Mysore
16
clear sky

Social Media

ಶನಿವಾರ, 07 ಫೆಬ್ರವರಿ 2026
Light
Dark

ಮಹಿಷಾ ದಸರಾ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ: ಪ್ರತಾಪ್​ ಸಿಂಹ

ಮೈಸೂರು : ಪ್ರತಾಪ್‌ ಸಿಂಹನನ್ನು ಈ ಬಾರಿ ಸೋಲಿಸಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ  ಕಿಡಿಕಾರಿದ್ದಾರೆ.

ಸಿಎಂ ಯಾವ ಬಡಾವಣೆಯಲ್ಲಿ ನಿಂತು ನನ್ನ ಸೋಲಿಸಿ ಅಂತಾ ಹೇಳಿದ್ದಾರೆ ಎಂಬುದು ನೋಡಿದೆ. ಮೈಸೂರಿನ ಕುವೆಂಪು ನಗರದಲ್ಲೋ, ಸರಸ್ವತಿ ಪುರಂ ನಲ್ಲೋ, ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗಲ್ಲ. ಉದಯಗಿರಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನ ಸೋಲಿಸಲು ಕರೆ ಕೊಟ್ಟಿದ್ದಾರೆ.

ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಸಿದ್ದರಾಮಯ್ಯ ಇರೋದು ಎಂಬುದು ನನಗೆ ಗೊತ್ತು. ತಮ್ಮ ಬಾಂಧವರ ಮುಂದೆ ಕೈಮಗಿದು ನನ್ನ ಸೋಲಿಸಿ ಅಂತಾ ಕೇಳುವ ದೈನಾಸಿ ಸ್ಥಿತಿ ಸಿಎಂ ಗೆ ಬರಬಾರದಿತ್ತು ಎಂದು ಸಂಸದ ಪ್ರತಾಪ್ ವ್ಯಂಗ್ಯವಾಡಿದ್ದಾರೆ.

ನನ್ನನ್ನು ಯಾಕೆ ಜನ ಸೋಲಿಸಬೇಕು ಅಂತಾ ಸಿಎಂ ಐದು ಹತ್ತು ಕಾರಣ ಕೊಡಲಿ. ಹೈವೆ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದು ತಪ್ಪಾ? ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟ್ಟಿದ್ದು ತಪ್ಪಾ? ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ? ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್ ಸಿಂಹನನ್ನು ಸೋಲಿಸಬೇಕು ಹೇಳಿ? 40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ. ಮೈಸೂರಿಗೆ ಮಾಡಿರುವ ಕೆಲಸ ಏನೂ ಎಂಬುದು ಹೇಳಲಿ. ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತಾ ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ?

ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳ ಉದ್ಧಾರವಾಗಬಾರದು. ಬಡವರ ಮಕ್ಕಳು ಬೆಳೆಯಬಾರದು. ಅವರು ಅವರ ಮಕ್ಕಳು ಮಾತ್ರ ರಾಜಕಾರಣ ಮಾಡ್ತಾ ಇರಬೇಕು ಅಷ್ಟೆ. ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ಹಿಂದೂ ಕಾರ್ಯಾಕರ್ತರ ಕೊಲೆಯಾಯಿತು. ಇದಕ್ಕೆ ಯಾರು ಕಾರಣ? ಸಿದ್ದರಾಮಯ್ಯ ಪ್ರತಿ ಬಾರಿಯೂ ಪ್ರಧಾನಿ ಮೋದಿ ವಿರುದ್ದ ಮಾತಾಡುತ್ತಾರೆ. ಇದು ಒಂಥರ ಆಕಾಶದ ಕಡೆ ಮುಖ ಮಾಡಿ ಉಗಿದಂತೆ. ಈ ಕೆಲಸವನ್ನು ನಿರಂತರವಾಗಿ ಸಿದ್ದರಾಮಯ್ಯ ಮಾಡುತ್ತಲೆ ಇದ್ದಾರೆ ಎಂದು ಸಂಸದ ಪ್ರತಾಪ್​ ಹರಿಹಾಯ್ದರು.

ಕಾಂಗ್ರೆಸ್​​ಗೆ ದಲಿತರು ಕೇರಿಯಲ್ಲೇ ಇರಬೇಕು-ಮುಸಲ್ಮಾನರು ಮೊಹಲ್ಲಾದಲ್ಲೇ ಇರಬೇಕು

ಬೃಹತ್ ಮೈಸೂರು ಪಾಲಿಕೆ ಮಾಡಬೇಕು ಎಂಬ ಫೈಲ್ ಪಾಲಿಕೆ ಕೌನ್ಸಿಲ್ ಮುಂದೆ ಇದೆ. ಕೌನ್ಸಿಲ್ ಸಭೆಯನ್ನು ಸರಕಾರ ದಿಢೀರ್ ರದ್ದುಗೊಳಿಸಿದೆ. ಕಾಂಗ್ರೆಸ್ ಬೃಹತ್ ಮೈಸೂರು ಪಾಲಿಕೆಗೆ ವಿರೋಧವಿದೆ. ಕಾಂಗ್ರೆಸ್ ಗೆ ದಲಿತರು ಕೇರಿಯಲ್ಲೇ ಇರಬೇಕು. ಮುಸಲ್ಮಾನರು ಮೊಹಲ್ಲಾದಲ್ಲೇ ಇರಬೇಕು.

ನೀವು ಮಾತ್ರ ಸದಾಶಿವನಗರದಲ್ಲಿ ಇರಬೇಕಾ? ಮೈಸೂರು ಅಭಿವೃದ್ಧಿ ಮಾಡಬಾರದಾ? ಮೈಸೂರು ಅಭಿವೃದ್ಧಿ ಆಗಬಾರದಾ? ನೀವಂತೂ ಮೈಸೂರು ಅಭಿವೃದ್ಧಿ ಮಾಡಲಿಲ್ಲ. ನಮಗಾದರೂ ಅಭಿವೃದ್ಧಿ ಮಾಡಲು ಬಿಡಿ. ಅಭಿವೃದ್ಧಿಗೆ ಕಾಂಗ್ರೆಸ್ ವಿರೋಧವಿದೆ. ಭಾಗ್ಯಗಳ ಕೊಟ್ಟಿದಾರೆ. ಇನ್ನೂ ಓಸಿ ಪ್ಯಾಕ್ ಕೊಡುವುದು ಮಾತ್ರ ಬಾಕಿ ಇದೆ. ಅದನ್ನು ಕೊಟ್ಟು ಜನರನ್ನು ಅಲ್ಲೇ ಕೂರಿಸಿ. ನೀವು ಮಾತ್ರ ಬೆಂಗಳೂರಿನಲ್ಲಿ ಅರಾಮಾಗಿ ಇರಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!