Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ಜನನಿಬಿಡ ರಸ್ತೆಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿ: ವ್ಯಾಪಾರಸ್ಥರು, ವಾಹನ ಸವಾರರಿಗೆ ಕಿರಿಕಿರಿ

ಮೈಸೂರು: ಇದು ನಗರದ ಹೃದಯಭಾಗದಲ್ಲಿರುವ ರಸ್ತೆ. ಇಲ್ಲಿ ಲಕ್ಷಾಂತರ ಜನರು ಪ್ರತೀ ದಿನ ಓಡಾಡುತ್ತಾರೆ. ವಾಹನ ಸಂಚಾರ ಕೂಡ ಲೆಕ್ಕವಿಲ್ಲ. ಅಂತಹ ರಸ್ತೆಯನ್ನು ದುರಸ್ಥಿ ನೆಪದಲ್ಲಿ ಕಳೆದ ೧೫ ದಿನಗಳ ಹಿಂದೆ ಅಗೆದಿರುವ ನಗರಪಾಲಿಕೆ ಕಾಮಗಾರಿಯನ್ನು ಅರ್ದಕ್ಕೇ ನಿಲ್ಲಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ.
ಯಾವುದೇ ಕಾಮಗಾರಿ ಕೈಗೆತ್ತಿಕೊಂಡಲ್ಲಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಿದಲ್ಲಿ ಸಾರ್ವಜನಿಕರಿಗೆ ಅದು ಅನುಕೂಲವಾಗುತ್ತದೆ. ಅನುದಾನ ಕಡಿತ. ಹಣ ಬಿಡುಗಡೆಯಾಗಿಲ್ಲ ಎಂಬ ಮುಂತಾದ ಕಾರಣಗಳನ್ನಿಟ್ಟುಕೊಂಡು ಕಾಮಗಾರಿಯನ್ನು ವಿಳಂಬ ಮಾಡಿದಲ್ಲಿ ಸಂಕಷ್ಟಕ್ಕೊಳಗಾಗುವವರು ಮಾತ್ರ ಸಾರ್ವಜನಿಕರು.
ಇದಕ್ಕೆ ತಾಜ ಉದಾಹರಣೆ ನಗರದ ದೇವರಾಜ ಮಾರುಕಟ್ಟೆಯ ಕೂಗಳತೆಯಲ್ಲಿರುವ ಹಾಗೂ ಮಕ್ಕಾಜಿ ಚೌಕದ ಎದುರಿನ ರಸ್ತೆ. ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಯನ್ನು ನಗರಪಾಲಿಕೆ ಕೈಗೆತ್ತಿಕೊಂಡಿದೆ.
ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆದಾರ ದೀಪಾವಳಿ ಹಬ್ಬದ ಹಿಂದಿನ ದಿನ ಕಾಮಗಾರಿಯನ್ನು ಆರಂಭಿಸಿದ್ದಾರೆ. ಒಂದೆರಡು ದಿನ ಕಾಮಗಾರಿಯನ್ನು ನಡೆಸಿ ಚರಂಡಿ ನಿರ್ಮಾಣಕ್ಕೆ ಹಳ್ಳ ತೋಡಿದ್ದಾರೆ. ಇದಾದ ನಂತರ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ನೀರಿನ ಟ್ಯಾಂಕರ್ ನಿಲ್ಲಿಸಿ ಹೋದವರು ಇದುವರೆವಿಗೂ ಪತ್ತೆ ಇಲ್ಲ.
ಈ ರಸ್ತೆ ಸಯ್ಯಾಜಿರಾವ್ ರಸ್ತೆಯನ್ನು ಸಂಪರ್ಕಿಸುತ್ತದೆ. ಒಲಂಪಿಯಾ ಚಿತ್ರಮಂದಿರದ ಸುತ್ತಮುತ್ತಲಿನ ಮಳಿಗೆಗಳ ಸಂಪರ್ಕ ಕೂಡ ಇದೇ ರಸ್ತೆಯಿಂದ ಆಗುತ್ತದೆ. ಪ್ರತೀದಿನ ಕೋಟ್ಯಾಂತರ ರೂ. ವಹಿವಾಟು ನಡೆಯುವ ಸ್ಥಳದಲ್ಲಿ ಈ ರಸ್ತೆ ಇದೆ.
ಕಾಮಗಾರಿ ಅರ್ದಕ್ಕೆ ನಿಂತಿರುವುದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಜನರು ಕೂಡ ವಸ್ತುಗಳ ಖರೀದಿಗೆ ಕೆಟಿ ಸ್ಟ್ರೀಟ್ ರಸ್ತೆ ಮೂಲಕ ಒಂದು ಸುತ್ತುಹಾಕಿ ಅಲ್ಲಿಗೆ ಬರಬೇಕಿದೆ. ಈ ಬಗ್ಗೆ ವ್ಯಾಪಾರಸ್ಥರು ಸಾಕಷ್ಟು ದೂರು ಹೇಳಿಕೊಂಡರು ಕೂಡ ನಗರಪಾಲಿಕೆ ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ. ಈಗಲಾದರೂ ಸಂಬಂದಪಟ್ಟವರು ಕಾಮಗಾರಿಯನ್ನು ತುರ್ತಾಗಿ ಪುರ್ಣಗೊಳಿಸಬೇಕಿದೆ.

ಚರಂಡಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಒಳ ಚರಂಡಿಯ ಪೈಪ್‌ಲೈನ್ ಅಳವಡಿಸಬೇಕಾಗಿದೆ. ಈ ಕಾಮಗಾರಿಗಾಗಿ ಹಣ ಬಿಡುಗಡೆಯಾಗಿಲ್ಲದ ಕಾರಣ ಗುತ್ತಿಗೆದಾರರು ಕೆಲಸವನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ಇದರ ಬಗ್ಗೆ ನಗರಪಾಲಿಕೆ ಆಯುಕ್ತರೊಂದಿಗೆ ಮಾತನಾಡಲಾಗಿದೆ. ಆದಷ್ಟು ಶೀಘ್ರವಾಗಿ ಕಾಂಗಾರಿ ಪೂರ್ಣಗೊಳ್ಳಲಿದೆ.
-ಎಂ.ಡಿ.ನಾಗರಾಜು, ನಗರಪಾಲಿಕೆ ಸದಸ್ಯರು.

ಇದು ಮಾರುಕಟ್ಟೆಯ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಒಂದು. ಪ್ರತೀದಿನ ಸಾವಿರಾರು ವಾಹನಗಳ ಸಂಚಾರವಿದೆ. ಕಾಮಗಾರಿ ಅರಂಭವಾಗಿ ೧೫ ದಿನಗಳು ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ನಗರಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
-ಅಸ್ಮತ್ ಅಲಿ, ರೆಡಿಮೇಡ್ ಉಡುಪು ವ್ಯಾಪಾರಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!