ಮೈಸೂರು : ವಿಶ್ವ ಆನೆ ದಿನವೇ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನ ಶಿಬಿರದ ಕ್ರಾಲ್ ನಲ್ಲಿ ಪಳಗಿಸಲಾಗುತ್ತಿದ್ದ ಸುಮಾರು 50ವರ್ಷ ಪ್ರಾಯದ ಸುಬ್ರಮಣಿ ಎಂಬ ಗಂಡಾನೆ ಸಾವನ್ನಪ್ಪಿದೆ.
ಸುಬ್ರಮಣಿ ಎಂಬ ಗಂಡಾನೆಯನ್ನು ಕ್ರಾಲ್ನಲ್ಲಿ ಪಳಗಿಸಲಾಗುತ್ತಿದ್ದು, ಕಳೆದ ಜುಲೈ 20ರಂದು ಹೆಚ್ಚಿನ ತರಬೇತಿಗಾಗಿ ಕ್ರಾಲ್ ಹೊರಗಡೆ ತಂದು ತರಬೇತಿ ನೀಡಲಾಗುತ್ತಿತ್ತು. ಆದರೆ ಆ.11ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಸುಸ್ತಾಗಿರುವಂತೆ ಆನೆ ಮಲಗಿಕೊಂಡಿದೆ. ಮಲಗಿದ್ದ ಆನೆಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿ ಮೇಲೇಳಿಸಲು ಪ್ರಯತ್ನಿಸಲಾಗಿದ್ದರೂ ಆನೆಯು ಮೇಲೇಳಲಿಲ್ಲ. ಬಳಿಕ ಕ್ರೇನ್ ಸಹಾಯದಿಂದ ಎದ್ದು ನಿಲ್ಲಿಸಲು ಪ್ರಯತ್ನಿಸಲಾಗಿದರೂ ಎದ್ದು ನಿಲ್ಲಲಾಗದ ಸುಬ್ರಮಣಿ ವಿಶ್ವ ಆನೆ ದಿನದಂದೆ ಮದ್ಯಾಹ್ನ 3.15 ರ ಸಮಯದಲ್ಲಿ ಮೃತಪಟ್ಟಿರುತ್ತದೆ.
ಸುಬ್ರಮಣಿ ಆನೆಯು ಬಹುಅಂಗಾಂಗಳ ವೈಫಲ್ಯದಿಂದ ಬಳಲಿ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಕಳೇಬರವನ್ನು ಮಣ್ಣಿನಲ್ಲಿ ಹೂತು ಹಾಕಲಾಯಿತು.
ಸ್ಥಳದಲ್ಲಿ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್, ಪಶು ವೈದ್ಯರಾದ ಡಾ.ಚಿಟ್ಟಿಯಪ್ಪ, ಡಾ.ಮದನ್ ಗೋಪಾಲ್, ಡಾ.ಹೆಚ್.ರಮೇಶ, ವಲಯ ಅರಣ್ಯಾಧಿಕಾರಿಗಳು, ಆನೆಶಿಬಿರದ ಸಿಬ್ಬಂದಿ ಸೇರಿದಂತೆ ಮುಂತಾದವರು ಹಾಜರಿದ್ದರು.





