ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಎಂಬುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅಭಿವೃದ್ಧಿಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿರುವ ಮೈಸೂರು ಮತ್ತೊಂದು ಆಯಾಮಕ್ಕೆ ತೆರೆದುಕೊಳ್ಳಲು ಎಂಡಿಎ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ.
ಆದರೆ, ಯಾವುದೇ ಪ್ರಾಧಿಕಾರಾ ಜನಸ್ನೇಹಿಯಾಗಿ ರೂಪುಗೊಳ್ಳಬೇಕು. ಅಂದರೆ ಜನಸಾಮಾನ್ಯರನ್ನೂ ಒಳಗೊಳ್ಳುವುದು ಅಗತ್ಯ. ಮುಖ್ಯವಾಗಿ ಬಡವರು ಹಾಗೂ ಬಡತನವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಗತಿ ಎಂಬುದು ಕೇವಲ ಪ್ರವಾಸಿಗರು, ಉದ್ಯಮಿಗಳು, ಕೈಗಾರಿಕೆಗಳು, ಶ್ರೀಮಂತರನ್ನು ಗುರಿಯಾಗಿ ಇಟ್ಟುಕೊಳ್ಳಬಾರದು. ಅದು ಒಪ್ಪತ್ತು ಊಟಕ್ಕೂ ಕಷ್ಟಪಡುವಂತಹ ಜನರ ಬದುಕಿಗೆ ದಾರಿದೀಪವಾಗಬೇಕು. ಈ ಜನರಿಗೆ ಊಟ, ವಸತಿ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಎಂಡಿಎ ಯೋಜನೆಗಳು, ಕಾರ್ಯಕ್ರಮಗಳು ಇರಬೇಕು.
ಎಂಡಿಎನಲ್ಲಿ ಜನಪರ ಕಾಳಜಿ ಇರುವ ತಜ್ಞರು, ಹೋರಾಟಗಾರರಿಗೂ ಅವಕಾಶ ನೀಡಬೇಕು. ಅದರಲ್ಲಿಯೂ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಇರುವಂತಹ ನಾಯಕರು ಹಾಗೂ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಸಂಯಮ ಇರುವಂತಹ ಅಧಿಕಾರಿಗಳು ಮೈಸೂರು ಅಭಿವೃದ್ಧಿಪ್ರಾಧಿಕಾರದಲ್ಲಿ ಇರುವಂತಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಂಭೀರ ಗಮನ ಹರಿಸಬೇಕು.
-ಆರ್. ವಿ. ಮಂಜುಳಾ, ಸರಸ್ವತಿಪುರಂ, ಮೈಸೂರು





