ವಿರಾಜಪೇಟೆ: ಅರಣ್ಯದ ಅಂಚಿನಲ್ಲಿ ವಾಸಮಾಡುವ ನಿವಾಸಿಗಳಿಗೆ ಅರಣ್ಯ ಕಾಯ್ದೆ ಅನ್ವಯ ಕೃಷಿ ಮಾಡಲು ಸ್ಥಳವನ್ನು ನೀಡಿದ್ದರೂ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ನಿವಾಸಿಗಳಿಗೆ ವೈಯಕ್ತಿಕ ಪಹಣಿ ಪತ್ರವನ್ನು ನೀಡಬೇಕು ಎಂದು ಶಾಸಕರಾದ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಚೆನ್ನಯ್ಯನಕೋಟೆ ಮತ್ತು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಅಂಚಿನಲ್ಲಿ ವಾಸ ಮಾಡುವ ನಿವಾಸಿಗಳಿಗೆ ವೈಯಕ್ತಿಕ ಪಹಣಿ ಪತ್ರ (ಆರ್.ಟಿ.ಸಿ.) ಹಾಗೂ ಕೃಷಿಗಾಗಿ ಬಳಸಲು ೧೦ ಹೆಚ್.ಪಿ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಗ್ರಾಪಂ ಸದಸ್ಯರಾದ ಜೆ.ಕೆ.ಅಪ್ಪಾಜಿ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಅರಣ್ಯ ಹಕ್ಕು ಅಧಿನಿಯಮದಂತೆ ಅರಣ್ಯ ಅಂಚಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಕಂದಾಯ ಇಲಾಖೆಯಿಂದ ನೀಡಿರುವ ಪಹಣಿ ಪತ್ರದಲ್ಲಿ ಸಾಮೂಹಿಕವಾಗಿ ಕುಟುಂಬಗಳನ್ನು ಒಳಗೊಂಡ ಹಕ್ಕುಪತ್ರಗಳನ್ನು ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಎಲ್.ಶೋಭ, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಎ. ಜಯಮ್ಮ, ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕರಾದ ಜೆ.ಕೆ.ಅಣ್ಣಯ್ಯ, ಚಿಕ್ಕರೇಷ್ಮಯ್ಯ, ಪಿ.ಎಸ್.ಕಾಶಿ, ಪಿ.ರವಿ, ಪಿ.ಎಂ.ಮಲ್ಲ, ಪಾಪಣ್ಣ ಹಾಜರಿದ್ದರು.





