Mysore
25
overcast clouds
Light
Dark

ನಾಲೆಯ ರಸ್ತೆಯಲ್ಲಿ ತ್ಯಾಜ್ಯದ ರಾಶಿ; ನೀರು ಕಲುಷಿತ

ಕಬಿನಿ ಬಲದಂಡೆ ನಾಲೆಯ ರಸ್ತೆಯುದ್ದಕ್ಕೂ ಮದ್ಯದ ಅಂಗಡಿಯ ತ್ಯಾಜ್ಯ; ಕ್ರಮ ಕೈಗೊಳ್ಳದ ಅಧಿಕಾರಿಗಳು

-ಶ್ರೀಧರ ಆರ್.ಭಟ್ಟ

ನಂಜನಗೂಡು: ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಕಬಿನಿ ಬಲದಂಡೆ ನಾಲೆಯ ಎಡ, ಬಲ ಸೇರಿದಂತೆ ನಾಲಾ ರಸ್ತೆಯುದ್ದಕ್ಕೂ ತ್ಯಾಜ್ಯಗಳು ಬಿದ್ದು ಕೊಳೆತು ನಾರಲಾರಂಭಿಸಿದೆ.
ಈ ತ್ಯಾಜ್ಯ ಪಕ್ಕದ ಕಬಿನಿ ನಾಲೆಗೂ ಸೇರಿ ನಾಲೆಯ ನೀರು ಸಹ ಕಲುಷಿತವಾಗುತ್ತಿದೆ. ವಿಶೇಷವೆಂದರೆ ಇಷ್ಟೊಂದು ಪ್ರಮಾಣದ ತ್ಯಾಜ್ಯ ಕೇವಲ ಮದ್ಯದ ಅಂಗಡಿಯದ್ದೇ ಆಗಿರುವುದು. ಇದು ಅಬಕಾರಿ ಲಾಬಿಗೆ ಸಾಕ್ಷಿ ಎನ್ನಲಾಗಿದೆ. ಜನಸಾಮಾನ್ಯರಿಗೆ ಮದ್ಯ ಕುಡಿಸಿ ಬದುಕು ಹಾಳು ಮಾಡುವ ಮದ್ಯದ ದೊರೆಗಳು ಈಗ ನಾಲಾ ಬದಿ ಮತ್ತು ರಸ್ತೆಯಲ್ಲಿ ತ್ಯಾಜ್ಯ ಸುರಿಯುವುದರ ಮೂಲಕ ಪರಿಸರ ನಾಶದೊಂದಿಗೆ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ತರಲಾರಂಭಿಸಿದ್ದಾರೆ.

ರಾಶಿ ರಾಶಿ ತ್ಯಾಜ್ಯ ಕೊಳೆತು ನಾರುತ್ತಿದ್ದರೂ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಂಡೂಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ದುರಂತ. ಖಾಲಿಯಾದ ಮದ್ಯದ ಪ್ಯಾಕೆಟ್‌ಗಳು ಮಳೆ ಬಂದರೆ ಕೊಳೆತು ನಾರುತ್ತವೆ. ಬಿಸಿಲಾದರೆ ಗಾಳಿಗೆ ಹಾರಿ ಹೋಗಿ ಅಕ್ಕಪಕ್ಕದ ಜಮೀನುಗಳಿಗೆ ಸೇರಿ ಆ ರೈತರಿಗೆ ತೊಂದರೆ ನೀಡುತ್ತವೆ.

ಕೊಳೆತು ನಾರುತ್ತಿರುವ ಈ ಮದ್ಯದ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ ಮೂಕ ಪ್ರಾಣಿಗಳಾದ ಹಸು, ಎಮ್ಮೆ, ಕರು, ಮೇಕೆಗಳು ಬಲಿಯಾಗುತ್ತಿರುವ ಘಟನೆಗಳು ವರದಿಯಾಗತೊಡಗಿವೆ.
ಕಾರ್ಯ ಗ್ರಾಮದ ಸಮೀಪವಿರುವ ಹುಲ್ಲಹಳ್ಳಿ ಹೋಬಳಿ ಕೇಂದ್ರದ ಮದ್ಯದ ಅಂಗಡಿಯ ಮಾಲೀಕರ ದುರ್ನಡತೆಯಿಂದ ಕಾರ್ಯ ಗ್ರಾಮದ ಬಲದಂಡೆ ನಾಲೆಯ ಏರಿ ಸಂಪೂರ್ಣವಾಗಿ ಮದ್ಯದ ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹ ಸ್ಥಳವಾಗಿ ಮಾರ್ಪಾಡಾಗಿದೆ.
ಹುಲ್ಲಹಳ್ಳಿಯ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾರ್ಯ ಗ್ರಾಮದ ಸುತ್ತಮುತ್ತಲ ಜಮೀನುಗಳ ರೈತರು ಮದ್ಯದಂಗಡಿಯ ಪ್ಲಾಸ್ಟಿಕ್ ಕೊಳೆತ ತ್ಯಾಜ್ಯವನ್ನು ತಡೆಹಿಡಿಯಲು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಹಾಗೆೆುೀಂ ದುಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ತಾಲ್ಲೂಕನ್ನು ಆವರಿಸಿಕೊಂಡಿರುವ ಅಬಕಾರಿ ಲಾಬಿಯ ಭಯ ಎನ್ನುತ್ತಾರೆ ಅಧಿಕಾರಿಗಳು.

ಅಧಿಕಾರಿಗಳ ಭಯ, ನಿರ್ಲಕ್ಷ್ಯ ನಡೆಯಿಂದ ಮೂಕ ಪ್ರಾಣಿಗಳು ಮತ್ತು ರೈತಾಪಿ ವರ್ಗ ವ್ಯಥೆ ಪಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ಕಾರ್ಯ ಗ್ರಾಮದ ಬಲದಂಡೆ ನಾಲೆಯ ಏರಿ ಮೇಲೆ ಸಂಗ್ರಹವಾಗಿರುವ ಟನ್ ಗಟ್ಟಲೆ ಮದ್ಯದ ಅಂಗಡಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ ರೈತರು ಮತ್ತು ಮೂಕ ಪ್ರಾಣಿಗಳ ಜೀವನವನ್ನು ರಕ್ಷಿಸಬೇಕಿದೆ.

ಈ ತ್ಯಾಜ್ಯದ ರಾಶಿಯಲ್ಲಿ ಆಹಾರ ಅರಸಿ ಬರುವ ಹಸು, ಕರುಗಳು, ಮೇಕೆಗಳು ಅದನ್ನು ತಿನ್ನುವುದರಿಂದ ಅವುಗಳ ಜೀವಕ್ಕೆ ಸಂಚಕಾರ ಎದುರಾಗಿದೆ. ದುಗ್ಗಹಳ್ಳಿ ಗ್ರಾಪಂ ಪಿಡಿಒ ಮತ್ತು ಅಧಿಕಾರಿಗಳು, ಕಬಿನಿ ನಾಲೆ  ವ್ಯಾಪ್ತಿಯ ಅಧಿಕಾರಿಗಳು ಇತ್ತ ಗಮನಹರಿಸಿ ತ್ಯಾಜ್ಯ ಬಿಸಾಡುವವರ ಮದ್ಯದ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಬಸವರಾಜು, ಪಿಎಸಿಸಿಎಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ