಡಿಸಿ ದಾಖಲೆ ಬರೆದಿರುವುದು ಮಾತ್ರವಲ್ಲ, ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿ ಚೊಚ್ಚಲ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾಗ ನೂರು ಕುರಿ ಲೆಕ್ಕ ಹಾಕಲು ಬಾರದ ಕುರುಬನಿಗೆ ರಾಜ್ಯದ ಬಜೆಟ್ ಮಂಡಿಸುವ ಸಾಮರ್ಥ್ಯವಿದೆಯೇ ಎಂದು ಕುಹಕವಾಡಿದವರೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಈ ಬಜೆಟ್ ಜನಕೇಂದ್ರಿತ ಬಜೆಟ್, ನಾಡಿನ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಕೇಂದ್ರಿತ ಬಜೆಟ್. ನಾಡಿನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಧ್ಯಾನಿಸಿ ನಾವು ಈ ಬಜೆಟ್ಟನ್ನು ರೂಪಿಸಿದ್ದೇವೆ. ಹಾಗಾಗಿ ಈ ಬಜೆಟ್ ಕೇವಲ ಅಂಕಿಸಂಖ್ಯೆಗಳ ಆಟವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಾ, ವಿಪರೀತ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆಯದೆ, ಸಾಲವಿಲ್ಲದೆ ವ್ಯವಸ್ಥೆಯನ್ನು ಮುನ್ನಡೆಸಲಾಗುವುದಿಲ್ಲ. ಆದರೆ, ಸಾಲವನ್ನು ಯಾವ ಮಟ್ಟದಲ್ಲಿ ಮಾಡಬೇಕು ಎಂಬುದಕ್ಕೆ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯನ್ನು ಮಾಡಿಕೊಂಡಿದ್ದೇವೆ. ನಾವು ಮಾಡುವ ಸಾಲವು ಈ ಕಾಯ್ದೆಯಲ್ಲಿ ರೂಪಿಸಿಕೊಂಡ ನಿಯಮಗಳ ಒಳಗೆ ಇರಬೇಕಾಗುತ್ತದೆ. ಬಿಜೆಪಿಯವರಿಗೆ ರಾಜ್ಯದ ಸಾಲದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ. ರಾಜ್ಯಗಳಿಗೆ ಕೊಡಬೇಕಾದುದನ್ನು ಕೊಡದೆ, ರಾಜ್ಯಗಳ ಕುತ್ತಿಗೆ ಹಿಸುಕಿ ರಾಜ್ಯಗಳಿಂದ ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರದ ಸಾಲವು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಾಖಲೆಗಳ ಪ್ರಕಾರ ೨೦೨೭ರ ಮಾರ್ಚ್ ಅಂತ್ಯಕ್ಕೆ ೨೧೮.೬೩ ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ. ೨೦೧೪ರ ಮಾರ್ಚ್‌ನಿಂದ ಈವರೆಗೆ ೧೬೫.೫೨ ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮಾಡಲಾಗಿದೆ. ಇದರಲ್ಲಿ ಈ ಹತ್ತು ವರ್ಷಗಳಲ್ಲಿ ತೀರಿಸಿರುವ ಸಾಲ ಇಲ್ಲ. ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಲೀ ಅಥವಾ ಇನ್ನಿತರ ಯಾವುದೇ ಜನ ಕಲ್ಯಾಣ ಕಾರ್ಯಕ್ರಮಗಳನ್ನುಜಾರಿಗೊಳಿಸಿಲ್ಲ ಎಂದೂ ಚಾಟಿ ಬೀಸಿರುವುದಲ್ಲದೇ, ತಮ್ಮ ಇತ್ತೀಚಿನ ಎಲ್ಲಾ ಬಜೆಟ್ಗಳಲ್ಲೂ ಕೇಂದ್ರ ಸರ್ಕಾರದ ವಿರುದ್ಧ ತಗಾದೆ ಎತ್ತಿದಂತೆಯೇ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ ಎಂದು ಜರಿದಿರುವುದಲ್ಲದೇ ಮನ್ರೇಗಾ ಮರುಜಾರಿಗಾಗಿ ಕಾನೂನು ಹೋರಾಟ ಮಾಡುವುದಾಗಿ ಬಜೆಟ್‌ನಲ್ಲೇ ಹೇಳುವ ಮೂಲಕ ಕೇಂದ್ರದ ಜತೆಗೆ ಸಮರ ಮುಂದುವರಿಸಿದ್ದಾರೆ.

ಪಕ್ಷದೊಳಗೆ ಸಿಎಂ ಕುರ್ಚಿಗೆ ಟವೆಲ್ ಹಾಕಲು ಕಾದಿರುವ ಹಲವು ನಾಯಕರಿಗೆ ನಿರಾಶೆಯಾಗುವಂತೆ ಹೈಕಮಾಂಡ್ ಅವಕಾಶ ನೀಡಿದರೆ ಇನ್ನೂ ಎರಡು ಬಜೆಟ್ ಮಂಡಿಸುವೆ ಎನ್ನುವ ಮೂಲಕ ೨೦೨೮ರವರೆಗೆ ಕುರ್ಚಿ ಬಿಡಲ್ಲ ಎಂಬ ಮನದ ಇಂಗಿತ ವ್ಯಕ್ತಪಡಿಸುವ ಮೂಲಕ ಪಕ್ಷದ ನಾಯಕರ ಒಳ ಬೇಗುದಿ ಹೆಚ್ಚಿಸಿದ್ದಾರೆ.

” ಈ ಬಜೆಟ್ ಜನಕೇಂದ್ರಿತ ಬಜೆಟ್, ನಾಡಿನ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಕೇಂದ್ರಿತ ಬಜೆಟ್. ನಾಡಿನಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಧ್ಯಾನಿಸಿ ನಾವು ಈ ಬಜೆಟ್ಟನ್ನು ರೂಪಿಸಿದ್ದೇವೆ. ಹಾಗಾಗಿ ಈ ಬಜೆಟ್ ಕೇವಲ ಅಂಕಿಸಂಖ್ಯೆಗಳ ಆಟವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.”

 

 

Tags:
error: Content is protected !!