Mysore
24
overcast clouds

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101 ಬರಪೀಡಿತ ತಾಲೂಕುಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾನದಂಡದಡಿ ₹3,705.30 ಕೋಟಿ ಪರಿಹಾರ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದೆ.

ಸೆ.15ರಂದು ಸಲ್ಲಿಸಿರುವ ಈ ಮನವಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ, ಜಾನುವಾರು ಸಂರಕ್ಷಣೆ, ಕುಡಿಯುವ ನೀರು, ಔಷಧ–ಲಸಿಕೆ ಸೇರಿದಂತೆ ವಿವಿಧ ಅಗತ್ಯಗಳಿಗೆ ಕೇಂದ್ರದ ನೆರವು ಕೋರಲಾಗಿದೆ.

ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ, ಈ 101 ತಾಲೂಕುಗಳಲ್ಲಿ ಬರದಿಂದ ಒಟ್ಟು ₹18,748.23 ಕೋಟಿ ನಷ್ಟ ಸಂಭವಿಸಿದೆ.
17.85 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಹಾಗೂ 1.67 ಲಕ್ಷ ಹೆಕ್ಟೇರ್ ತೋಟಗಾರಿಕಾ ಪ್ರದೇಶ ಸೇರಿದಂತೆ ಒಟ್ಟು 19.52 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. NDRF/SDRF ನಿಯಮಗಳನ್ವಯ ಬೆಳೆ ನಷ್ಟದ ಇನ್‌ಪುಟ್ ಸಬ್ಸಿಡಿಗಾಗಿ ₹2,017.26 ಕೋಟಿ ಕೋರಲಾಗಿದೆ.

ಮಳೆ ಕೊರತೆ, ಬಿತ್ತನೆ ಮೇಲೆ ಪರಿಣಾಮ

ಸೆ.9ರ ವೇಳೆಗೆ ರಾಜ್ಯದಲ್ಲಿ ಸಾಮಾನ್ಯ 733 ಮಿ.ಮೀ. ಮಳೆಗೆ ಬದಲಾಗಿ 487 ಮಿ.ಮೀ. ಮಾತ್ರ ದಾಖಲಾಗಿದ್ದು, ಶೇ.34ರಷ್ಟು ಮಳೆ ಕೊರತೆ ಉಂಟಾಗಿದೆ. ಕರಾವಳಿಯಲ್ಲಿ ಶೇ.26, ಮಲೆನಾಡಿನಲ್ಲಿ ಶೇ.36, ಉತ್ತರ ಒಳನಾಡಿನಲ್ಲಿ ಶೇ.38 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.47ರಷ್ಟು ಕೊರತೆ ದಾಖಲಾಗಿದೆ.

31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ಮಳೆ ಕೊರತೆಯ ವರ್ಗದಲ್ಲಿವೆ. 240 ತಾಲೂಕುಗಳಲ್ಲಿ 182 ತಾಲೂಕುಗಳು ಕೊರತೆ ಹಾಗೂ 21 ತಾಲೂಕುಗಳು ತೀವ್ರ ಕೊರತೆ ಎದುರಿಸುತ್ತಿವೆ ಎಂದು ಮೆಮೊರಾಂಡಂನಲ್ಲಿ ವಿವರಿಸಲಾಗಿದೆ.

ಅಂದರೆ, ರಾಜ್ಯದ ಬಹುಪಾಲು ತಾಲೂಕುಗಳಲ್ಲಿ ಮಳೆಯ ಕೊರತೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಜೂನ್–ಆಗಸ್ಟ್ ಮುಂಗಾರು ಅವಧಿಯ ಐದು ದಶಕಗಳ ದಾಖಲೆಗಳನ್ನು ಹೋಲಿಸಿದಾಗ, 2026ರ ಈ ಅವಧಿಯ ಮಳೆಯ ಪ್ರಮಾಣ 1976ರ ನಂತರದ ಎರಡನೇ ಅತಿ ಕಡಿಮೆ ಮಟ್ಟದಲ್ಲಿದೆ ಎಂದು ರಾಜ್ಯವು ಕೇಂದ್ರಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಿದೆ.

19.52 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿ
ಸೆ.4ರ ವೇಳೆಗೆ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ ವಿರುದ್ಧವಾಗಿ 67.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದು ಗುರಿಯ ಶೇ.80ರಷ್ಟಾಗಿದ್ದು, ಸಾಮಾನ್ಯ ಬಿತ್ತನೆ ಪ್ರದೇಶದ ಶೇ.88ರಷ್ಟಾಗಿದೆ.

ಮೆಕ್ಕೆಜೋಳ 4.60 ಲಕ್ಷ ಹೆಕ್ಟೇರ್, ರಾಗಿ 3.80 ಲಕ್ಷ ಹೆಕ್ಟೇರ್, ತೊಗರಿ 2.19 ಲಕ್ಷ ಹೆಕ್ಟೇರ್ ಮತ್ತು ಹತ್ತಿ 1.70 ಲಕ್ಷ ಹೆಕ್ಟೇರ್ ಹಾನಿಗೊಳಗಾದ ಪ್ರಮುಖ ಬೆಳೆಗಳಾಗಿವೆ.

ತೋಟಗಾರಿಕೆಯಲ್ಲಿ ತೆಂಗು 0.84 ಲಕ್ಷ ಹೆಕ್ಟೇರ್, ಈರುಳ್ಳಿ 0.46 ಲಕ್ಷ ಹೆಕ್ಟೇರ್ ಹಾಗೂ ಅರಿಶಿನ 0.13 ಲಕ್ಷ ಹೆಕ್ಟೇರ್ ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದೆ.

ಜಾನುವಾರು, ನೀರು, ಆಹಾರಕ್ಕೂ ನೆರವು
ಬರ ನಿರ್ವಹಣೆಯ ಭಾಗವಾಗಿ 476 ಜಾನುವಾರು ಶಿಬಿರಗಳಿಗೆ ₹209.21 ಕೋಟಿ ಹಾಗೂ 583 ಮೇವು ಬ್ಯಾಂಕ್‌ಗಳಿಗೆ ₹241.61 ಕೋಟಿ ನೆರವು ಕೋರಲಾಗಿದೆ

ಔಷಧ ಮತ್ತು ಲಸಿಕೆಗಳಿಗೆ ₹21.27 ಕೋಟಿ, ಪೌಷ್ಟಿಕಾಂಶ ಪೂರಕಗಳಿಗೆ ₹21.40 ಕೋಟಿ ಹಾಗೂ ಆಹಾರ–ಬೀಜ ಮಿನಿ ಕಿಟ್‌ಗಳಿಗೆ ₹89.55 ಕೋಟಿ ಬೇಡಿಕೆ ಇಡಲಾಗಿದೆ. ಕುಡಿಯುವ ನೀರಿನ ಪೂರೈಕೆ ಮತ್ತು ದುರಸ್ತಿಗಾಗಿ ಗ್ರಾಮೀಣ ಪ್ರದೇಶಕ್ಕೆ ₹505 ಕೋಟಿ ಹಾಗೂ ನಗರ ಪ್ರದೇಶಗಳಿಗೆ ₹300 ಕೋಟಿ ಕೋರಲಾಗಿದೆ. ಅನಪೇಕ್ಷಿತ/ಇತರೆ ಪರಿಹಾರ ಅಗತ್ಯಗಳಿಗಾಗಿ ₹300 ಕೋಟಿಯನ್ನೂ ರಾಜ್ಯ ಕೇಳಿದೆ.

ಬರದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ

ಮೊದಲ ಹಂತದ 101 ತಾಲೂಕುಗಳ ಬಳಿಕ ಸೆ.17ರಂದು ಇನ್ನೂ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಮತ್ತೊಂದೆಡೆ, 54 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಸೆ.17ರಿಂದ ಹೆಚ್ಚುವರಿ ತಾಲೂಕುಗಳ ಕ್ಷೇತ್ರ ಪರಿಶೀಲನೆ ಆರಂಭವಾಗಿದ್ದು, ಬೆಳೆ ನಷ್ಟದ ವಾಸ್ತವಿಕ ಪ್ರಮಾಣವನ್ನು ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳು, GPS ಮಾಹಿತಿ ಹಾಗೂ ಬೆಳೆ ಹಾನಿ ವಿವರಗಳ ಮೂಲಕ ದಾಖಲಿಸಲಾಗುತ್ತಿದೆ.

ಹೀಗಾಗಿ, ಮೊದಲ ಹಂತದ 101 ತಾಲೂಕುಗಳಿಗೆ ಸಲ್ಲಿಸಿರುವ ಮೆಮೊರಾಂಡಂ ಅಂತಿಮ ಬೇಡಿಕೆಯಲ್ಲ. ಗ್ರೌಂಡ್ ಟ್ರೂಥಿಂಗ್ ಮುಗಿದ ಬಳಿಕ ಹೆಚ್ಚುವರಿ ತಾಲೂಕುಗಳ ನಷ್ಟವನ್ನು ಒಳಗೊಂಡ ಮತ್ತೊಂದು ಮೆಮೊರಾಂಡಂ ಅನ್ನು ತಿಂಗಳಾಂತ್ಯದಲ್ಲಿ ಕೇಂದ್ರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

ಜಲಾಶಯಗಳಲ್ಲೂ ಆತಂಕ
ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 677.95 ಟಿಎಂಸಿ ನೀರು ಸಂಗ್ರಹವಿದ್ದು, ಒಟ್ಟು ಸಾಮರ್ಥ್ಯದ ಶೇ.77ರಷ್ಟಿದೆ. ಆದರೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳ ಸಂಗ್ರಹ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ.63ರಷ್ಟಿದೆ. ಲಿಂಗನಮಕ್ಕಿ, ಸೂಪಾ ಮತ್ತು ವಾರಾಹಿ ಜಲಾಶಯಗಳಲ್ಲಿ ಒಟ್ಟಾರೆ 200.57 ಟಿಎಂಸಿ ನೀರಿದ್ದು, ಅವುಗಳ ಒಟ್ಟು ಸಾಮರ್ಥ್ಯದ ಶೇ.61ರಷ್ಟಾಗಿದೆ. ಇದರ ಪರಿಣಾಮ ಕೃಷಿ ಮಾತ್ರವಲ್ಲದೆ ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದನೆಯ ಮೇಲೂ ಒತ್ತಡ ಹೆಚ್ಚುವ ಸಾಧ್ಯತೆಯನ್ನು ರಾಜ್ಯದ ಮೆಮೊರಾಂಡಂ ಸೂಚಿಸಿದೆ. ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದ ನೀರಿನ ಲಭ್ಯತೆ ಮುಂದಿನ ತಿಂಗಳುಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳ ಕುಡಿಯುವ ನೀರಿನ ವ್ಯವಸ್ಥೆಗೆ ಪ್ರಮುಖವಾಗಲಿದೆ.

ಕೇಂದ್ರದ ನೆರವಿನತ್ತ ರಾಜ್ಯದ ಗಮನ
ಕಳೆದ ಅವಧಿಗಳಲ್ಲೂ ಕರ್ನಾಟಕ ಬರ ಪರಿಸ್ಥಿತಿಗೆ ಕೇಂದ್ರದ NDRF ನೆರವು ಕೋರಿ ಮನವಿ ಸಲ್ಲಿಸಿತ್ತು. ಇದೀಗ 2026ರ ಬರದ ಪ್ರಮಾಣವನ್ನು ಮಳೆ ಕೊರತೆ, ಬಿತ್ತನೆ ಕುಸಿತ, ಬೆಳೆ ಹಾನಿ, ಜಲಾಶಯಗಳ ಸ್ಥಿತಿ ಹಾಗೂ ಜಾನುವಾರು–ಕುಡಿಯುವ ನೀರಿನ ಅಗತ್ಯಗಳೊಂದಿಗೆ ದಾಖಲಿಸಿ ಕೇಂದ್ರದ ಮುಂದೆ ₹3,705.30 ಕೋಟಿ ಬೇಡಿಕೆ ಇಡಲಾಗಿದೆ.

Tags:
error: Content is protected !!