Mysore
20
overcast clouds
Light
Dark

ಇಂದಿನ ಕಾಂಗ್ರೆಸ್‌ ಭ್ರಷ್ಟಾಚಾರದ ಮತ್ತೊಂದು ಮುಖವಾಗಿದೆ: ಸಿಟಿ ರವಿ

ಮೈಸೂರು: ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಎಂದು ಇಡಿ ದೇಶವೇ ಅನುಸರಿಸುತ್ತಿದೆ. ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ 28 ಕ್ಷೇತ್ರ ಗೆಲ್ಲುತ್ತೇವೆ. ನೆರೆಯ ರಾಜ್ಯವಾದ ತಮಿಳುನಾಡಲ್ಲೂ ಕೂಡ ಬಿಜೆಪಿ ಹಾಗೂ ಎನ್ ಡಿಎ ಅಲೆಯನ್ಸ್ ಗೆಲ್ಲುತ್ತದೆ ಎಂದು ಮಾಜಿ ಸಚಿವ ಸಿಟಿ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿಂದು (ಏ.೮) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಕಮ್ಯುನಲ್‌ ಪಕ್ಷವಾಗಿದ್ದು, ಕರೆಪ್ಷನ್‌ನ ಇನ್ನೊಂದು ಮುಖವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತೆರಿಗೆ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು ನೀಡಿದವರು ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕೊಟ್ಟ ಕೊಡುಗೆಗಳ ಬಗ್ಗೆ ವಿವರಿಸಿ, ಅದು ಬಿಟ್ಟು ಸುಕಾಸುಮ್ಮನೆ ಆರೋಪ ಮಾಡುವುದಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ. ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾಲು ನೀಡಿದವರು ಪ್ರಧಾನಿ ಮೋದಿ ಅವರಾಗಿದ್ದಾರೆ. ಈ ಬಗ್ಗೆ ನಿಮಗೆ ಕಣ್ಣು ಕಾಣದೇ ಹೋದರೇ ನಿಮ್ಮ ದೃಷ್ಟಿಯಾದರೆ ದೃಷ್ಟಿದೋಷ ನಿವಾರಣೆ ಮಾಡಬೇಕು ಎಂದು ಸಿ.ಟಿ ರವಿ ಲೇವಡಿ ಮಾಡಿದರು.

ಮನಮೋಹನ್ ಸಿಂಗ್ ಇದ್ದಾಗ ಕೊಟ್ಟ ಅನುದಾನ, ಮೋದಿಯವರು ಕೊಟ್ಟ ಅನುದಾನದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ದ. ನೀವು ನೀತಿ ಬಗ್ಗೆ ಅಲ್ಲ ಜಾತಿ ಬಗ್ಗೆ ಚರ್ಚೆ ನಡೆಸಲಿಕ್ಕೆ ಮುಂದಾಗಿದ್ದಿರಿ. ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಯನ್ನ ಯಾವ ಮಾನದಲ್ಲಿ ಅಳೆಯಿತ್ತೀರಿ. ದೇವರಾಜ ಅರಸು ಸಾಮಾಜಿಕ ನ್ಯಾಯವನ್ನ ಅಪಮಾನಿಸುವ ರೀತಿ ಮಾತನಾಡುತ್ತೀರಾ. ಅಧಿಕಾರಕ್ಕಾಗಿ ಬಳಸಿಕೊಂಡ ಅಹಿಂದ ಎಲ್ಲಿ ಹೋಯ್ತು ಸಿದ್ದರಾಮಯ್ಯರೇ..? ಎಂದು ಹರಿಹಾಯ್ದರು.

ಮೈಸೂರು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿ, ಸಿದ್ದರಾಮಯ್ಯ ಅವರು ಚುನಾವಣೆಗೂ ಮುಂಚೆ ಸೋಲು ಒಪ್ಪಿಕೊಂಡಿದ್ದಾರೆ. ಒಕ್ಕಲಿಗರು ನೀತಿ ಹಿಂದೆ ಹೋದವರು, ನೀತಿ ಬೆಂಬಲಿಸಿದವರು. ಯಾರನ್ನೋ ಕರೆದುಕೊಂಡು ಬಂದು ಒಕ್ಕಲಿಗೆ ಎಂದರೆ ಸಂಸ್ಕಾರ ಇಲ್ಲದೇ ಇರುವವರನ್ನು ಕರೆತಂದು ಒಕ್ಕಲಿಗ ಅಂದ್ರೆ ಸಮುದಾಯ ಒಪ್ಪಲ್ಲ. ಕಾರ್ಪೋರೇಷನ್ ಸೋತವರು, ವಿಧಾನಪರಿಷತ್ ನಲ್ಲಿ ಸೋತವರನ್ನ ಪಾರ್ಲಿಮೆಂಟ್ ಗೆ ನಿಲ್ಲಿಸುವ ದುಸ್ಥಿತಿ ಬಂದಿದೆ. ಲೂಸ್ ಟಾಕ್ ಲಕ್ಷ್ಮಣ್. ಇದು ಕಾಂಗ್ರೆಸ್‌ ನವರೇ ಕೊಟ್ಟಿರುವ ಬಿರುದು ಎಂದು ಕಿಡಿಕಾರಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಬಿಜೆಪಿ ಮುಖಂಡರಾದ ಸಂದೇಶ್ ಸ್ವಾಮಿ, ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.