ಮೈಸೂರು : ಅರ್ಹರಲ್ಲದವರಿಗೂ ಗೈಡ್ಶಿಪ್ ಕೊಡುವುದಕ್ಕೆ ಮೈಸೂರು ವಿ.ವಿ ಶಿಕ್ಷಣ ಮಂಡಳಿ ಸಭೆಯಲ್ಲಿ ತೀವ್ರ ಚರ್ಚೆ ನಡೆದು ಆಕ್ಷೇಪ ವ್ಯಕ್ತವಾಯಿತು.
ಮೈಸೂರು ವಿ.ವಿ ಕ್ರಾಫರ್ಡ್ ಭವನದಲ್ಲಿ ಸೋಮವಾರ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಸಾಲಿನ ಪ್ರಥಮ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಕಲಾ ನಿಕಾಯದ ಡೀನ್ ಪ್ರೊ.ಎಂ.ಎಸ್. ಶೇಖರ್ ಈ ವಿಚಾರವನ್ನು ಪ್ರಸ್ತಾಪಿಸಿದರು.
ಖಾಸಗಿ ಕಾಲೇಜುಗಳಿಂದ ಅರ್ಹರಲ್ಲದವರಿಗೂ ಗೈಡ್ಶಿಪ್ ಕೊಡುವಂತೆ ಮನವಿ ಪತ್ರಗಳು ಬರುತ್ತಿವೆ. ಯುಜಿಸಿ, ಸರ್ಕಾರ ಮತ್ತು ಬಿಒಎಸ್ ನಿಯಮಗಳು ಹಾಗೂ ಪ್ರೊಬೆಷನರಿ ಡಿಕ್ಲೇರ್ ಆಗಿರುವುದನ್ನು ಪರಿಶೀಲಿಸಿ ಗೈಡ್ಶಿಪ್ ಕೊಡಬೇಕು ಎಂದು ಪ್ರೊ.ಎಂ.ಎಸ್. ಶೇಖರ್ ಸಭೆಯ ಗಮನ ಸೆಳೆದರು.
ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅರ್ಹರಿದ್ದರೂ ಗೈಡ್ಶಿಪ್ ಕೊಡಲಾಗುತ್ತಿಲ್ಲ. ಆದರೆ, ಖಾಸಗಿ ಕಾಲೇಜುಗಳಿಂದ ಗೈಡ್ಶಿಪ್ ಅನ್ನು ಪರಿಗಣಿಸಲಾಗುತ್ತಿದೆ. ಈಚೆಗೆ ಗೈಡ್ಶಿಪ್ ಕೋರಿ ಮನವಿ ಬಂದಿದೆ. ನೌಕರಿ ಕಾಯಂ ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ದಾಖಲೆಗಳನ್ನು ಕಳುಹಿಸುವಂತೆ ಪತ್ರ ಬರೆದರೆ, ನಮ್ಮನ್ನೇ ಪರಿಶೀಲಿಸುವಂತೆ ಮರು ಉತ್ತರ ಬಂದಿದೆ. ಆ ಹಿಂಬರಹಕ್ಕೆ ಯಾರದೇ ಸಹಿಯೂ ಇಲ್ಲ ಎಂದು ಪತ್ರವನ್ನು ಸಭೆಯಲ್ಲಿ ಪ್ರದರ್ಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರು, ಬಿಒಎಸ್ ಮತ್ತು ಯುಜಿಸಿ ನಿಯಾಮನುಸಾರ ಗೈಡ್ಶಿಪ್ಗೆ ಅನುಮತಿ ಕೊಡಬೇಕಾಗುತ್ತದೆ. ನೇಮಕಾತಿ ವಿಷಯವಾಗಿ ಸರ್ಕಾರದ ಹಂತದಲ್ಲಿ ಇತ್ಯರ್ಥವಾಗಬೇಕು. ಇದು ನಮ್ಮ ಸಮಸ್ಯೆ ಅಲ್ಲ ಎಂದು ಹೇಳಿದರು.
ಮೈಸೂರು ವಿ.ವಿ ಗುಣಮಟ್ಟದ ದೃಷ್ಟಿಯಿಂದ ಈ ವಿಷಯವನ್ನು ಪ್ರಸ್ತಾಪಿಸಿದೆ. ಹಿಂದೆ ವಾರ್ಷಿಕ ಸಭೆಯಲ್ಲಿ ಚರ್ಚೆ ಮಾಡಿ ಗೈಡ್ಶಿಪ್ ನೀಡಬಹುದು. ತಕ್ಷಣ ಗೈಡ್ಶಿಪ್ ಕೊಡಲು ತುರ್ತು ಏನಿರುತ್ತದೆ ಎಂದು ಪ್ರೊ.ಎಂ.ಎಸ್.ಶೇಖರ್ ಅವರು ಖಾರವಾಗಿ ಪ್ರಶ್ನಿಸಿದರು.
೨೦೧೭ರಲ್ಲಿ ಯುಜಿಸಿ ರೂಪಿಸಿರುವ ಗೈಡ್ಶಿಪ್ ಸಂಬಂಧಿತ ನಿಯಮಗಳನ್ನು ಪಾಲಿಸುವುದು. ಸಂಶೋಧನೆಗೆ ಉತ್ತೇಜನ ಕೊಡಲು ನಿಯಾಮನುಸಾರ ಗೈಡ್ಶಿಪ್ ಕೊಡಬಹುದು ಎಂಬ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮತ್ತಿತರರು ಹಾಜರಿದ್ದರು.





