ದೇಶದ ವಿವಿಧ ನ್ಯಾಯಾಲಯಗಳಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕ ಹೊಂದಲು ಅಭ್ಯರ್ಥಿಗಳು ವಕೀಲರಾಗಿ ಕಡೆಯ ಪಕ್ಷ ಮೂರು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ನಿಯಮವನ್ನು ಪುನಃ ಜಾರಿಗೆ ತರಲು ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಸ್ವಾಗತಾರ್ಹವಾಗಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಸದೃಢಗೊಳಿಸುವ ಪ್ರಯತ್ನವಾಗಿದೆ.
ಮೂರು ವರ್ಷಗಳ ಕಾಲ ವಕೀಲರಾಗಿ ಕೆಲಸ ಮಾಡಿರಬೇಕೆಂಬ ನಿಯಮ 2002 ರವರೆಗೂ ಜಾರಿಯಲ್ಲಿತ್ತಾದರೂ ನಂತರ ಆ ನಿಯಮವನ್ನು ತೆಗೆದು ಹಾಕಲಾಯಿತು. ನ್ಯಾಯಾಧೀಶರ ಹುದ್ದೆ ಉನ್ನತ ಹಾಗೂ ಪವಿತ್ರವಾದ ಹುದ್ದೆಯಾಗಿದ್ದು, ಇಂತಹ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ನ್ಯಾಯಾಲಯದ ರೀತಿ ರಿವಾಜುಗಳ ಜೊತೆಗೆ ನ್ಯಾಯಾಲಯದ ನಿಯಮಗಳು, ಕಾನೂನಿನ ತಿಳಿವಳಿಕೆ ಹಾಗೂ ವಿಶೇಷವಾಗಿ ಕಾನೂನುಗಳನ್ನು ಅನ್ವಯಗೊಳಿಸುವ ಬಗ್ಗೆ ಹೆಚ್ಚಿನ ಪರಿಜ್ಞಾನ ಹೊಂದಿರಬೇಕು. ಪುಸ್ತಕಗಳಲ್ಲಿ ಅಥವಾ ಗ್ರಂಥಗಳಲ್ಲಿ ಏನೇ ಓದಿಕೊಂಡಿದ್ದರೂ , ವಕೀಲರಾಗಿ ನ್ಯಾಯಾಲಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳದ ಹೊರತು, ಅವರಿಗೆ ನ್ಯಾಯಾಂಗದ ಒಳ ಹೊರಗುಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಲಭ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಶೀರ್ವ ಗಮನಾರ್ಹವಾಗಿದೆ.
-ಕೆ.ವಿ ವಾಸು, ವಿವೇಕಾನಂದ ನಗರ, ಮೈಸೂರು





