ಮೈಸೂರು: ಸಹಕಾರ ಕ್ಷೇತ್ರದ ಮೂಲಕ ಸಾವಿರಾರು ಜನರಿಗೆ ಉದ್ಯೋಗ, ಲಕ್ಷಾಂತರ ರೈತರಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ಎಲ್ಲಾ ವಲಯದಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ. ಸಹಕಾರ ಇದ್ದರೆ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗುತ್ತವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಹಕಾರ ಇಲಾಖೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಅನೇಕ ಯೋಜನೆಗಳು ರೂಪಿಸುತ್ತಿದೆ. ಈ ವರ್ಷ 33 ಲಕ್ಷ ರೈತರಿಗೆ ವಿಶೇಷವಾಗಿ 3 ಲಕ್ಷ ಹೊಸ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ರೈತರ ಸಾಲಮನ್ನಾಕ್ಕಾಗಿ 5700 ಕೋಟಿ ರೂ. ಹಣ ಬಿಡುಗಡೆ ಮಾಡಿದರು. ಅಲ್ಪಸ್ವಲ್ಪ ಸಾಲಮನ್ನಾ ಬಾಕಿಯಿದ್ದು ಡಿಸೆಂಬರ್ ಒಳಗೆ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದರು. ರಾಜ್ಯದ 21 ಡಿಸಿಸಿ ಬ್ಯಾಂಕುಗಳು ಲಾಭದಲ್ಲಿವೆ. ರೈತರಿಗೆ ಸಾಲಸೌಲಭ್ಯ ಕಲ್ಪಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಾಲ ವಿತರಣೆ ಜೊತೆಗೆ ಸಾಲ ಮರುಪಾವತಿ ಕೂಡ ಉತ್ತಮವಾಗಿ ಆಗುತ್ತಿದೆ ಎಂದರು.
ಕೆಲವೊಂದು ಸಕ್ಕರೆ ಕಾರ್ಖಾನೆಗಳಿಂದ ಸಾಲ ಬಾಕಿಯಿದೆ. ಕೆಲವರು ಬಡ್ಡಿ ಕಟುತ್ತಿದ್ದಾರೆ, ಮತ್ತೆ ಕೆಲವರು ಅಸಲು ಬಡ್ಡಿ ಕಟ್ಟುತ್ತಿದ್ದಾರೆ. ಆದರೆ ಕೆಲವು ಬುದ್ಧಿವಂತ ರಾಜಕಾರಣಿಗಳು ಅಸಲು, ಬಡ್ಡಿ ಎರಡೂ ಕಟ್ಟುತ್ತಿಲ್ಲ. ಅವರಿಗೆ ಅಧಿಕಾರಿಗಳು ಚುರುಕು ಮುಟ್ಟಿಸುವ ಕೆಲಸ ಮಾಡಲ್ಲ. ಸಾಲ ವಸೂಲಾತಿಯಲ್ಲಿ ತಾರತಮ್ಯ ಇರಬಾರದು ಎಂದು ಹೇಳಿದರು.
ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ನಿಂದ 1270 ಕೋಟಿ ರೂ. ಹಣ ವಂಚನೆ ಆಗಿದೆ. ವಂಚಕರಿಗೆ ಕೋರ್ಟ್, ಜೈಲು ಮಾಮೂಲಾಗಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಕಾನೂನು ರೂಪಿಸುವ ಪರಿಸ್ಥಿತಿ ಬಂದಿದೆ. ಆರ್ ಬಿಐ ಕೂಡ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ, ಎಚ್.ವಿಶ್ವನಾಥ್ ಅವರು ಸಹಕಾರ ಸಚಿವರಾಗಿದ್ದಾಗ ಯಶಸ್ವಿನಿ ಯೋಜನೆ ಜಾರಿಗೆ ತರಲಾಯಿತು. ಆದರೆ ಯಶಸ್ವಿನಿ ಯೋಜನೆ ತೆಗೆಯಲು ಕೆಲವರು ಹುನ್ನಾರ ನಡೆಸಿದರು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಯಶಸ್ವಿನಿ ರದ್ದುಪಡಿಸದಂತೆ ಮನವಿ ಮಾಡಲಾಯಿತು. ಆದರೆ ಅಂದಿನ ಆರೋಗ್ಯ ಸಚಿವರು ಯಶಸ್ವಿನಿ ಯೋಜನೆ ರದ್ದು ಮಾಡಿದರು. ರಾಜ್ಯದಾದ್ಯಂತ ಪ್ರವಾಸ ಮಾಡಿದ ಸಂದರ್ಭದಲ್ಲಿ ಯಶಸ್ವಿನಿ ಜಾರಿಗೆ ಒತ್ತಾಯ ಕೇಳಿಬಂದಿತು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬಳಿಕ ಬಜೆಟ್ ನಲ್ಲಿ ಯೋಜನೆ ಘೋಷಿಸಿದರು. ಈ ಯೋಜನೆಗೆ ನ.14ರಂದು ಮುಖ್ಯಮಂತ್ರಿಗಳು ಕಲಬುರಗಿಯಲ್ಲಿ ಚಾಲನೆ ನೀಡಿದರು. ಈಗಾಗಲೇ 1 ಲಕ್ಷ ನೋಂದಣಿ ಆಗಿದ್ದು, ಇನ್ನೊಂದು ವಾರದಲ್ಲಿ ಎರಡು ಲಕ್ಷ ನೋಂದಣಿ ಆಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಸಿಎಂ ಮುತುವರ್ಜಿ ವಹಿಸಿದರು. ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಗೆ ಆರ್ ಬಿಐ ಅನುಮತಿ ನೀಡಿಲ್ಲ. ನ.25ಕ್ಕೆ ಸಭೆಯಿದೆ. ಅಲ್ಲಿ ಒಪ್ಪಿಗೆ ಸಿಕ್ಕರೆ ಶೀಘ್ರದಲ್ಲೇ ಬ್ಯಾಂಕ್ ಆರಂಭವಾಗಲಿದೆ. ಇದರಿಂದ ಹಾಲು ಪೂರೈಕೆ ಮಾಡುವವರಿಗೆ ಸಾಲಸೌಲಭ್ಯ ಸಿಗಲಿದೆ ಎಂದು ಹೇಳಿದರು.
ಜಿ.ಟಿ.ದೇವೇಗೌಡ ಅವರು ಸಹಕಾರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡಿಲ್ಲ
ಸಹಕಾರ ಮಹಾಮಂಡಳ ಮಾತೃ ಸಂಸ್ಥೆಯಾಗಿದ್ದು ಇದನ್ನು ಬೆಳೆಸಲು ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಜಿ.ಟಿ.ದೇವೇಗೌಡ ಅಧ್ಯಕ್ಷರಾದರೆ ಮಹಾಮಂಡಳದ ಬೆಳೆಯುತ್ತದೆ ಎಂದು ಚುನಾವಣೆ ನಿಲ್ಲಲು ಒತ್ತಡ ಹಾಕಿದೆವು. ರಾಜಕೀಯ ಉದ್ದೇಶದಿಂದ ನಾನಿರುವ ಸಹಕಾರಿ ಸಂಸ್ಥೆಗಳ ಮೇಲೆ ಸಿಐಡಿ ತನಿಖೆ ಮಾಡಿಸಿದರು. ಆದರೆ ನಾನು ಸಹಕಾರ ಸಚಿವರಾದ ಬಳಿಕ ಯಾವ ಸಹಕಾರಿಗೂ ತೊಂದರೆ ಮಾಡಿಲ್ಲ ಎಂದರು.
ಹಾಲಿನ ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅವರು ಕೆಎಂಎಫ್ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಹಿರಿಯ ಸಹಕಾರಿಗಳನ್ನು ಗೌರವಿಸಲಾಯಿತು. ಇದೇ ವೇಳೆ ಸಹಕಾರ ವಾರಪತ್ರಿಕೆಯನ್ನು ಕೂಡ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷರಾದ ಎಚ್.ವಿ.ರಾಜೀವ್, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ, ಮೈಮುಲ್ ಅಧ್ಯಕ್ಷರಾದ ಪಿ.ಎಂ.ಪ್ರಸನ್ನ, ಮೇಯರ್ ಶಿವಕುಮಾರ್, ವಿಧಾನಪರಿಷತ್ ಸದಸ್ಯರಾದ ಮಧು ಮಾದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.





