ಹನೂರು: ಪಟ್ಟಣದಿಂದ ಅಜ್ಜಿಪುರ- ರಾಮಾಪುರ ರಸ್ತೆಯ ಮಾರ್ಗ ಮಧ್ಯದ ಅರಕನಹಳ್ಳ ಬಳಿ ಹಾಡಹಗಲೇ ಕಾಡು ಆನೆಗಳು ರಸ್ತೆ ಸಮೀಪವೆ ಆಗಮಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಆಗಮಿಸಿದ 5 ಕಾಡಾನೆಗಳು ರಸ್ತೆಯನ್ನು ದಾಟಿದ್ದು, ಈ ಸಮಯದಲ್ಲಿ ಎರಡೂ ಬದಿಗಳಲ್ಲಿ ಬೈಕ್ ಸವಾರರು ಹಾಗೂ ವಾಹನಗಳಲ್ಲಿದ್ದವರು ಕುತೂಹಲದಿಂದ ವಿಡಿಯೋ ಮಾಡಿದ್ದಾರೆ. ಇನ್ನೂ ಕೆಲವರು ಆತಂಕದಲ್ಲಿ ಆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಸಂಬಂಧ ಅಜ್ಜಿಪುರ ಗ್ರಾಮದ ನಿವಾಸಿಗಳು ಮಾತನಾಡಿ, ಹಾಡಹಗಲೇ ಕಾಡಾನೆಗಳು ಮುಖ್ಯ ರಸ್ತೆಯಲ್ಲಿ ಓಡಾಡಿರುವುದು ಭಯ ಉಂಟುಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಸೇರಿದಂತೆ ಇನ್ನಿತರ ಪ್ರಾಣಿಗಳು ರಸ್ತೆ ಭಾಗಕ್ಕೆ ಬಾರದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.





