ನಂಜನಗೂಡು ತಾಲ್ಲೂಕಿನ ಕಪ್ಪಸೋಗೆಯಲ್ಲಿ ಘಟನೆ
ಭಾರಿ ಮಳೆಗೆ ಕುಸಿದ ಮನೆ
ನಂಜನಗೂಡು: ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದ್ದು, ಮನೆ ಕಳೆದುಕೊಂಡ ಕುಟುಂಬ ಈಗ ಅತಂತ್ರವಾಗಿದೆ.
ಗ್ರಾಮದ ಒಂದನೇ ವಾರ್ಡ್ ನ ನಾಯಕ ಸಮುದಾಯದ ಬೀದಿಯಲ್ಲಿನ ದೇವಮ್ಮ ಅವರಿಗೆ ಸೇರಿದ ಮನೆಯ ಬಹುತೇಕ ಭಾಗ ಮಳೆಗೆ ಬಿದ್ದು ಹೋಗಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ.
‘ಭಾರಿ ಮಳೆಗೆ ಶುಕ್ರವಾರ ರಾತ್ರಿ 1ಗಂಟೆ ಸುಮಾರಿಗೆ ಮನೆಯ ಎರಡು ಗೋಡೆಗಳು ಬಿದ್ದಿವೆ. ನಾನು, ತಾಯಿ ದೇವಮ್ಮ, ಅಜ್ಜಿ ಮೂವರು ಮಲಗಿದ್ದೇವು. ಗೋಡೆ ಮನೆಯ ಹೊರಭಾಗಕ್ಕೆ ಕುಸಿದು ಬಿದ್ದಿದ್ದೆ. ಹಾಗಾಗಿ ಅದೃಷ್ಟವಶಾತ್ ನಾವು ಬದುಕುಳಿದೆವು. ಇಲ್ಲದಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚಿತ್ತು’ ಎಂದು ದೇವಮ್ಮ ಅವರ ಪುತ್ರ ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ಮನೆ ಕಳೆದುಕೊಂಡ ಗ್ರಾಮದ ದೇವಮ್ಮ ಅವರು ಕಡು ಬಡವರಾಗಿದ್ದು, ಈಗ ಮನೆ ಇಲ್ಲದೇ ಅತಂತ್ರರಾಗಿದ್ದಾರೆ. ಹಾಗಾಗಿ ತಕ್ಷಣವೇ ಕ್ಷೇತ್ರದ
ಶಾಸಕರು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆ ಮಂಜೂರು ಮಾಡಬೇಕು ಯುವ ಮುಖಂಡ ಮೂರ್ತಿ ರಾಮನಾಯಕ ಒತ್ತಾಯಿಸಿದ್ದಾರೆ.
ಮಳೆ ಬಂದ ಸಂದರ್ಭಗಳಲ್ಲಿ ಮನೆಯೊಳಗೆ ಮಳೆ ನೀರು ನುಗ್ಗುತ್ತಿತ್ತು. ಆ ಸಂದರ್ಭದಲ್ಲಿ ಮಲಗಲು ತೊಂದರೆಯಾಗುತ್ತಿತ್ತು. ಈ ಕುರಿತು ಗ್ರಾಮದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಮನೆ ನಿರ್ಮಿಸಿಕೊಡಲಿಲ್ಲ ಎಂದು ದೇವಮ್ಮ ಬೇಸರ ವ್ಯಕಪಡಿಸಿದರು.
ಮನೆ ಕುಸಿದು ಬೀಳುವ ಮುನ್ನವೇ ಬಡ ಮಹಿಳೆಗೆ ಮನೆ ನಿರ್ಮಿಸಿಕೊಡದ ಗ್ರಾಮದ ಜನಪ್ರತಿನಿಧಿಗಳು, ಈಗ ಮನೆ ಬಿದ್ದು ಹೋದ ನಂತರ ಬಂದು ವಿಚಾರಿಸುತ್ತಿದ್ದಾರೆ. ಅಲ್ಲದೇ ನಾಲ್ಕಾರು ಮನೆ ಇರುವವರಿಗೆ ಮತ್ತೆ ಮನೆ ಕಟ್ಟಿಸಿಕೊಡುತ್ತಿದ್ದಾರೆ ಎಂದು ಗ್ರಾಮದ
ಕೆ.ಎಸ್. ಪುಟ್ಟರಾಜು, ಮಹೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.