ಬಸ್ ಪ್ರಯಾಣ ದರವನ್ನು ಶೇ.೧೫ರಷ್ಟು ಹೆಚ್ಚಳ ಮಾಡುವುದರಿಂದ ಶೇ.೯೦ರಷ್ಟು ಪುರುಷ ನೌಕರರಿಗೆ ಅನುಕೂಲವಾಗಲಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೌಕರರ ವರ್ಗಕ್ಕೆ ಬಸ್ ಪ್ರಯಾಣ ದರ ಏರಿಕೆಯಾದರೆ ಅದು ಹೇಗೆ ಅನುಕೂಲವಾಗಲಿದೆ ಎಂದು ಸಚಿವ ಎಚ್.ಕೆ.ಪಾಟೀಲರೇ ತಿಳಿಸಬೇಕಿದೆ. ಸರ್ಕಾರ ದಿನದಿಂದ ದಿನಕ್ಕೆ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಇದರಿಂದಾಗಿ ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಸರ್ಕಾರ ಈ ಬೆಲೆ ಏರಿಕೆಯ ನೀತಿಯನ್ನು ಮುಂದುವರಿಸುತ್ತಿದ್ದರೆ ಕೂಲಿ ಕಾರ್ಮಿಕರು, ನೌಕರರು, ಮಧ್ಯಮ ವರ್ಗದ ಜನರು ಜೀವನ ಸಾಗಿಸುವುದಾದರೂ ಹೇಗೆ? ಸರ್ಕಾರ ಬಡಜನರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದರೆ ಗ್ಯಾರಂಟಿ ಯೋಜನೆಗಳನ್ನು ನೀಡಿಯೂ ಫಲವೇನು? ಹೀಗೆ ಸರ್ಕಾರ ಬೆಲೆ ಏರಿಕೆಯ ನೀತಿಯನ್ನು ಮುಂದುವರಿಸುತ್ತಾ ಹೋದರೆ ಮುಂದೊಂದು ದಿನ ಜನ ತಾಳ್ಮೆಗೆಟ್ಟು ಸರ್ಕಾರದ ವಿರುದ್ಧ ದಂಗೆ ಏಳುವ ಪ್ರಸಂಗ ಬಂದರೂ ಆಶ್ಚರ್ಯಪಡಬೇಕಾಗಿಲ್ಲ.
-ಎ.ಎಸ್.ಗೋಪಾಲಕೃಷ್ಣ, ರಾಮಕೃಷ್ಣನಗರ, ಮೈಸೂರು.





