Mysore
28
scattered clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಒಳಚರಂಡಿ ನೀರು ಕಾಲುವೆ ಸೇರಿದಂತೆ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ : ಶಾಸಕ ಜಿಟಿಡಿ ಸೂಚನೆ

ಲಿಂಗಾಂಬುದಿಕೆರೆಗೆ ಹರಿಯುವ ಯುಜಿಡಿ ನೀರು ತಡೆಗೆ ಶೀಘ್ರ ಶಾಶ್ವತ ಪರಿಹಾರ

ಮೈಸೂರು : ಹಲವು ತಿಂಗಳುಗಳಿಂದ ಒಳಚರಂಡಿ ನೀರು ಹರಿಯುವ ಜತೆಗೆ, ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲಾಗದ ಸನ್ನಿವೇಶ ನಿರ್ಮಾಣವಾಗಿ ದುರ್ವಾಸನೆ ಮತ್ತಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಜತೆಗೆ, ಕಾಮಗಾರಿಗೆ ಬೇಕಾಗಿರುವ ಅನುದಾನದ ಕುರಿತು ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ.

ನಗರದ ದಟ್ಟಗಳ್ಳಿ ಕನಕದಾಸನಗರ ಎರಡನೇ ಹಂತದ ಕೌಟಿಲ್ಯ ಶಾಲೆಯ ಮಾರ್ಗದಲ್ಲಿ ಹರಿದು ಹೋಗುವ ಒಳಚರಂಡಿ ತಾಜ್ಯ ನೀರು,ಲಿಂಗಾಂಬುದಿಕೆರೆಗೆ ರಾಜಕಾಲುವೆ ಮೂಲಕ ಹರಿದು ಹೋಗುವ ಮಲೀನ ನೀರನ್ನು ತಡೆಯುವ ಕುರಿತಾಗಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸಿಫ್, ಎಸಿಎಫ್ ರವೀಂದ್ರ, ವಲಯ ಮೂರರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದರು.

ಯುಜಿಡಿ ಮಾರ್ಗದ ಪೈಪ್‌ಲೈನ್ ಒಡೆದಿರುವ ಜಾಗ, ಸಂಜೆ ಹೊತ್ತು ಯುಜಿಡಿ ನೀರು ರಿವರ್ಸ್ ಆಗಿ ಅಕ್ಕಪಕ್ಕದ ಮನೆಗೆ ಎದುರಾಗುವ ಸಮಸ್ಯೆಗಳು, ಲಿಂಗಾಂಬುದಿಕೆರೆಯ ಒಳಗೆ ಆಗಬೇಕಿರುವ ಕೆಲಸಗಳನ್ನು ವೀಕ್ಷಿಸಿದರು. ಈ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಮಾಲೋಚನೆ ನಡೆಸಿದರು. ರಾಜಕಾಲುವೆಯಲ್ಲಿ ಮಳೆ ನೀರು ಹರಿದುಹೋಗುವಂತೆ ಮಾಡಿದರೆ ಕೆರೆಗೆ ಸಮಸ್ಯೆ ಇರುವುದಿಲ್ಲ. ಕೆಲವು ಕಡೆ ಯುಜಿಡಿ ನೀರು ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ. ತಕ್ಷಣವೇ ಕ್ರಿಯಾಯೋಜನೆ ರೂಪಿಸಬೇಕು. ತಾತ್ಕಾಲಿಕ ಮತ್ತು ಶಾಶ್ವತವಾಗಿ ಆಗಬೇಕಿರುವ ಕೆಲಸಗಳ ಬಗ್ಗೆ ಪಟ್ಟಿ ಮಾಡಿ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಬೇಕು.ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರಪಾಲಿಕೆ, ಎಂಡಿಎ,ಅರಣ್ಯ ಇಲಾಖೆ ಮೊದಲಾದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದರು.

ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಲಿಂಗಾಂಬುದಿಕೆರೆಗೆ ಕಲುಷಿತ ನೀರು ಸೇರದಂತೆ ಕಾಮಗಾರಿ ಆರಂಭಿಸಲಾಗುವುದು. ಎಲ್ಲೆಲ್ಲಿ ಹೊಸದಾಗಿ ಪೈಪ್‌ಲೈನ್ ಅಳವಡಿಸಬೇಕು. ರಿಟೈನಿಂಗ್ ವಾಲ್ ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.‌

ಶಾಸಕರೆದುರು ಸಮಸ್ಯೆಗಳ ಬಿಚ್ಚಿಟ್ಟ ನಿವಾಸಿಗಳು
ಎಂ.ಎನ್.ನಟರಾಜು ಮಾತನಾಡಿ, ಕನಕದಾಸನಗರ,ದಟ್ಟಗಳ್ಳಿ ಭಾಗದಿಂದ ಬರುವ ಯುಜಿಡಿ ಲೈನ್ ಆಗಿಂದಾಗ್ಗೆ ಕಟ್ಟಿಕೊಳ್ಳುತ್ತದೆ. ರಾಜಕಾಲುವೆ ಬಳಿ ಹಾದು ಹೋಗಿರುವ ಪೈಪ್‌ಲೈನ್ ಒಡೆದುಹೋಗಿರುವ ಕಾರಣ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಮನೆಗಳಿಗೆ ವಾಸನೆ ಬೀರುತ್ತಿದೆ. ರಾಜಕಾಲುವೆ ಬಳಿ ರಿಟೈನಿಂಗ್ ವಾಲ್ವ್‌ನ್ನು ಅಳವಡಿಸುವ ಜತೆಗೆ, ಕೆಲವು ಕಡೆ ಪೈಪ್‌ಲೈನ್ ಅಳವಡಿಸಬೇಕು ಎಂದು ಮನವಿ ಮಾಡಿದರು.

ನಾಗೇಂದ್ರಪ್ರಸಾದ್ ಮಾತನಾಡಿ ,ಬೋಗಾದಿ, ಆನಂದನಗರ ಸೇರಿದಂತೆ ಇನ್ನಿತರಕಡೆಗಳಿಂದ ಹರಿದು ಬರುವ ನೀರು ನೇರವಾಗಿ ಎಡಿಬಿ ಲೈನ್ ಮೂಲಕ ರಾಯನಕೆರೆಗೆ ಹೋಗುವಂತೆ ಮಾಡಬೇಕು. ರಾಜಕಾಲುವೆಗೆ ಕೆಲವು ಕಡೆ ಸೇರುವುದರಿಂದ ತುಂಬಾ ಸಮಸ್ಯೆಯಾಗಿದೆ. ಲಿಂಗಾಂಬುದಿಕೆರೆಗೆ ಕಲುಷಿತ ನೀರು ಸೇರುತ್ತಿರುವುದರಿಂದ ವಾಯುವಿಹಾರಿಗಳಿಗೆ ತುಂಬಾ ತೊಂದರೆಯಾಗಿದೆ. ಕೆಲವು ಮರಗಳು ಒಣಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮೊದಲು ಚರಂಡಿ ನೀರು ರಾಜಕಾಲುವೆಗೆ ಸೇರದಂತೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಇದೇ ರೀತಿ ಅನೇಕ ನಿವಾಸಿಗಳು ಹಲವಾರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರ ಮನವಿ ಆಲಿಸಿದ ಶಾಸಕರು, ಆಯುಕ್ತರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸುಮ್ಮನಾಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಅಧಿಕ್ಷಕ ಅಭಿಯಂತರ ಮಂಜು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸೀಫ್ ಇಕ್ಬಾಲ್ ಖಲೀಲ್, ನಗರಪಾಲಿಕೆ ಒಳಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶಿಲ್ಪಾ, ಎಇಇ ಧನುಷ್, ಎಇಇ ಶ್ರೀನಿವಾಸ್, ಅಶ್ವಿನ್ ಮತ್ತಿತರರು ಹಾಜರಿದ್ದರು.‌

 

 

Tags:
error: Content is protected !!