ಮಹಾರಾಣಿ ಕಾಲೇಜು ವಿದ್ಯಾರ್ಥಿಗಳು ಭಾಗಿ
ಮೈಸೂರು : ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲುಜಾಗೃತಿ ಜಾಥಾ ನಡೆಸಲಾಯಿತು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಎದುರು ನಡೆದ ಕಾರ್ಯಕ್ರಮಕ್ಕೆಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು. ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀ ಕಾಂತ್ ರೆಡ್ಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಎಂ.ಕೆ.ಸವಿತ,ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಇನ್ನಿತರರು ಹಾಜರಿದ್ದರು.
ಜಿಲ್ಲಾಧಿಕಾರಿ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಒಂದು ತಿಂಗಳು ಕಾಲ ನಡೆಯಲಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುವಾಗ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಬದಲಾವಣೆ ಸೇರಿದಂತೆ ಇನ್ನಿತರ ಅಂಶಗಳನ್ನು ಸರಿಪಡಿಸಲಾಗುತ್ತದೆ.ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆದು ಚರ್ಚಿಸಲಾಗುತ್ತದೆ. ನಾಲ್ಕು ದಿನಗಳ ಕಾಲ ಮಿಂಚಿನ ನೋಂದಣಿ ನಡೆಯಲಿದೆ. ಮತದಾರರ ಅಂತಿಮ ಮತದಾರರ ಪಟ್ಟಿ ಜನವರಿ ಐದರಂದು ಪ್ರಕಟವಾಗಲಿದೆ. ಸಮಸ್ಯೆ ಇಲ್ಲದಂತೆ ಮತ್ತು ಗೊಂದಲ ಇಲ್ಲದಂತೆ ಕರಡು ಪ್ರತಿಯನ್ನು ಪ್ರಕಟಿಸಿದಾಗ ಗಮನಿಸಿಕೊಳ್ಳಲು ಅವಕಾಶಗಳನ್ನು ನೀಡಲಾಗಿದೆ ಎಂದರು. ಪ್ರತಿಯೊಬ್ಬ ಮತದಾರರು ತಮ್ಮಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ರಾಯಭಾರಿಯಾಗಿ ಮಾಡಿಕೊಂಡು ನೂರು ಮಂದಿಗೆ ಪ್ರಚಾರ ಮಾಡುವಂತೆ ಬಳಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದರು.





