Mysore
29
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮಾನಸಿಕ ಅಸ್ವಸ್ಥರಿಗೆ ಬೇಕಿದೆ ಮಾನವೀಯ ನೆಲೆ

ಕೋವಿಡ್ ನಂತರ ಸ್ಥಿತಿ ಗಂಭೀರ: ಸಮೀಕ್ಷೆ ಕೈಗೊಳ್ಳಲು ಸಲಹೆ

ಪ್ರಶಾಂತ್ ಎಸ್ ಮೈಸೂರು.

ಮೈಸೂರು: ಬಾಳ ಪಯಣದ ಹಾದಿಯಲ್ಲಿ ಅಲ್ಲಲ್ಲಿ ನೂರಾರು ನಿಲ್ದಾಣ ಅನ್ನೋ ಹಾಗೆ ಈ ಮಾನಸಿಕ ಅಸ್ವಸ್ಥರ ಬದುಕು. ಒಂದು ಕಾಲದಲ್ಲಿ ತಮ್ಮ ಕುಟುಂಬದೊಂದಿಗೆ ಕಷ್ಟ ಸುಖಗಳನ್ನು ಹಂಚಿಕೊಂಡು ಜೀವನ ಮಾಡುತ್ತಿದ್ದು ಸೂಕ್ತ ನೆಲೆ ಇಲ್ಲದೇ ಹೆದ್ದಾರಿ, ರಸ್ತೆ ಬದಿಗಳಲ್ಲಿಯೇ ಕಂಡು ಬರುತ್ತಿದ್ದಾರೆ.

ಹೆದ್ದಾರಿಯ ಪಕ್ಕದಲ್ಲಿರುವ ಮರಗಳನ್ನೇ ಇವರು ಆಶ್ರಯವನ್ನಾಗಿಸಿಕೊಂಡಿದ್ದು ಮಳೆ, ಗಾಳಿ, ಚಳಿ, ಎನ್ನದೇ ಮೈ ನಡುಗುತ್ತ ಪ್ರಜ್ಞೆ ಇಲ್ಲದೇ ಅಸಹಾಯಕತೆಯಿಂದ ಇದ್ದಾರೆ. ಇವರಿಗೆ ಕುಡಿಯಲು ನೀರು ಕೂಡ ಸರಿಯಾಗಿ ದೊರಕದೇ ಹಸಿವನ್ನು ತಾಳಲಾರದೇ ಅದನ್ನು ಹೇಳಿಕೊಳ್ಳಲು ಆಗದೇ ಇರುವಂತಹ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು ಪುಟ್ಟ ಮಕ್ಕಳಂತೆ ಕಣ್ಣೀರು ಹಾಕುವುದನ್ನು ನೋಡುತ್ತಿದ್ದರೆ ಎಂತಹವರ ಕರುಳು ಚುರುಕೆನ್ನುತ್ತದೆ. ಶುಭ್ರವಿಲ್ಲದ ಬಟ್ಟೆ, ತಮ್ಮ ದೇಹದ ಕೆಲವೆಡೆ ಗಾಯಗಳಿಂದ ಕೂಡಿತ್ತಾದರೂ ಅದರ ಅರಿವಿಲ್ಲದೇ ಯಾರಾದರು ಪ್ರವಾಸಿಗರು, ದಾರಿಹೋಕರು ಅಸ್ವಸ್ಥರನ್ನು ಗಮನಿಸಿ ತಿನ್ನುವುದಕ್ಕೆ ಏನಾದರೂ ಕೊಟ್ಟರೆ ಮುಗುಳ್ನಗೆ ಬೀರಿ ಅಲ್ಲಿಂದ ಓಡಿಹೋಗಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಾರೆ .
ಮೈಸೂರು ಮಾನಂದವಾಡಿ, ಮಡಿಕೇರಿ, ಬೆಂಗಳೂರು ಹೆದ್ದಾರಿ ಬದಿ ಗಮನಿಸಿದರೆ ಹಲವು ಕಡೆ ಇಂತವರ ಕಂಡು ಬರುತ್ತಾರೆ.ಕೊಳ್ಳೇಗಾಲ ನಗರದ ಜತೆಗೆ ಹಲವು ನಗರ ಪ್ರದೇಶಗಳಲ್ಲೂ ಹೀಗೆ ನೆಲೆ ಇಲ್ಲದೇ ಅಲೆಯುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ದೂರು ನೀಡಿದ್ದಾರೆ. ಪ್ರತಿದಿನ ಇಂತಹ ಮಾನಸಿಕ ಅಸ್ವಸ್ಥರು ರಾತ್ರೊ ರಾತ್ರಿ ಕಾಣಿಸಿಕೊಳ್ಳುತ್ತಿದ್ದು ಇವರು ಯಾರು ಎಲ್ಲಿಂದ ಬಂದವರು ಎಂಬ ಮಾಹಿತಿ ಊಹೆಗೂ ನಿಲುಕದಂತಿದೆ.

ಸಂಬಂಧಪಟ್ವ ಇಲಾಖೆ ಏನು ಮಾಡುತ್ತಿದೆ: ಮೈಸೂರು ನಗರವೂ ಸೇರಿ ಜಿಲ್ಲೆಯ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪುನರ್ವಸತಿ ಕಾರ್ಯಕರ್ತರ ಮೂಲಕ ಹುಣಸೂರು, ಪಿರಿಯಾಪಟ್ಟಣ,ಎಚ್‌ ಡಿ ಕೋಟೆ,ಕೆ ಆರ್‌ ನಗರ, ನಂಜನಗೂಡಲ್ಲಿ ಕಂಡುಬರುವ  ಮಾನಸಿಕ ಅಸ್ವಸ್ಥರನ್ನು ಆಸ್ಛತ್ರೆಗೆ ಸೇರಿಸುವ ಕೆಲಸ ಮಾಡುತ್ತಿವೆ. ಮಾನಸಿಕ ಅಸ್ವಸ್ಥರನ್ನು ಗುರುತಿಸಿ ನಮ್ಮಂತೆ ಮನುಷ್ಯರೇ ಎಂದು ಇವರಿಗೊಂದು ಬದುಕು ಕಟ್ಟಿಕೊಡುವ ಕೆಲಸವನ್ನು ವಿಕಲಚೇತನರ ಕಲ್ಯಾಣ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎನ್ನುವುದು ಪ್ರಜ್ಞಾವಂತರ ಸಲಹೆ.

ಈ ಕುರಿತು ವಿಕಲಚೇತನರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಾಲಿನಿ ಅವರನ್ನು ಮಾತನಾಡಿಸಿದರೆ, ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿರುವ ಮಾಹಿತಿ ಇದೆ. ಇಂತಹವರು ಕಂಡ ತಕ್ಷಣ ಸ್ಥಳೀಯ ಪೊಲೀಸ್‌ಗೆ ಮಾಹಿತಿ ನೀಡಿದರೆ ತಕ್ಷಣ ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಮಾನಸಿಕ ಆಸ್ಪತ್ರೆಗೆ ಸೂಚನೆ ನೀಡುತ್ತೇವೆ. ನಿರ್ಗತಿಕ ಮಾನಸಿಕ ಅಸ್ವಸ್ಥರಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ ಎಂದು ವಿವರಿಸುತ್ತಾರೆ.

ಇಂತಹುದೇ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಕ್ರೆಡಿಟ್ ಐ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪಿ. ವರ್ಷ ಅವರು ಸಮಸ್ಯೆ ಆಳವನ್ನು ಬಿಚ್ಚಿಡುತ್ತಾರೆ. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಓಡಾಡುವ ಮಾನಸಿಕ ಅಸ್ವಸ್ಥರು ನೆಲೆಯಿಲ್ಲದೇ ಸಿಕ್ಕಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರ ಪರಿಸ್ಥಿತಿಯನ್ನು ಗಮನಿಸಿ ದಾರಿಹೋಕರು ಊಟ, ತಿಂಡಿ, ನೀರು ನೀಡಿ ಮಾನವೀಯತೆ ತೋರುತ್ತಿದ್ದಾರೆ. ಕೋವಿಡ್ ನಂತರ ಮಾನಸಿಕ ತೊಂದರೆಗೆ ಒಳಗಾದವರ ಪ್ರಮಾಣ ಹೆಚ್ಚಿದೆ. ಆದರೆ ನಿಖರ ಮಾಹಿತಿಗೆ ಸಮೀಕ್ಷೆ ಕೈಗೊಳ್ಳಬೇಕಿದೆ. ಜಿಲ್ಲಾಡಳಿತಗಳು ಹಾಗೂ ವಿಕಲಚೇತನರ ಕಲ್ಯಾಣರ ಇಲಾಖೆಗಳು ಇನ್ನೂ ಹೆಚ್ಚಿನ ಗಮನ ನೀಡಬೇಕು ಎನ್ನುತ್ತಾರೆ.


ಮಾನಸಿಕ ಅಸ್ವಸ್ಥರ ಬಗ್ಗೆ ಸಂಬಂಧಪಟ್ಟವರಿಗೆ ಪೋನ್ ಮುಖಾಂತರ ಮಾಹಿತಿ ನೀಡಿದ್ದೇನೆ. ಅದರ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನಹರಿಸಿ ಈ ಅಸ್ವಸ್ಥರು ಯಾರು ? ಎಲ್ಲಿಂದ ಬಂದವರು? ಎಂಬುದನ್ನು ತಿಳಿದು ಅವರಿಗೆ ಸೂಕ್ತ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಬೇಕು ಮಾಡಬೇಕು.

– ಬೆಟ್ಟನಾಯಕ, ಸವ್ವೆ.


ಮಾನಸಿಕ ಅಸ್ವಸ್ಥರನ್ನು ನಿರಾಶ್ರಿತರೆಂದು ಪರಿಗಣಿಸುತ್ತೇವೆ. ಇಂತಹ ವ್ಯಕ್ತಿಗಳು ಕಂಡುಬಂದಲ್ಲಿ 2017 ರ ಕಾಯಿದೆ ಪ್ರಕಾರ ಇವರನ್ನು ಆಸ್ಪತ್ರೆಗೆ ಪೊಲೀಸರು ಸೇರಿಸುತ್ತಾರೆ.ಅಯಾ ಸಿಬ್ಬಂದಿಗಳು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಮಾನಸಿಕ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಜಿಲ್ಲೆ ಹಾಗೂ ನಗರದಾದ್ಯಂತ ಕೆಆರ್ ಆಸ್ಪತ್ರೆ , ಜಿಲ್ಲಾ ಆಸ್ಪತ್ರೆ ಸೇರಿದಂತೆ ೨೦ಕ್ಕೂ ಹೆಚ್ಚು ಮಾನಸಿಕ ಹೆಲ್ತ್ ಕೇರ್ ಸೆಂಟರ್‌ಗಳಿದ್ದು ಪ್ರಸ್ತುತ 100ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ..

-ಡಾ. ಬಿ.ಎನ್. ರವೀಶ್, ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಮನೋವೈದ್ಯ ವಿಭಾಗ ಕೆ ಆರ್ ಆಸ್ಪತ್ರೆ, ಮೈಸೂರು


ಜಿಲ್ಲೆಯಲ್ಲಿ ಕೋವಿಡ್ ನಂತರ 100ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರಿಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖರಾಗುವ ಹಂತದಲ್ಲಿರುವ 15 ಅಸ್ವಸ್ಥರನ್ನು ಅವರ ವಿಳಾಸ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದ್ದು ನಂತರ ಅವರ ಮನೆಗೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ.

– ಮಾಲಿನಿ. ಜಿಲ್ಲಾ ಅಧಿಕಾರಿ, ವಿಕಲಚೇತನರ ಕಲ್ಯಾಣ ಇಲಾಖೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ