Mysore
23
overcast clouds

Social Media

ಶನಿವಾರ, 20 ಜೂನ್ 2026
Light
Dark

ನೇತ್ರರಾಜು ಸ್ಮರಣೆಯ ಕ್ಯಾಲೆಂಡರ್ ಲೋಕಾರ್ಪಣೆ

ನೇತ್ರಾರಾಜು ಕೊನೆಯವರೆಗೆ ತಾನು ತೆಗೆದ ಚಿತ್ರಗಳನ್ನು ಉತ್ತಮ ಎಂದು ಹೇಳಿಕೊಳ್ಳಲಿಲ್ಲ: ಕೃಪಾಕರ

ಮೈಸೂರು: ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸಂಜೆ ‘ನೇತ್ರರಾಜು ಸ್ಮರಣೆ’ಯಲ್ಲಿ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಹೊರ ತಂದಿರುವ ೨೦೨೩ರ ಕ್ಯಾಲೆಂಡರ್ ಅನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ-ಸೇನಾನಿ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಕೃಪಾಕರ ಅವರು, ನಮ್ಮ ನಡುವೆ ನೇತ್ರರಾಜು ಇಲ್ಲ ಅನ್ನಿಸುವುದಿಲ್ಲ. ಅವರೊಂದಿಗೆ ದೀರ್ಘ ಸಮಯ ಒಡನಾಟ ಇತ್ತು. ಟೋಪಿ ಹಾಕಿಸಿಕೊಳ್ಳುವುದು ಅವರ ಹವ್ಯಾಸವಾಗಿತ್ತು. ಹುಡುಕಿ ಹುಡುಕಿ ಟೋಪಿ ಹಾಕಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.
ಕುತೂಹಲ ಇದ್ದವರಿಗೆ ಶಿಕ್ಷಣ ಬೇಕಿಲ್ಲ. ನೇತ್ರಾರಾಜು ಅವರಿಗೆ ಅಪರಿಮಿತವಾದ ಕುತೂಹಲ ಇತ್ತು. ಶಿಕ್ಷಣ ಪಡೆಯದಿದ್ದರೂ ಟೆಕ್ನಾಲಜಿ ಬಗ್ಗೆ ತಿಳಿವಳಿಕೆ ಇತ್ತು. ಹೊಸ ಹೊಸ ಸಾಫ್ಟ್‌ವೇರ್ ತರಿಸಿ ಪ್ರಯೋಗ ಮಾಡುತ್ತಿದ್ದರು. ಪ್ರಯೋಗ ಮಾಡುತ್ತಲೇ ಸಾಲಕ್ಕೆ ಸಿಲುಕಿದರು. ಕೊನೆಯವರೆಗೆ ತಾನು ತೆಗೆದ ಚಿತ್ರಗಳನ್ನು ಉತ್ತಮ ಎಂದು ಹೇಳಿಕೊಳ್ಳಲಿಲ್ಲ. ಇನ್ನೂ ಉತ್ತಮ ಚಿತ್ರ ತೆಗೆಯಬೇಕೆಂದು ಹಂಬಲಿಸುತ್ತಿದ್ದರು ಎಂದು ತಿಳಿಸಿದರು.

ಸೇನಾನಿ ಮಾತನಾಡಿ, ಛಾಯಾಗ್ರಾಹಕ ನೇತ್ರರಾಜು ಅಸಂಗತ ಕತೆಯಂತೆ ಕಾಣುತ್ತಾರೆ. ಝೆನ್ ವರ್ಣಿಸಲಾಗದಂತೆಯೇ ನೇತ್ರಾ ಕ್ಯಾರೆಕ್ಟರ್ ಹಿಡಿದಿಡುವುದು ಕಷ್ಟ. ನೇತ್ರರಾಜು ಇಲ್ಲದ ಕಲಾಮಂದಿರ ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರಲ್ಲದೆ, ಸಾಹಿತ್ಯದ ಕಾರ್ಯಕ್ರಮಗಳು, ಚಳವಳಿಗಳಲ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ನೇತ್ರರಾಜು ಅವರನ್ನು ಒಂದು ಬೆರಗು ಎಂದಿದ್ದರು. ಅವರಿಗೆ ಭೂತವೇ ಇಲ್ಲ. ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ನಿಜವಾದ ದಿಗಂಬರ ಜೈನ ಎಂದು ನುಡಿದಿದ್ದಾರೆ ಎಂದು ಹೇಳಿದರು.
ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್, ನೇತ್ರರಾಜು ಅವರ ಪುತ್ರಿ ಛಾಯಾಗ್ರಾಹಕಿ ನಿತ್ಯಾ, ನಗರ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಂ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!