Mysore
28
few clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಸರಗೂರು| ಕಾಡಾನೆ ದಾಳಿ: ಇಬ್ಬರು ರೈತರಿಗೆ ಗಂಭೀರ ಗಾಯ

ಸರಗೂರು: ಜಮೀನಿನಲ್ಲಿ ಟ್ರಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತಾಲ್ಲೂಕಿನ ಹಲಸೂರು ಗ್ರಾಮದ ಪರಶಿವನಾಯಕ, ಇವರ ಚಿಕ್ಕಪ್ಪ ಶಿವಣ್ಣ ಎಂಬುವವರೇ ಗಾಯಗೊಂಡಿರುವ ರೈತರಾಗಿದ್ದಾರೆ. ಇವರಿಬ್ಬರೂ ಸರಗೂರು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಶಿವನಾಯಕ ಮತ್ತು ಶಿವಣ್ಣ ಇಬ್ಬರೂ ಹಲಸೂರು ಗ್ರಾಮದ ಚಾಮನಾಯಕ ಎಂಬವರ ಜಮೀನಿನಲ್ಲಿ ಉಳುಮೆ ಮಾಡಲು ಟ್ರಾಕ್ಟರ್‌ನಲ್ಲಿ ಬೆಳಿಗ್ಗೆ ೭ ಗಂಟೆಯ ಸಮಯದಲ್ಲಿ ತೆರಳಿದ್ದರು. ಜಮೀನಿನಲ್ಲಿ ಉಳುಮೆ ಮಾಡುವಾಗ ಗ್ರಾಮದ ಸಮೀಪದಲ್ಲಿರುವ ನುಗು ವನ್ಯಜೀವಿ ವಲಯದಿಂದ ಸರಗೂರು ವಲಯದ ಅಂಚಿನ ಹಲಸೂರು ಗುಡ್ಡದಿಂದ ಬಂದ ಒಂಟಿಸಲಗವೊಂದು ಟ್ರಾಕ್ಟರ್ ಮೇಲೆ ಏಕಾಏಕಿ ದಾಳಿ ನಡೆಸಿದೆ.

ಈ ವೇಳೆ ಟ್ರಾಕ್ಟರ್‌ನಲ್ಲಿದ್ದ ಪರಶಿವನಾಯಕ ಅವರ ಕಣ್ಣಿನ ಭಾಗಕ್ಕೆ ಆನೆ ದಂತದಿಂದ ಏಟು ಬಿದ್ದಿದ್ದು, ಶಿವಣ್ಣ ಅವರಿಗೂ ಗಂಭೀರ ಗಾಯಗಳಾಗಿವೆ. ವಿಷಯ ತಿಳಿದು ಕೂಡಲೇ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆಸ್ಪತ್ರೆಗೆ ಅಧಿಕಾರಿಗಳ ಭೇಟಿ: ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನುಗು ವನ್ಯಜೀವಿ ವಲಯ ಆರ್‌ಎಫ್‌ಒ ವಿವೇಕ್ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯಿಂದ ಭರಿಸಲಾಗುವುದು. ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tags:
error: Content is protected !!