Mysore
26
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ದೇಶದ ಪ್ರಗತಿಗೆ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿ: ಪ್ರತಾಪ್ ಸಿಂಹ

ಮೈಸೂರು: ದೇಶದ ಪ್ರಗತಿಗೆ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು. ಮದಕರಿ ನಾಯಕ ಮತ್ತು ಓನಕೆ ಒಬವ್ವರನ್ನು ಕೊಂದ ದುಷ್ಟರನ್ನು ನಾಯಕ ಸಮುದಾಯವು ಮರೆಯಬಾರದು. ಅಂತವರ ಕೈಗೆ ಅಧಿಕಾರ ನೀಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಅವರು ಪರಿವಾರ-ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು 40 ವರ್ಷಗಳಿಂದಲೂ ಇದ್ದ ಬೇಡಿಕೆಯನ್ನು ಈ ಭಾಗದ ಯಾವುದೇ ಸಂಸದರೂ ಪರಿಹರಿಸಲಿಲ್ಲ. ಶ್ರೀಕಂಠದತ್ತ ನರಸಿಂಹರಾಜರ ಆದಿಯಾಗಿ ಎಚ್ ವಿಶ್ವನಾಥ, ಸಿ ಎಚ್ ವಿಜಯಶಂಕರ್ ಅವರು ಸೇರಿದಂತೆ ಯಾವ ಸಂಸದರೂ ನಾಯಕ ಸಮುದಾಯದ ಬೇಡಿಕೆ ಈಡೇರಿಸಿಲ್ಲ. ಆದರೆ, ನಾನು ಸಂಸದನಾಗಿ ನಾಲ್ಕು ವರ್ಷಗಳಲ್ಲಿ ನಾಯಕ ಸಮುದಾಯದ ಬೇಡಿಕೆ ಈಡೇರಿಸಿದೆ ಎಂದರು.

ನಾನು ಸಂಸದನಾಗುವಲ್ಲಿ ನಾಯಕ ಸಮುದಾಯದ ಬೆಂಬಲ ಸಾಕಷ್ಟಿದೆ. ರಾಜಕಾರಣದಲ್ಲಿ ಬದಲಾವಣೆ ಅನಿವಾರ್ಯ. ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬದ ಯದುವೀರ್ ಚುನಾವಣೆಗೆ ನಿಂತಿದ್ದು, ನಾಯಕ ಸಮುದಾಯ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಅವರಿಗೆ ಕತ್ತಿಗುರಾಣಿ ನೀಡಿ ಅಭಿನಂದಿಸಲಾಯಿತು. ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು, ಮಾಜಿ ಸಚಿವರಾದ ಎಸ್ ಎ ರಾಮದಾಸ್, ಎನ್ ಮಹೇಶ್, ಶಾಸಕ ಟಿ ಎಸ್ ಶ್ರೀವತ್ಸ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಮಾಜಿ ಮಹಾಪೌರ ಶಿವಕುಮಾರ್, ರಾಜ್ಯ ಉಪಾಧ್ಯಕ್ಷ ಎಂ ರಾಜೇಂದ್ರ, ಕೇಂದ್ರೀಯ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ನಗರಾಧ್ಯಕ್ಷ ಎಲ್ ನಾಗೇಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:
error: Content is protected !!