ಹೆಚ್.ಡಿ.ಕೋಟೆ: ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿಯತ್ತ ಸಾಗದೇ ಅನ್ನದಾತರ ಮೊಗದಲ್ಲಿ ಭಾರೀ ಆತಂಕ ಮನೆಮಾಡಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಬೀಳಬೇಕಿದ್ದ ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ಜಲಾಶಯದ ಒಳಹರಿವಿನಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.
ನೆರೆಯ ಕೇರಳ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡರೆ ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿ ಕೇವಲ 10 ದಿನಗಳ ಮುಂಚೆಯೇ ಡ್ಯಾಂ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಕೇರಳದಲ್ಲೂ ಮುಂಗಾರು ಮಳೆ ವ್ಯಾಪಕವಾಗಿ ಆಗಿಲ್ಲದಿರುವುದರಿಂದ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ರೈತರು ಭಾರೀ ಆತಂಕಕ್ಕೀಡಾಗಿದ್ದು, ಮಳೆ ಬೀಳುವುದನ್ನೇ ಕಾಯುತ್ತಾ ಕುಳಿತಿದ್ದಾರೆ. ಕಬಿನಿ ಜಲಾಶಯ ಭರ್ತಿಯಾದರಷ್ಟೇ ನಾಲೆಗಳಿಗೆ ನೀರು ಬಿಡಲು ಸಾಧ್ಯ. ಜಲಾಶಯ ತುಂಬದಿದ್ದರೆ ನಾಲೆಗಳಿಗೂ ನೀರು ಬಿಡಲು ಸಾಧ್ಯವಾಗಲ್ಲ.
ಆಗಸ್ಟ್ ಆರಂಭದಲ್ಲಿ ಮುಂಗಾರು ಮಳೆ ಚುರುಕುಗೊಂಡರೆ, ಕಬಿನಿ ಜಲಾಶಯ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಆದಷ್ಟು ಬೇಗ ಮಳೆ ಬಿದ್ದು, ಜಲಾಶಯ ತುಂಬಲಿ ಎಂದು ರೈತರು ದೇವರ ಮೊರೆ ಹೋಗಿದ್ದಾರೆ.





