ಗಂಡನ ಜತೆ ಸೇರಿ ತಾಯಿಯನ್ನೇ ಕೊಲೆ ಮಾಡಿ ರಾತ್ರೋರಾತ್ರಿ ಶವ ಹೂತಿಟ್ಟ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಾರದಮ್ಮ(50) ಮೃತ ಮಹಿಳೆ. ಶಾರದಮ್ಮ ತಮ್ಮ ಮಗಳು ಅನುಷಾಳನ್ನು ಮೈಸೂರಿನ ಹಾರೋಹಳ್ಳಿಯ ದೇವರಾಜ್ ಎಂಬಾತನಿಗೆ ಮದುವೆ ಮಾಡಿದ್ದರು.
ಒಬ್ಬಳೇ ಮಗಳಾದ ಕಾರಣ ಶಾರದಮ್ಮ ಆಗಾಗ ಅಳಿಯನ ಮನೆಗೆ ತೆರಳಿ ಮಗಳ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದರು. ಹೀಗೆ ನವೆಂಬರ್ 2022ರಲ್ಲಿ ಮಗಳ ಮನೆಗೆ ತೆರಳಿದ್ದ ಶಾರದಮ್ಮ ಜಗಳದಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ಮಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೀಗೆ ಹಾರೋಹಳ್ಳಿಯಲ್ಲಿ ಸತ್ತ ತಾಯಿಯನ್ನು ಅನುಷಾ ಹಾಗೂ ದೇವರಾಜ್ ಹಾರೋಹಳ್ಳಿಯಿಂದ ಹೆಬ್ಬಕವಾಡಿಗೆ ತಂದು ಗುಟ್ಟಾಗಿ ಹೂತುಹಾಕಿದ್ದಾರೆ.
ಬಳಿಕ ಆರೇಳು ತಿಂಗಳು ಸುಮ್ಮನಿದ್ದ ಮಗಳು 2023ರ ಜೂನ್ ತಿಂಗಳಿನಲ್ಲಿ ತನ್ನ ತಾಯಿ ಕಾಣೆಯಾಗಿರುವುದರ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಇಷ್ಟು ದಿನಗಳ ಕಾಲ ಹುಡುಕಿದರೂ ಪ್ರಯೋಜನೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ಮಗಳು ಹಾಗೂ ಅಳಿಯನನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ. ನಂತರ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದು, ಆರೋಪಿಗಳು ಶವ ಹೂತಿಟ್ಟ ಜಾಗವನ್ನು ತೋರಿಸಿದ್ದು ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಗೊಂಡಿದೆ.