ಹುಣಸೂರು: ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಬೀಳುತ್ತಿರುವ ಜೋರು ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯು ಭರ್ತಿಯಾಗಿದೆ. ಹೀಗಾಗಿ ನದಿಪಾತ್ರದಲ್ಲಿ ಪ್ರವಾಹದ ಭೀತಿ ಇನ್ನಷ್ಟು ಹೆಚ್ಚಾಗಿದ್ದು, ಆತಂಕ ಮನೆ ಮಾಡಿದೆ.
ಕೊಡಗಿನ ಇರ್ಪುವಿನಲ್ಲಿ ಹುಟ್ಟಿ ನಾಗರಹೊಳೆ ಉದ್ಯಾನದೊಳಗಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿಗೆ ನೀರಿನ ಹರಿವು ದಿನೇ ದಿನೇ ಹೆಚ್ಚುತ್ತಿದೆ. ಹಿನ್ನೆಲೆ ತಾಲೂಕಿನ ಅಣೆಕಟ್ಟು ಮೇಲೆ ನೀರು ಹರಿಯಲಾರಂಭಿಸಿವೆ.
ಹೀಗಾಗಿ ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ರೆಟ್ ಅಲರ್ಟ್ ಘೋಷಿಸಿದ್ದು, ನದಿ ಅಂಚಿನ ಗ್ರಾಮಸ್ಥರಿಗೆ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೊಡಗು ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಡಿಕೇರಿಯ ಜಲಾಶಯಗಳು ತುಂಬಿ ಹೋಗಿವೆ.
ಕೇರಳ ಹಾಗೂ ಮಲೆನಾಡು ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕಾವೇರಿ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣವೂ ಹೆಚ್ಚಿದೆ. ಕೆಆರ್ಎಸ್ ನಿಂದ ಬುಧವಾರ ರಾತ್ರಿ ೧.೭೨ ಲಕ್ಷ ಕ್ಯೂಸೆಕ್ಸ್ನಷ್ಟು ನೀರನ್ನು ಹೊರಬಿಡಾಗಿದೆ. ಇದರಿಂದ ಐತಿಹಾಸಿಕ ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆ ಮುಳುಗಡೆಯಾಗಿದೆ.





