ಮೈಸೂರು: ಕೇರಳದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಕಾರು, ಹಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅಶ್ವಿನ್ ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಈಗಾಗಲೇ ಘಟನೆ ಸಂಬಂಧ ಪ್ರಮೋದ್ ಹಾಗೂ ಕಣ್ಣನ್ ಎಂಬುವವರನ್ನು ಬಂಧಿಸಿರುವ ಪೊಲೀಸರು ಇದೀಗ ಕೇರಳ ಮೂಲದ ಮತ್ತೊಬ್ಬ ಆರೋಪಿ ಅಶ್ವಿನ್ ಎಂಬಾತನನ್ನು ಬಂಧಿಸಿದ್ದಾರೆ.
ಮೈಸೂರು ತಾಲ್ಲೂಕಿನ ಗುಜ್ಜೇಗೌಡನಪುರ ಗ್ರಾಮದ ಬಳಿ ನಡೆದಿದ್ದ ದರೋಡೆಯಲ್ಲಿ ಮುಸುಕುಧಾರಿಗಳ ತಂಡವೊಂದು ಕೇರಳ ವ್ಯಾಪಾರಿ ಮಹಮ್ಮದ್ ಅಶ್ರಫ್ ಎಂಬುವವರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದಲ್ಲದೇ ಕಾರಿನೊಂದಿಗೆ 1.50 ಲಕ್ಷ ಹಣ ದರೋಡೆ ಮಾಡಿ ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ ಒಬ್ಬನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.