Mysore
20
overcast clouds
Light
Dark

ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರಿಗೆ ವಂಚನೆ : ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ

ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖವಾಗಿ ಕಾರಣವಾದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿ ವಂಚಿಸುತ್ತಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರು, ಮುಖಂಡರ ಒಂದೂವರೆ ವರ್ಷದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಮುಸಲ್ಮಾನರಿಗೆ ಏನೆಲ್ಲಾ ಭರವಸೆ ನೀಡಿತ್ತು? ಅದೆಲ್ಲವನ್ನೂ ಈಗ ಮರೆತಿದೆ. ಮತಾಂತರ ನಿಷೇದ ಕಾಯ್ದೆಯನ್ನು ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರಕ್ಕೆ ಹಿಜಾಬ್ ನಿಷೇಧ, ಗೋ ಹತ್ಯೆ ನಿಷೇದ ಕಾನೂನು ವಾಪಸ್ ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ. ಇದು ವಂಚನೆಯಲ್ಲದೆ ಮತ್ತೇನು ಎಂದು ಅವರು ಕಿಡಿ ಕಾರಿದರು.

ಮಣಿಪುರ ಹರಿಯಾಣ ಗಲಭೆ ಕೇಂದ್ರ ಸರ್ಕಾರ ಪ್ರಾಯೋಜಿತ : ಭಾರತದ ಪರಿಸ್ಥಿತಿ ಈಗ ಆತಂಕದಲ್ಲಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಮಣಿಪುರದಲ್ಲಿ 300 ಚರ್ಚ್ ಗಳಿಗೆ ಬೆಂಕಿ ಹಚ್ಚಿ ನಾಶ ಮಾಡಲಾಗಿದೆ. 70 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. 150 ಜನರ ಕಗ್ಗೊಲೆ ನಡೆದಿದ್ದು, ಸಾಮೂಹಿಕ ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ ಅಲ್ಲಿ ಸಾಮಾನ್ಯವಾಗಿದ್ದರು ಕೇಂದ್ರ ಸರ್ಕಾರ ಗಲಭೆ ನಿಯಂತ್ರಣಕ್ಕೆ ಮನಸ್ಸು ಮಾಡುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ನಿಯಂತ್ರಣಕ್ಕೆ ಸೈನ್ಯದ ಸಹಾಯವನ್ನು ಬಳಸಿಕೊಂಡಿಲ್ಲ. ಮಣಿಪುರ, ಹರಿಯಾಣ ಗಲಭೆಗಳು ರಾಜಕೀಯ ಅಧಿಕಾರಕ್ಕಾಗಿ ನಡೆಯುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಪ್ರಾಯೋಜಿತ ದೌರ್ಜನ್ಯಗಳಾಗಿವೆ ಎಂದು ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ದೇಶದ ಭವಿಷ್ಯ ಕಾಪಾಡುವುದು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಎಸ್ಡಿಪಿಐ ಮೇಲಿದ್ದು, ನಮ್ಮ ಕಾರ್ಯಕರ್ತರು ದೇಶ ರಕ್ಷಕರಾಗಬೇಕು ಎಂದು ಕರೆ ನೀಡಿದರು.

ಹರಿಯಾಣದಲ್ಲಿ ಗಲಭೆ ನಡೆಸಲು ಮೂರು ತಿಂಗಳ ಮೊದಲೇ ಯೋಜನೆ ರೂಪಿಸಲಾಗಿದೆ ಎಂಬುದನ್ನು ಅಲ್ಲಿಯ ಮುಖಂಡರೊಬ್ಬರ ಪ್ರಚೋದನಾಕಾರಿ ಹೇಳಿಕೆಯಿಂದ ಬಯಲಾಗಿದೆ. ರಾಜ್ಯದಲ್ಲಿ ದಂಗೆ ಎಬ್ಬಿಸಲು ಜನರ ಕೈಗೆ 25 ಸಾವಿರ ತಲವಾರಿನಂತಹ ಮಾರಕಾಸ್ತ್ರ ಹಾಗೂ ಬಂದೂಕುಗಳನ್ನು ನೀಡಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಗಲಭೆಗಳು ನಡೆಯುತ್ತಿವೆ. ಇವೆಲ್ಲವೂ 2024ರ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಆರಿಸಿಕೊಂಡಿರುವ ಅತ್ಯಂತ ಹೀನ ಮಾರ್ಗವಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಗಲಭೆಗಳು ನಡೆಯುವ ಸಂಭವವಿದೆ.

2019 ರ ಲೋಕಸಭಾ ಚುನಾವಣೆ ಗೆಲ್ಲಲು ಪುಲ್ವಾಮ ದಾಳಿಯನ್ನು ನಡೆಸಿ ನಮ್ಮ ಸೈನಿಕರನ್ನು ಕೊಂದು ಅವರ ಶವದ ಮೇಲೆ ರಾಜಕಾರಣ ಮಾಡಲಾಗಿತ್ತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ. ಜತೆಗೆ 2024 ಚುನಾವಣೆ ಗೆಲ್ಲಲು ಬಿಜೆಪಿ ತಮ್ಮದೇ ಪಕ್ಷದ ಹಿರಿಯ ನಾಯಕರೊಬ್ಬರನ್ನುಕೊಂದು ಅನುಕಂಪ ಗಿಟ್ಟಿಸಬಹುದು.ಅಥವಾ ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ನಡೆಸಬಹುದು ಎಂಬುದರ ಬಗ್ಗೆಯೂ ಅವರು ಮುನ್ಸೂಚನೆ ನೀಡಿದ್ದಾರೆ. ದೇಶದ ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ