ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ಗೆ ಬಿಜೆಪಿ ನಾಯಕರೂ ಹಲಾಲ್ ಬಜೆಟ್ ಎಂದು ಹೇಳಿಕೆ ನೀಡಿರುವ ಬಿಜೆಪಿಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಮುಸಲ್ಮಾನ ಎಂಬ ಪದವನ್ನು ಬಿಟ್ಟು ರಾಜಕೀಯ ಮಾಡಲಿ. ಮುಸಲ್ಮಾನರ ಹೆಸರು ಬಳಸದೆ ಸಂಘಟನೆ ಮಾಡಬೇಕು. ನಮ್ಮ ಸಮುದಾಯದ ಹೆಸರು ಹೇಳಿ ರಾಜಕೀಯ ಮಾಡುತ್ತಿರುವುದೇ ಬಿಜೆಪಿ ಪಕ್ಷ, ಅದೇ ಅವರ ಬಂಡವಾಳವಾಗಿದೆ. ರಾಷ್ಟ್ರದಲ್ಲಿ ಶೇ.20ರಷ್ಟು ಜನಸಂಖ್ಯೆ ಇದೆ. ಆದರೂ ದೇಶಕ್ಕಾಗಿ ನೀಡಿರುವ ಕೊಡುಗೆ ಅಪಾರವಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತ್ಯಾಗ ಬಲಿದಾನ ಮಾಡಿದ್ದೇವೆ. ಆದರೆ ಬ್ರಿಟಿಷರ ಬೂಟ ಅನ್ನು ನೆಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದಿಂದ ಮುಸಲ್ಮಾನ ಸಮುದಾಯಕ್ಕೆ ಏನಾದರೂ ಘೋಷಣೆ ಮಾಡಿದರೆ ಸಾಕು, ಬಿಜೆಪಿ ಪಕ್ಷಕ್ಕೆ ಹೊಟ್ಟೆ ಉರಿ ಶುರುವಾಗುತ್ತೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಮಂಡಿಸಿದ ಬಜೆಟ್ನಲ್ಲಿ ಎಲ್ಲರಿಗೂ ಒತ್ತು ನೀಡಿದೆ. ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲದಕ್ಕೂ ಸಹ ಅನುದಾನ ನೀಡಿದೆ. ಹೀಗಾಗಿ ಬಿಜೆಪಿ ಅವರು ಏನು ಬೇಕಾದರೂ ಹೇಳಲಿ. ಈ ಬಾರಿಯ ಬಜೆಟ್ ರಾಜ್ಯ ಅಭಿವೃದ್ಧಿಗೆ ಪೂರಕವಾಗಿದೆ. ಹೀಗಾಗಿ ಹಲಾಲ್ ಎಂದರೂ ನಾವೇನೂ ಬೇಸರ ಮಾಡಿಕೊಳ್ಳುವುದಿಲ್ಲ. ಭಾರತ ನಮ್ಮ ದೇಶವಾಗಿದೆ. ಅವರಿಗೆ ಈ ದೇಶದಲ್ಲ ಇರಲು ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ನಮಗೂ ಇದೆ ಎಂದು ಟಾಂಗ್ ನೀಡಿದರು.