ಮೈಸೂರು: ಪರಪುರುಷನ ಸಂಗ ಮಾಡಿದ್ದ ತಾಯಿಯನ್ನು ಮಗ ಕೊಲೆ ಮಾಡಿರುವ ಘಟನೆ ಮೈಸೂರು ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಧಾ ಕೊಲೆಯಾದ ದುರ್ದೈವಿಯಾಗಿದ್ದು, ಶಿವರುದ್ರಪ್ಪ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಪರಪುರುಷನ ಸಂಗ ಮಾಡಿದ್ದ ತಾಯಿಗೆ ಶಿವರುದ್ರಪ್ಪ ಪದೇ ಪದೇ ಬುದ್ದಿವಾದ ಹೇಳುತ್ತಿದ್ದ. ಆದರೂ ತಾಯಿ ಸುಧಾ ಮಾತ್ರ ಪರ ಪುರುಷನ ಸಹವಾಸ ಬಿಡಲು ಒಪ್ಪುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಸುಧಾರನ್ನು ಮಗ ಶಿವರುದ್ರಪ್ಪ ಕೊಲೆ ಮಾಡಿದ್ದಾನೆ.
ಮೊದಲಿಗೆ ತೀವ್ರ ಹಲ್ಲೆಗೊಳಗಾಗಿದ್ದ ಸುಧಾರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆಯೊಯ್ದಿದ್ದರು. ಈ ವೇಳೆ ಅಡ್ಡಬಂದ ಪುತ್ರ ತಾನೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಕಣಿಯನಹುಂಡಿ ಸಮೀಪದ ತೋಟದಲ್ಲಿ ತಾಯಿಯನ್ನು ಸುಟ್ಟುಹಾಕಿ ಎಸ್ಕೇಪ್ ಆಗಿದ್ದ. ಈ ವೇಳೆ ಆರೋಪಿಗೆ ಚಿಕ್ಕಪ್ಪನ ಮಕ್ಕಳಾದ ಆಕಾಶ್ ಹಾಗೂ ಅಭಿ ಎಂಬುವವರು ಕೂಡ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಭೇದಿಸಿದ ಜಯಪುರ ಠಾಣೆ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.




