Mysore
21
overcast clouds
Light
Dark

ಮೈತ್ರಿ ಸೋಲು ಗೆಲುವಿನ ಬಗ್ಗೆ ಜನ ತೀರ್ಮಾನಿಸುತ್ತಾರೆ: ಶ್ರೀನಿವಾಸ್ ಪ್ರಸಾದ್

ಮೈಸೂರು: “ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ತಪ್ಪಲ್ಲ, ಬಿಜೆಪಿ ಮೈತ್ರಿ ಮಾಡಿಕೊಂಡರೆ ತಪ್ಪಾ? ಮೈತ್ರಿ ಸೋಲು ಗೆಲುವಿನ ಬಗ್ಗೆ ಜನ ತೀರ್ಮಾನಿಸುತ್ತಾರೆ” ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್  ತಿರುಗೇಟು ನೀಡಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಸಮರ್ಥಿಸಿಕೊಂಡ ಅವರು “ಕಾಂಗ್ರೆಸ್ ದೇಶದಲ್ಲಿ 30 ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದೆ. ಹಾಗೇ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದ್ರೆ ತಪ್ಪೇನು..? . ಅವರ ಮೈತ್ರಿ ತಪ್ಪಲ್ಲ, ಇವ್ರು ಮೈತ್ರಿ ಮಾಡಿಕೊಳ್ಳುವುದು ತಪ್ಪಾ..?.ಮೈತ್ರಿಯ ಗೆಲುವು-ಸೋಲು ಕುರಿತು ಜನ ತೀರ್ಮಾನಿಸುತ್ತಾರೆ. ಈ ಬಗ್ಗೆ ಹಗುರವಾಗಿ ಮಾತಾಡೋದು ಬೇಡ ಅಂದರು.
ಶಾಮನೂರು ಆರೋಪ ಆಘಾತಕಾರಿ
ಕಾಂಗ್ರೆಸ್ ನಲ್ಲಿ ಲಿಂಗಾಯತರ ಕಡೆಗಣಿಸಲಾಗುತ್ತಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆರೋಪಕ್ಕೆ ಸಂಬಂಧಿಸಿ, ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಆಘಾತಕಾರಿಯಾದದ್ದು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವ ಈ ಮಾತು ತುಂಬಾ ಗಂಭೀರವಾದದ್ದು, ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಅಂತ ಅಭಿಪ್ರಾಯಪಟ್ಟರು.

ಸಮಸ್ಯೆಗೆ ಮೇಕೆದಾಟು ಏಕೈಕ ಪರಿಹಾರ
ಇನ್ನು ಕಾವೇರಿ ನೀರಿನ ವಿವಾದಕ್ಕೆ ಮೇಕೆದಾಟು ಯೋಜನೆ ಅನುಷ್ಠಾನವೇ ಏಕೈಕ ಪರಿಹಾರವಾಗಿದೆ. ಉತ್ತಮ ಮಳೆಯಾದಾಗ ಯಥೇಚ್ಛ ನೀರು ತಮಿಳುನಾಡಿಗೆ ಹರಿಯುತ್ತೆ. ಆದರೆ, ಮಳೆ ಕೊರತೆ ಉಂಟಾದಾಗ ಸಮಸ್ಯೆ ಎದುರಾಗುತ್ತದೆ. ಇನ್ನು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದು ಮತ್ತೊಂದು ಅಣೆಕಟ್ಟು ನಿರ್ಮಾಣವಾದರೆ ಮಳೆ ಕೊರತೆ ಉಂಟಾದಾಗಲೂ ತಮಿಳುನಾಡಿಗೆ ನೀರು ಹರಿಸಬಹುದು. ಹೀಗಾಗಿ ಮೇಕೆದಾಟು ಅನುಷ್ಠಾನವಾದರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾದ ಸಂಸದ
ಮಂಡ್ಯದ ಬಳಿಕ ಮೈಸೂರಿನಲ್ಲೂ ಕಾವೇರಿ ನೀರಿಗಾಗಿ ಪ್ರತಿಭಟನೆ ತೀವ್ರಗೊಂಡಿದ್ದು, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕೂಡ ಕಾವೇರಿ ಹೋರಾಟಕ್ಕೆ ಧುಮುಕಿದ್ದಾರೆ. ಮೈಸೂರಿನ ಟೌನ್ಹಾಲ್ ಮುಂಭಾಗ ಕಾವೇರಿ ಕ್ರಿಯಾ ಸಮಿತಿಯ ಅನಿರ್ದಿಷ್ಟಾವಧಿ ಧರಣಿಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಚಾಲನೆ ನೀಡಿದರು. ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 2 – 3 ತಿಂಗಳಿಂದ ರಾಜಕೀಯ ಹಾಗೂ ಹೋರಾಟಗಳಿಂದ ಶ್ರೀನಿವಾಸ್ ಪ್ರಸಾದ್ ದೂರ ಇದ್ದರು. ಆರೋಗ್ಯ ಕಾರಣಗಳಿಂದ ಯಾವ ಸಮಾರಂಭ ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ತಿರಲಿಲ್ಲ. ಜೊತೆಗೆ ಮುಂದಿನ ಬಾರಿ ನಾನು ಸಂಸತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಚುನಾವಣೆಯಿಂದ ದೂರ ಉಳಿಯುತ್ತೇನೆ ಎಂದು ಘೋಷಿಸಿದ್ದರು. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿ ಭಾವುಕವಾಗಿ ತಿಳಿಸಿದ್ದರು. ಇದೀಗ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಅವರು ಹೋರಾಟಕ್ಕೆ ಭಾಗಿಯಾಗಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ