ಮೈಸೂರಿನ ವಿಜಯನಗರದ ವಾಟರ್ಟ್ಯಾಂಕ್ ವೃತ್ತ (ಡಾಲ್ಛಿನ್ ಬೇಕರಿ) ದಿಂದ ಸೂರ್ಯ ಬೇಕರಿವರೆಗೂ ಮುಖ್ಯರಸ್ತೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿಯೆಲ್ಲಾ ಬೊಗಳುತ್ತಾ ಎಲ್ಲರ ನಿದ್ರೆ ಹಾಳು ಮಾಡುತ್ತಿವೆ. ಮುಂಜಾನೆ ವಾಯುವಿಹಾರಿಗಳು, ಸಾಕು ನಾಯಿಯೊಂದಿಗೆ ವಾಕ್ ಮಾಡುವವರ ಮೇಲೆ ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ.
ವಿಜಯನಗರ ಮುಖ್ಯರಸ್ತೆಯಲ್ಲಿನ ಹೋಟೆಲೊಂದರ ಸಿಬ್ಬಂದಿ ಹೋಟೆಲ್ನ ಅಳಿದುಳಿದ ಮಾಂಸಾಹಾರವನ್ನು ಈ ನಾಯಿಗಳಿಗೆ ಹಾಕಿ ರೂಢಿ ಮಾಡಿರುವುದರಿಂದ ನಾಯಿಗಳು ಗುಂಪು ಗುಂಪಾಗಿ ಹೋಟೆಲ್ನ ಬಳಿಯೇ ಸುಳಿದಾಡುತ್ತಿರುತ್ತವೆ. ಈ ನಾಯಿಗಳನ್ನು ನಿಯಂತ್ರಣ ಮಾಡುವುದೇ ಹರಸಾಹಸವಾಗಿದೆ. ಮೈಸೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
– ಆರ್. ಯಶಸ್, ಮೈಸೂರು


