ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಮಕ್ಕಳು ಬಿಸಿಲಿನಬೇಗೆಯಿಂದ ಪಾರಾಗಲು ಕೆರೆ, ಕಾಲುವೆ ಅಥವಾ ಬಾವಿಗಳಿಗೆ ಈಜಲು ಹೋಗುವುದು ಸಹಜವಾದರೂ, ನೀರಿನ ಆಳ, ಹರಿವು ಮತ್ತು ಸುಳಿಗಳ ಬಗ್ಗೆ ಅರಿವಿಲ್ಲದೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಸದಾ ಎಚ್ಚರದಿಂದಿರಬೇಕು ಮತ್ತು ಅವರು ಈಜಲು ಹೋದಾಗ ಮನೆಯ ಹಿರಿಯರೂ ಜೊತೆಗಿರಬೇಕು. ಕೇವಲ ಹೊರಗಿನ ಜಲಮೂಲಗಳಷ್ಟೇ ಅಲ್ಲದೆ, ಮನೆಯ ಒಳಗೂ ಪುಟ್ಟ ಮಕ್ಕಳು ಸಣ್ಣವಸ್ತುಗಳನ್ನು (ನಾಣ್ಯ, ಹೂವು, ಗುಂಡಿ, ಸಣ್ಣ ಆಟಿಕೆ) ನುಂಗದಂತೆ ಜಾಗ್ರತೆ ವಹಿಸಬೇಕು.
ಮಧ್ಯಾಹ್ನದ ಉರಿಬಿಸಿಲಿನಲ್ಲಿ ಮಕ್ಕಳನ್ನು ಹೊರಗೆ ಕಳುಹಿಸದೆ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಕಾಳಜಿ ವಹಿಸಬೇಕು. ಪೋಷಕರ ಜಾಗರೂಕತೆಯೇ ಮಕ್ಕಳಿಗೆ ನಿಜವಾದ ರಕ್ಷಾಕವಚ, ಈ ರಜೆಯ ಸಂಭ್ರಮವು ಕೇವಲ ಸಿಹಿಯಾದ ನೆನಪಿನ ಬುತ್ತಿಯಾಗಲಿ; ಎಂದಿಗೂ ನೋವಿನ ಅಧ್ಯಾಯವಾಗದಿರಲಿ. -ಬಿ. ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





