ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರ ಮುಂದಿನ ಜೀವನ ಚೆನ್ನಾಗಿರಲಿ. ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಉತ್ತಮ ಆಡಳಿತ ನಡೆಸಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹಾರೈಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿಮರ್ಶೆ ಮಾಡುವುದಿಲ್ಲ. ಮುಖ್ಯಮಂತ್ರಿ ಆಗುತ್ತಿರುವ ಡಿ.ಕೆ.ಶಿವಕುಮಾರ್ ಬಗ್ಗೆಯೂ ಟೀಕೆ ಮಾಡಲ್ಲ. ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆಯೂ ವಿಮರ್ಶೆ ಮಾಡುವುದಿಲ್ಲ. ಮೂರು ವರ್ಷಗಳಿಂದಲೂ ಈ ಸರ್ಕಾರವನ್ನು ಟೀಕೆ ಮಾಡಿದ್ದೇನೆ. ಈಗ ಟೀಕೆ ಮಾಡುವ ಸಮಯವಲ್ಲ. ಸಿದ್ದರಾಮಯ್ಯನವರು ಗೌರವಯುತವಾಗಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದರು.
ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ಯಾವ ರೀತಿ ಸಂಭ್ರಮ, ಸಡಗರದಲ್ಲಿದ್ದರೋ ಅದೇ ರೀತಿ ಈಗ ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ. ಒಳ್ಳೆಯ ಆಡಳಿತ ಕೊಟ್ಟು ಟೀಕೆಗಳಿಂದ ತಪ್ಪಿಸಿಕೊಳ್ಳಲಿ. ಅವರು ಕೆಟ್ಟ ಆಡಳಿತ ಕೊಟ್ಟರೆ ಟೀಕೆಗಳು ಸಹಜವಾಗಿಯೇ ಸೃಷ್ಟಿಯಾಗುತ್ತವೆ. ಅವರ ನಡೆ, ನುಡಿಯ ಮೇಲೆ ನಮ್ಮ ಮಾತು ನಿಂತಿರುತ್ತದೆ. ಅವರನ್ನು ಈಗಲೇ ವಿಮರ್ಶೆ ಮಾಡಿ ಟೀಕೆ ಮಾಡುವುದು ನನಗೆ ಸರಿ ಅನಿಸುವುದಿಲ್ಲ. 2028ಕ್ಕೆ ಜಾ.ದಳ-ಬಿಜೆಪಿ ಸರ್ಕಾರ ತರಬೇಕೆಂದು ಜನ ನಿರ್ಧರಿಸಿದ್ದಾರೆ. ಇಷ್ಟನ್ನು ಮಾತ್ರ ನಾನು ಹೇಳಬಲ್ಲೇ ಎಂದು ಹೇಳಿದರು.




