Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪ್ರಕೃತಿ-ಮನುಷ್ಯನ ಸಾವಯವ ಸಂಬಂಧದ ʼಬೆಳಕಿನ ಬೇಸಾಯʼ

-ರೂಪ ಹಾಸನ

ಹವಾಮಾನ ತುರ್ತು ಪರಿಸ್ಥಿತಿಯಲ್ಲಿ ಇಂದು ಜಗತ್ತು ಬೇಯುತ್ತಿದೆ. ಹಾಗಾಗಿ ಯಾವುದೇ ಹೆಸರಿನ, ರೀತಿಯ ನೈಸರ್ಗಿಕ ಕೃಷಿ ಪದ್ಧತಿಗಾದರೂ ಸರಿ ಸರ್ಕಾರದಿಂದ ಬೆಂಬಲ, ಅನುದಾನಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರುವ ಆಂದೋಲನ ತುರ್ತಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಅವಿನಾಶ್ ಅವರು ಬೆಳಕಿನ ಬೇಸಾಯದಲ್ಲಿ ಪ್ರಸ್ತಾಪಿಸಿರುವ ಫುಡ್ ಫಾರೆಸ್ಟ್- ಆಹಾರ ಬನ ಪರಿಕಲ್ಪನೆಯು, ರೈತನ ಆರ್ಥಿಕ ಸ್ವಾವಲಂಬನೆಗೆ ಪೂರಕವಾದೊಂದು ಮಾದರಿಯಷ್ಟೇ ಅಲ್ಲ ಅಪೌಷ್ಟಿಕತೆಯಿಂದ ನರಳುತ್ತಿರುವ ಹಳ್ಳಿಗಾಡಿನ ಬಡ ಸಮುದಾಯಕ್ಕೆ ಜೀವ ತುಂಬುವಂತಹದ್ದೂ ಆಗಬಹುದಾಗಿದೆ.

ಇಂದು ನಾವೊಂದು ವಿಷಮ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಅದರಲ್ಲೂ ದೇಶದ ೬೦%ರಷ್ಟು ಮಂದಿ ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರ ಅವನತಿಯ ಹಾದಿಯನ್ನು ತುಳಿದಿರುವ ದಾರುಣತೆ ನಮ್ಮ ಕಣ್ಣ ಮುಂದಿದೆ. ಕಳೆದ ಹದಿನೈದು ವರ್ಷಗಳಲ್ಲಿ ನಾಲ್ಕು ಲಕ್ಷದಷ್ಟು ರೈತರು ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು, ಬೇಸಾಯ ಬದುಕಿನ ತಲ್ಲಣದ ತೀವ್ರತೆಗೆ ಉದಾಹರಣೆಯಾಗಿದೆ. ಅದರಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳು, ಸರ್ಕಾರದ ನೀತಿ ನಿಯಮಗಳು, ಕೃಷಿಗಾಗಿ ವಿನಿಯೋಗಿಸಬೇಕಿರುವ ದುಬಾರಿ ಬಂಡವಾಳ, ಅಸಮರ್ಪಕ ಮಾರುಕಟ್ಟೆ ಹಾಗೂ ಶೀತಲಗೃಹಗಳ ಕೊರತೆ ಹಾಗೂ ನಿಗದಿತ ಬೆಲೆ ಇಲ್ಲದಿರುವುದು… ಹೀಗೆ ಹತ್ತು ಹಲವು ಕಾರಣಗಳಿವೆ. ಇಂದಿನ ತೀವ್ರ ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ಪರಿಣಾಮಗಳಾದ ತೀವ್ರ ಬರ, ಪ್ರವಾಹ, ಭೂ ಕುಸಿತ, ಗುಡ್ಡ ಕುಸಿತ, ಅಕಾಲಿಕ ಮಳೆ, ಅಕಾಲಿಕ ಚಳಿ, ಅಕಾಲಿಕ ಬೇಸಿಗೆ, ವನ್ಯ ಜೀವಿಗಳ ದಾಳಿ… ಹೀಗೆ ಬಹು ವಿಧಗಳಲ್ಲಿ ಬಲಿಪಶುಗಳಾಗುತ್ತಿರುವವರಲ್ಲಿ ಮೊದಲ ಸ್ಥಾನದಲ್ಲಿರುವುದು ರೈತ ಸಮುದಾಯ. ನಿಜಕ್ಕೂ ಇಂದು ನಾವು ಪರಿಸರ ತುರ್ತು ಪರಿಸ್ಥಿತಿುಂನ್ನು ಎದುರಿಸುತ್ತಿದ್ದೇವೆ. ಅದಕ್ಕೆ ೨೫%ರಿಂದ ೩೦%ದಷ್ಟು ಅವೈಜ್ಞಾನಿಕ ಮತ್ತು ಅನೈಸರ್ಗಿಕ ಕೃಷಿ ಪದ್ಧತಿ ಕೂಡ ಕಾರಣವಾಗಿದೆ. ವಿಪರೀತ ಪ್ರಮಾಣದಲ್ಲಿ ಕೃಷಿಯಲ್ಲಿ ಬಳಕೆಯಾಗುತ್ತಿರುವ ರಸಗೊಬ್ಬರ, ಕ್ರಿಮಿನಾಶಕ, ಕೀಟನಾಶಕದಂತಹ ವಿಷಗಳ ತಯಾರಿಕೆಯಿಂದ ಒಂದೆಡೆ ವಾಯುವಾಲಿನ್ಯ ಹೆಚ್ಚಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಅವುಗಳನ್ನು ಭೂಮಿಗೆ ಸುರಿದು, ಮಣ್ಣು ಸುಟ್ಟು ಹೋಗುತ್ತಿದೆ. ಇಂತಹ ದಾರುಣ ಸಂದರ್ಭವನ್ನು ಎದುರಿಸುವಂತಹ ರಚನಾತ್ಮಕ, ಕ್ರಿಯಾಶೀಲ ಪ್ರಯೋಗ ಅತ್ಯಂತ ಚಿಕ್ಕ ಪ್ರಮಾಣದ್ದಾದರೂ ಎಲ್ಲಿಂದಲಾದರೂ, ಯಾವುದೇ ರೂಪದಲ್ಲಿಯೇ ಕಂಡರೂ ಅದನ್ನು ಆತುಕೊಳ್ಳಬೇಕು. ಅಂತಹದ್ದೊಂದು ಆಶಾಕಿರಣ ಇತ್ತೀಚೆಗೆ ಬಿಡುಗಡೆಯಾದ ‘ಬೆಳಕಿನ ಬೇಸಾಯ’ ಪುಸ್ತಕದಲ್ಲಿದೆ. ಇದು ಕೃಷಿ ಸಿದ್ಧಾಂತವನ್ನು ನಿರೂಪಿಸುವ ಕೇವಲ ಜ್ಞಾನ ಅಥವಾ ವಿಜ್ಞಾನದ ಪುಸ್ತಕ ಅಲ್ಲ. ಅವಿನಾಶ್ ಎಂಬ ಉತ್ಸಾಹಿ, ಕ್ರಿಯಾಶೀಲ ಯುವ ರೈತ, ನಿಸರ್ಗಾಧಾರಿತ ಕೃಷಿಯ ಉಳಿವಿಗಾಗಿ ತನ್ಮೂಲಕ ಪ್ರಕೃತಿಯ ಉಳಿವಿಗಾಗಿ ಹಗಲಿರುಳೂ ತಪಿಸಿ, ಧ್ಯಾನಿಸಿ, ಹುಡುಕಾಟ ನಡೆಸಿ, ತಾನೇ ಸ್ವತಃ ಮಣ್ಣಿಗಿಳಿದು ಅನೇಕ ಪ್ರಯೋಗಗಳನ್ನು ಅನ್ವೇಷಣೆಗಳನ್ನು ಮಾಡುತ್ತಾ ಕಂಡುಕೊಂಡ ದರ್ಶನದ ಸಾರ.
ಅವಿನಾಶ್ ಕೇವಲ ಬೆಳಕಿನ ಬೇಸಾಯಕ್ಕಷ್ಟೇ ತಮ್ಮನ್ನು ಸೀಮಿತ ಮಾಡಿಕೊಂಡಿಲ್ಲ. ಅವರಿಗೆ ಇವತ್ತಿನ ಜಾಗತಿಕ ತಾಪವಾನ ಮತ್ತು ಹವಾವಾನ ವೈಪರೀತ್ಯದ ಪರಿಣಾಮಗಳ ತೀವ್ರತೆ ಮತ್ತು ಅದಕ್ಕೆ ವ್ಯಾಪಕ ಸಿದ್ಧತೆ ನಡೆಸಬೇಕಾದ ತುರ್ತು ಬಹಳ ಚೆನ್ನಾಗಿ ಅರ್ಥವಾಗಿದೆ. ಹೀಗಾಗಿ ಅವರು ಮುಂದಿನ ಹಂತದಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ‘‘ಜಾಗತಿಕ ತಾಪವಾನ ಮತ್ತು ಕೃಷಿ’’ ಕುರಿತ ಜಾಗೃತಿ ಸಮಾವೇಶವನ್ನು, ಸಂವಾದವನ್ನು ನಡೆಸುತ್ತಾ ಬಂದಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಶೀರ್ಷಿಕೆ ‘‘ನಮ್ಮ ಉಳಿವಿಗೆ ಸುಳಿವು ಹುಡುಕೋಣ’’ ಎಂದು! ನಿಜಕ್ಕೂ ನಾವು ಅರಿಯಬೇಕಾದ್ದು, ಅನುಸರಿಸಬೇಕಾದದ್ದು ಪ್ರಕೃತಿ ಧರ್ಮವನ್ನು ಮತ್ತು ಅಪಾರ ಜೀವ ಹಾಗೂ ಸಸ್ಯಗಳ ಜಾತಿ ವೈವಿಧ್ಯತೆಯನ್ನು! ಪ್ರಕೃತಿಯಲ್ಲಿ ಪ್ರತಿ ಕ್ಷಣವೂ ನಡೆಯುತ್ತಿರುವ ಅದ್ಭುತ ಪ್ರಕ್ರಿಯೆಗಳನ್ನು ಆಚರಣೆಗಳನ್ನು ನಾವೇನಾದರೂ ಅರ್ಥ ಮಾಡಿಕೊಳ್ಳುತ್ತಾ ಹೋದರೆ- ಅದೆಷ್ಟು ಬೆರಗು, ಕುತೂಹಲ, ವಿಸ್ಮಯ ಮತ್ತು ಹೊಸತನವನ್ನದು ನಮ್ಮಲ್ಲಿ ಮೂಡಿಸುತ್ತದೆ. ಜೊತೆಗೆ ಜೀವಿಗಳೆಲ್ಲಕ್ಕೂ ಇರುವ ಪರಸ್ಪರ ಅವಲಂಬನೆ ಮತ್ತು ಸಾವಯವ ಸಂಬಂಧದ ವ್ಯವಸ್ಥೆ ನಮಗೆ ಅರಿವಾಗುತ್ತಾ ಹೋಗುತ್ತದೆ.
ಜೀವ ವಿಕಸನ ಕ್ರಿಯೆಯಲ್ಲಿ ಮನುಷ್ಯ ತೀರಾ ಇತ್ತೀಚಿನ ಸೇರ್ಪಡೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಮನುಷ್ಯ ಜೀವಿುಯ ಉಗಮಕ್ಕೆ ಮೊದಲೇ ಇಲ್ಲಿ- ಸಹಸ್ರಾರು ಪ್ರಾಣಿ, ಪಕ್ಷಿ, ಕೀಟ, ಹುಳು, ಹುಪ್ಪಟೆಗಳ ಪ್ರಬೇಧಗಳು ಜನಿಸಿ ಜೀವಿಸಲಾರಂಭಿಸಿವೆ. ನಮಗೆ ಈ ಭೂಮಿ ಹಾಗೂ ಅದರ ಸಂಪನ್ಮೂಲಗಳು, ಸಕಲ ಜೀವ ಜಂತುಗಳ ಸಹಕಾರವಿಲ್ಲದಿದ್ದರೆ ಇಲ್ಲಿ ಬದುಕಲಿಕ್ಕೆ ಖಂಡಿತ ಸಾಧ್ಯವಿಲ್ಲ. ಆದರೆ ಅವನ್ನೆಲ್ಲ ಬೇಕಾಬಿಟ್ಟಿ ಬಳಸಿದ್ದು ಮತ್ತು ಅದರ ಮಹತ್ವವನ್ನು ನಿರ್ಲಕ್ಷಿಸಿದ್ದರಿಂದಲೇ ಇವತ್ತು ಭೂಮಿಯ ಸತ್ವ, ಪರಿಸರದ ಸತ್ವ ಎರಡೂ ನಾಶಗೊಂಡು ನಮ್ಮ ಪ್ರಾಕೃತಿಕ ವ್ಯವಸ್ಥೆ ಈ ತಳಾತಳದ ಹಂತಕ್ಕೆ ಬಂದು ನಿಂತಿದೆ. ಮತ್ತದನ್ನು ಈಗಲಾದರೂ ಶತಾಯಗತಾಯ ಸರಿಪಡಿಸಲಿಕ್ಕೆ ಹೇಗೆಲ್ಲಾ ಪ್ರಯತ್ನಿಸಬೇಕು ಎನ್ನುವ ಎಚ್ಚರವನ್ನು ಈ ‘ಬೆಳಕಿನ ಬೇಸಾಯʼ ಕೃತಿ ನಮಗೆ ಹಲವು ಆಯಾಮಗಳಲ್ಲಿ, ಸಮಗ್ರವಾಗಿ ಕಲಿಸುತ್ತಾ ಹೋಗುತ್ತದೆ.
ಮನುಷ್ಯ ಸಂಕುಲ, ಕೃಷಿಯನ್ನು ಪ್ರಾರಂಭಿಸಿದಾಗ ಮನುಷ್ಯ ಮತ್ತು ಭೂಮಿಯ ಸಂಬಂಧ ಹೇಗಿತ್ತು? ಅದು ಅತ್ಯಂತ ಸಹಜವಾಗಿತ್ತು ಮತ್ತು ನೈಸರ್ಗಿಕವಾಗಿತ್ತು. ಪ್ರಕೃತಿಯ ಸೂಕ್ಷ್ಮಗಳನ್ನು ಮನುಷ್ಯ ಜೀವಿಗೆ ಸ್ಪಂದಿಸುತ್ತಿತ್ತು. ಬಿತ್ತುವುದು ತಾನಾದರೂ, ಬೀಜವೊಂದು ಫಲವಾಗಬೇಕೆಂದರೆ ಗಾಳಿ, ನೀರು, ಬೆಳಕು, ಮಣ್ಣಿನ ಜೊತೆಗೆ- ಎರೆಹುಳು, ಜೇನುನೊಣ, ಸೂಕ್ಷ್ಮಾಣುಗಳನ್ನು, ಅನೇಕ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟದ ಸಾವಯವ ಸಮ್ಮಿಲನದಿಂದ ವಾತ್ರ ಸಾಧ್ಯ ಎಂಬ ಅರಿವಿತ್ತು. ಆದರೆ ನಾವು ಆಧುನಿಕರಾಗುತ್ತಾ ಪ್ರಕೃತಿಯಿಂದ ದೂರವಾಗುತ್ತಾ ಕೃತಕರಾಗುತ್ತಾ ಹೋದಂತೆ ಈ ಸತ್ಯಗಳೂ ನಮ್ಮಿಂದ ನಿಧಾನವಾಗಿ ಕಳಚಿಕೊಳ್ಳಲಾರಂಭಿಸಿತು. ಈಗಲೂ ಆದಿವಾಸಿಗಳಲ್ಲಿರುವ ಈ ಪ್ರಕೃತಿ ಜ್ಞಾನ ಅದ್ಭುತವಾದದ್ದು. ನಾವೀಗ ಮತ್ತೆ ಆ ಅರಿವನ್ನು ವಿಜ್ಞಾನದ ಮೂಲಕ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅವಿನಾಶ್‌ರ ಈ ‘ಬೆಳಕಿನ ಬೇಸಾಯ’ ಕೂಡ ಆ ಪ್ರಯತ್ನದ ಮುಂದುವರಿಕೆ. ಪ್ರಕೃತಿಯೊಂದಿಗೆ ಪ್ರೀತಿಯ ಒಡನಾಟವಿಲ್ಲದೇ ಕೃಷಿಯನ್ನು ಇವತ್ತು ಆಧುನಿಕತೆಯ ಹೆಸರಲ್ಲಿ ಯಾಂತ್ರಿಕವಾಗಿಸಿರುವ, ಶುಷ್ಕಗೊಳಿಸಿರುವ, ವಿಷಮಯಗೊಳಿಸುತ್ತಿರುವುದರ ರೂಪಕವಾಗಿದು ಕಾಣುತ್ತದೆ. ಕೃಷಿಯನ್ನು ಮತ್ತೆ ಪ್ರೀತಿಯ ಹಾದಿಗೆ ಕರೆತರುವ ಪ್ರಯತ್ನವಾಗಿ ಈ ‘ಬೆಳಕಿನ ಬೇಸಾಯ’ ಕಾಣುತ್ತಿದೆ.
ಉತ್ತರ ರಾಜಸ್ಥಾನದ ಲಾಪೋಡಿಯಾದ ಮರುಭೂಮಿ ಪ್ರದೇಶದ ರೈತ ಲಕ್ಮಣಸಿಂಗ್‌  ಅವರು, ನಾಲ್ಕು ದಶಕದ ಹಿಂದೆ ಆ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ ಮಾದರಿಯೊಂದನ್ನು ರೂಪಿಸಿ, ಬರ ಹಾಗೂ ನೆರೆಯನ್ನು ಏಕಕಾಲಕ್ಕೆ ನಿಯಂತ್ರಿಸಿ ಇತಿಹಾಸ ನಿರ್ಮಿಸಿದರು. ಈ ಊರಿನ ಯುವಕರನ್ನು ಸಂಘಟಿಸಿ ಅಕ್ಕಪಕ್ಕದ ೨೦ ಗ್ರಾಮಗಳ ೩೧ ಕೆರೆಗಳನ್ನು ಜೋಡಿಸಿದರು. ಇದರಿಂದ ಸುತ್ತಲ ೩೫೦ ಹಳ್ಳಿಗಳಿಗೆ ನೀರುಣಿಸಲು ಸಾಧ್ಯವಾಯಿತು. ತನ್ಮೂಲಕ ಬರಡು ಮರುಭೂಮಿಯು ಹಳ್ಳಿಗಳಲ್ಲಿ ಹಸಿರು ಸೃಷ್ಟಿಸಿದ್ದೊಂದು ಸಾಹಸ ಗಾಥೆ. ಇದು ಪವಾಡವಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು.
ಬಹುಶಃ ಅವಿನಾಶ್‌ರ ತೀವ್ರ ಹುಡುಕಾಟ, ಅದಮ್ಯ ಕನಸು ಈ ರೀತಿಯದೇ ಎನಿಸುವುದಕ್ಕೆ ‘ಬೆಳಕಿನ ಬೇಸಾಯ’ ಕೃತಿಯಲ್ಲಿ ಹಲವು ಸುಳುಹುಗಳಿವೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾದ ಈ ಪುಸ್ತಕವನ್ನು ಕೊಳ್ಳಲು ಬಯಸುವವರು ದೂ.ಸಂ. ೯೪೪೯೧೭೪೬೬೨ ಸಂಪರ್ಕಿಸಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ