ಎಚ್.ಡಿ.ಕೋಟೆ: ಇಡ್ಲಿ ತಯಾರಿಯಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಹೋಟೆಲ್ಗಳಿಗೆ ಮತ್ತು ಬೀದಿ ಬದಿ ಇರುವ ವ್ಯಾಪಾರಿಗಳ ಮಳಿಗೆಗಳಿಗೆ ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಡಾ.ರವಿಕುಮಾರ್ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ತಾಲ್ಲೂಕು ಸುರಕ್ಷತಾ ಅಧಿಕಾರಿ ಡಾ.ರವಿಕುಮಾರ್ ಅವರು, ರಾಜ್ಯಾದಂತ ಪ್ಲಾಸ್ಟಿಕ್ಗಳನ್ನು ನಿಷೇಧ ಮಾಡಲಾಗಿದೆ. ಯಾವುದೇ ಆಹಾರ ಪದಾರ್ಥಗಳಿಗೆ ಆಹಾರ ತಯಾರಿಸಲು ಹಾಗೂ ಆಹಾರವನ್ನು ಪಾರ್ಸೆಲ್ ಕಟ್ಟಿ ಕೊಡಲು ಪ್ಲಾಸ್ಟಿಕ್ಗಳನ್ನು ಬಳಸುವಂತಿಲ್ಲ. ಎಲ್ಲಾ ಹೋಟೆಲ್, ಕ್ಯಾಂಟೀನ್ ಮತ್ತು ಬೀದಿಬರಿ ವ್ಯಾಪಾರಿಗಳು ಸಾರ್ವಜನಿಕರಿಗೆ ಶುದ್ಧವಾದ ಆಹಾರವನ್ನು ನೀಡಬೇಕು. ಆಹಾರವನ್ನು ತಯಾರಿಸಿದ ನಂತರ ಮುಚ್ಚಿಡಬೇಕು ಹಾಗೂ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈಗ ಬೇಸಿಗೆ ಕಾಲವಾದ್ದರಿಂದ ಜನರಿಗೆ ಕುಡಿಯಲು ಕಡ್ಡಾಯವಾಗಿ ಬಿಸಿನೀರನ್ನು ನೀಡಬೇಕು ಎಂದು ಸೂಚನೆ ನೀಡಿದರು.
ಬಳಿಕ ಭೇಟಿ ನೀಡಿದ್ದ ಎಲ್ಲಾ ಹೋಟೆಲ್ಗಳಿಂದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಜಿಲ್ಲಾ ಮಟ್ಟದ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಒಳಪಡಿಸಲಾಯಿತು. ಇದೇ ಸಂದರ್ಭದಲ್ಲಿ ಹೋಟೆಲ್ ಮತ್ತು ಕ್ಯಾಂಟೀನ್, ಬೀದಿ ಬರಿ ವ್ಯಾಪಾರಿಗಳಿಗೆ ನೋಟಿಸ್ ನೀಡಿ ದಂಡ ವಿಧಿಸಲಾಯಿತು. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಸೇರಿದಂತೆ ಇನ್ನಿತರರು ಹಾಜರಿದ್ದರು.



