ಅರಿವಳಿಕೆ ಪ್ರಯೋಗ ಮಾಡಿದರೂ ತಪ್ಪಿಸಿಕೊಂಡ ಹುಲಿರಾಯ
ಸಿದ್ದಾಪುರ: ವಿರಾಜಪೇಟೆಯ ಸಿದ್ದಾಪುರದಲ್ಲಿ ಜಾನುವಾರು ಭಕ್ಷಕ ಹುಲಿ ಇಂದು ಸೆರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಅರಿವಳಿಕೆ ಇಂಜೆಕ್ಷನ್ ಚುಚ್ಚಿಸಿಕೊಂಡರೂ ಓಡಿ ಮತ್ತೆ ಕಾಡು ಸೇರಿದೆ.
ಈ ಭಾಗದಲ್ಲಿ ಈಗಾಗಲೇ ನಾಲ್ಕು ಹಸುಗಳನ್ನು ಬಲಿ ಪಡೆದಿರುವ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ನಾಲ್ಕೈದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶುಕ್ರವಾರ ಹುಲಿ ಬಾಡಗ ಬಾಣಂಗಾಲ ಗ್ರಾಮದ ಘಟ್ಟಗಳ ಸಮೀಪ ಹುಲಿಯು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು. ನಾಲ್ಕು ಸಾಕಾನೆಗಳ ನೆರವಿನಿಂದ ಅರಣ್ಯ ಸಿಬ್ಬಂದಿಗಳು ಸೇರಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಹುಲಿಯು ಪತ್ತೆಯಾಯಿತು. ಕೂಡಲೇ ವನ್ಯ ಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಹಾಗೂ ಶೂಟರ್ ಕನ್ನಂಡ ರಂಜನ್ ಸೇರಿ ಹುಲಿ ಮೇಲೆ ಅರಿವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು. ಆದರೆ ಚುಚ್ಚು ಮದ್ದಿನ ಪ್ರಭಾವಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ಬೀಳದೆ ಹುಲಿಯು ತಪ್ಪಿಸಿಕೊಂಡು ಮುಖ್ಯ ರಸ್ತೆಯ ಮೂಲಕ ಸಾಗಿ ಸಮೀಪದ ಮಾಲ್ದಾರೆ ವ್ಯಾಪ್ತಿಯ ಅರಣ್ಯ ಪ್ರದೇಶ ಸೇರಿಕೊಂಡಿದೆ.
ಕಾರ್ಯಾಚರಣಾ ತಂಡದವರು ಸುಮಾರು ದೂರದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಹುಲಿಯನ್ನು ಸೆರೆ ಹಿಡಿಯಲು ಕೆಸರಿನ ಮಧ್ಯೆ ಶತಾಯಗತಾಯ ಪ್ರಯತ್ನ ನಡೆಸಿದರು. ಆದರೆ ಹುಲಿಯು ತನ್ನ ವೇಗವನ್ನು ಹೆಚ್ಚಿಸಿಕೊಂಡು ಕಣ್ಮರೆಯಾಯಿತು. ಕಾರ್ಯಾಚರಣೆ ತಂಡವು ಹುಲಿಯನ್ನು ಹಿಂಬಾಲಿಸಿಕೊಂಡು ಬಹು ದೂರದವರೆಗೆ ಹೋದರೂ ಕೂಡ ಹುಲಿಯು ಪತ್ತೆಯಾಗದೇ ನಾಪತ್ತೆಯಾಗಿದೆ. ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಹಾಗೂ ಘಟ್ಟದಳದ ಕಾಫಿ ತೋಟಗಳಲ್ಲಿ ಈ ಹುಲಿ ಬೀಡುಬಿಟ್ಟಿದ್ದು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ದುಬಾರೆಯ ಸಾಕಾನೆಗಳ ಶಿಬಿರದಿಂದ ನಾಲ್ಕು ಸಾಕಾನೆಗಳ ಮೂಲಕ ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ತಂಡವು ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಹಾಗೂ ಮೊಳಗುಮನೆ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟದೊಳಗೆ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಘಟ್ಟದಳ ಸರ್ಕಾರಿ ತಮಿಳು ಶಾಲೆಯ ಸಮೀಪದಲ್ಲಿ ಬುಧವಾರ ಹುಲಿಯು ಹಾಡಹಗಲೇ ಸಾರ್ವಜನಿಕರ ಎದುರು ಕಾಣಿಸಿಕೊಂಡು ಹಸುವೊಂದನ್ನು ಸಾಯಿಸಿತ್ತು. ಇದರಿಂದಾಗಿ ಗ್ರಾಮಸ್ಥರು ಇನ್ನಷ್ಟು ಭಯಭೀತರಾಗಿದ್ದರು.
ಹುಲಿಯನ್ನು ಪತ್ತೆ ಹಚ್ಚುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾದರೂ ಕೂಡ ಹುಲಿ ಸೆರೆಯಾಗದಿರುವುದು ಸಮಸ್ಯೆಯಾಗಿದೆ. ಆದರೂ ಕೂಡ ಛಲ ಬಿಡದ ಕಾರ್ಯಾಚರಣೆ ತಂಡವು ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿ ಕಾರ್ಯಾಚರಣೆಯಲ್ಲಿ 50ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. ವೀರಾಜಪೇಟೆ ತಾಲೂಕು ಡಿ.ಸಿ.ಎಫ್ ಶಿವರಾಂ ಬಾಬು, ಎ.ಸಿ.ಎಫ್ ನೆಹರೂ ಹಾಗೂ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ, ಸಿದ್ದಾಪುರ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.





