ಮೈಸೂರು: ʼರಾಜ್ಯ ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಕಲಹದ ಬೆಳವಣಿಗೆಯನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಇನ್ನೊಬ್ಬರನ್ನ ನಿಂದಿಸುವುದು, ಬೊಗಳೆ ಬಿಡುವುದು, ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದನ್ನು ಬಿಟ್ಟು. ಅಭಿವೃದ್ಧಿ ಬಗ್ಗೆ ಮಾತನಾಡಿʼ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಬಿಜೆಪಿ ಸೇರಿದಂತೆ ಯಾವ ಪಕ್ಷದಲ್ಲೂ ಈಗ ವೈಚಾರಿಕತೆ ಇಲ್ಲ, ನೈತಿಕತೆಯೂ ಇಲ್ಲʼ ಎಂದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳ ಬಗ್ಗೆ ಚರ್ಚಿಸಿ ರಾಜ್ಯ ಅಭಿವೃದ್ಧಿ ಮಾಡಬೇಕು. ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಇನ್ನಿತರರು ವಿವಾದದ ವಿಷಯ ಮಾತನಾಡಿ ಬೈದು ಹೋಗುತ್ತಾರೆ. ಇದು ಕೆಲಸವೇ? ನೀವೆಲ್ಲಾ ದೇಶದ ಮಂತ್ರಿಗಳು. ಜಿಲ್ಲಾ ಪಂಚಾಯಿತಿ ಸದಸ್ಯರಿಗಿಂತ ಕಡೆಯಾಗಿ ಮಾತನಾಡುತ್ತಿದ್ದೀರಲ್ಲಾ? ಎಂದು ಕೇಳಿದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನಿಂತು ಹೋಗಿದ್ದ ಯೋಜನೆಗಳಿಗೆ ಜೀವ ತುಂಬುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಉಳಿದವರು ಬೊಗಳೆ ಬಿಟ್ಟು ಹೋಗುತ್ತಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿ ಬಡ ಮುಸ್ಲಿಂರ ಪಾಲಾಗಿಲ್ಲ ಅದು ಬಲಿಷ್ಠ ಮುಸ್ಲಿಂರ ಪಾಲಾಗಿದೆ. ಆದರೆ ಈ ರಾಜ್ಯದ ಮುಖ್ಯಮಂತ್ರಿ ಬಡ ಮುಸ್ಲಿಂರ ರಕ್ಷಣೇಗೆ ಹೋಗುತ್ತಿಲ್ಲವಲ್ಲ ಏಕೆ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ವಿಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬದಲು ರಾಜ್ಯದ ಬಿಜೆಪಿ ನಾಯಕರು, ಸಚಿವರು, ಶಾಸಕರು ಕೇವಲ ಹಿಂದುತ್ವದ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಕಿಡಿಕಾರಿದರು.





