ಮಂಡ್ಯ : ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಹೊಳಲು ಗ್ರಾಮದ ವೃತ್ತದಲ್ಲಿ ಹಾಕಲಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿ. ಎಸ್. ಪುಟ್ಟರಾಜುರವರ ಅರವತ್ತು ಅಡಿ ಎತ್ತರದ ಕಟೌಟ್ ಗಳು, ವಿದ್ಯುತ್ ಕಂಬಗಳು, ತೆಂಗಿನ ಮರಗಳು ಧರೆಗುರುಳಿವೆ.
ಎಚ್.ಡಿ.ಚೌಡಯ್ಯ ರಸ್ತೆ, ಆಲೆಮನೆಯ ರಸ್ತೆ ಹಾಗೂ ಪುಣ್ಯಶ್ರೀ ಇಂಡಸ್ಟ್ರೀಸ್ ರಸ್ತೆಯಲ್ಲಿ ಹಾಡ್ಯ ಕೃಷ್ಣ ಅವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು, ಸುಮಾರು ೧೦ರಿಂದ ೧೫ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಾಡ್ಯ ಕೃಷ್ಣ ಅವರ ಜಮೀನಿನಲ್ಲಿದ್ದ ತೆಂಗಿನ ಮರಗಳು ಬಿರುಗಾಳಿಗೆ ಹಾನಿಗೊಳಗಾಗಿದ್ಧು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ವಿಷಯ ತಿಳಿದ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಶನಿವಾರ ಬೆಳಿಗ್ಗೆಯಿಂದಲೇ ವಿದ್ಯುತ್ ಕಂಬಗಳನ್ನು ಸರಿಪಡಿಸಲು ಕಾರ್ಯ ಪ್ರವೃತ್ತರಾಗಿದ್ದಾರೆ. ಬಿರುಗಾಳಿ, ಮಳೆಯಿಂದ ಹೊಳಲು ಗ್ರಾಮಕ್ಕೆ ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿ ೭ ಗಂಟೆಯವರೆಗೆ ವಿದ್ಯುತ್ ಕಡಿತಗೊಂಡಿತ್ತು.





