ಮೈಸೂರು/ಎಚ್ಡಿ ಕೋಟೆ: ತಮ್ಮ ಹಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮಧ್ಯೆಯೇ ನಾಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಎಚ್ಡಿ ಕೋಟೆ ತಾಲೂಕಿನ ಕೆ. ಎಡತೊರೆ ಗ್ರಾಮದ ಹಾಡಿಯ ಜನರು ರಸ್ತೆಯಲ್ಲಿಯೇ ನಾಟಿ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಎಡತೊರೆ ಹಾಡಿ ಮೂಲ ಸೌಕರ್ಯದಿಂದ ವಂಚಿತರಾಗಿದೆ. ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲ. ಇಂದಿಗೂ ಕೂಡಾ ಸರ್ಕಾರಿ ಬಸ್ ಸೌಲಭ್ಯ ಸಿಗದೇ ಇರುವುದು ಅಲ್ಲಿನ ಜನರ ಕೆಂಗಣ್ಣಿಗೆ ಗುರಿ ಮಾಡುವಂತೆ ಮಾಡಿದೆ.
ಈ ಸಂಬಂಧ ರಸ್ತ, ನೀರು, ಸಾರಿಗೆ ಸೇರಿದಂತೆ ಹಲವು ಮೂಲಭೂತ ಸೌಕರ್ಯ ನೀಡುವಂತೆ ಕಳೆದ ಒಂದು ವರ್ಷದಿಂದ ಅಲ್ಲಿನ ಹಾಡಿ ಜನರು ಅಧಿಕಾರಿಗಳಿಗೆ ಮಾಹಿತಿ ನೀಡಿಯೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೆಸರು ಗದ್ದೆಯಂತಾಗಿದ್ದ ರಸ್ತೆಯ ಮೇಲೆ ನಾಟಿ ಮಾಡುವ ಮೂಲಕ ರಸ್ತೆ ಅಭಿವೃದ್ದಿಗಾಗಿ ಜನರು ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.





