ಮೈಸೂರು : ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಆತಂಕ ಬಿಟ್ಟು, ಭರವಸೆ ಹೆಚ್ಚಿಸಿಕೊಳ್ಳಿ. ಏಕಾಗ್ರತೆ ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರೀಕ್ಷೆ ಯಶಸ್ಸಿನ ತಂತ್ರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಆತ್ಮವಿಶ್ವಾಸ, ಸಮಯ ಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೆ ಎಂದು ಹೇಳಿದರು.
ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆ ಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಅಹಂಕಾರ ಬಿಡಿ ಮಾನವೀಯತೆ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಓದುವ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸರ, ಜನಸಾಮಾನ್ಯರ ಸಮಸ್ಯೆ, ಜೈವಿಕ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಿ. ಪ್ರತಿ ವರ್ಷದ ಪ್ರಶ್ನೆ ಪತ್ರಿಕೆ ತಾಳೆಹಾಕಿ ಜೊತೆಗೆ ಪ್ರತಿದಿನ ನಿಮ್ಮ ಶಬ್ದಕೋಶ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಸಮಸ್ಯೆ ಎಂತದ್ದೆ ಇರಲಿ ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ. ಪರೀಕ್ಷೆ ಬಗ್ಗೆ ಗಮನದ ಜೊತೆಗೆ ಕಣ್ಣಿನ ನೋಟ ಗುರಿಯ ಕಡೆ ಇರಲಿ ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಅವರು, ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಇದ್ದೇ ಇರುತ್ತೆ. ಅವುಗಳನ್ನು ಧೈರ್ಯದಿಂದ ಎದುರಿಸಿ ನಿಮ್ಮ ಗುರಿ ತಲುಪಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಬೇಕು. ಇಲ್ಲಿಯೂ ಸಹ ಮಹಿಳಯರೇ ಹೆಚ್ಚಿದ್ದೀರಾ. ಮಹಿಳೆಯರ ಶ್ರದ್ದೆ ಮತ್ತು ನಿಷ್ಠೆ ಇಂದಿನ ಕೆಲಸಗಳಿಗೆ ತುಂಬಾ ಅನಿವಾರ್ಯ ಎಂದು ಹೇಳಿದರು.
ಮೊಬೈಲ್ ಗೀಳು ಯುವ ಸಮೂಹ ಹಾಗೂ ಸಮಾಜವನ್ನು ಹಾಳು ಮಾಡುತ್ತಿದೆ. ಸಮಯವೇ ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಜನರು ಮೊಬೈಲ್ ನಲ್ಲಿ ರೀಲ್ಸ್ ಸ್ಕ್ರಾಲ್ ಮಾಡೊದು ಬಿಟ್ಟು ನೋಡಿ ನಿಮ್ಮ ಸಮಯ ಎಲ್ಲಿ ಕಳೆದು ಹೋಗುತ್ತಿದೆ ಎಂದು ಗೊತ್ತಾಗುತ್ತದೆ. ಮುಖ್ಯವಾಗಿ ಯುವ ಸಮೂಹ ಮೊಬೈಲ್ ಗೀಳಿನಿಂದ ಹೊರಬಂದು ಪರಿಶ್ರಮ ಪಟ್ಟು ಅಧ್ಯಯನ ಮಾಡಬೇಕು ಎಂದು ನುಡಿದರು.
ಸಮಯ ನಿರ್ವಹಣೆಯ ಬಗ್ಗೆಯೂ ಗಮನ ಹರಿಸಿ. ದುಶ್ಚಟಗಳಿಂದ ದೂರ ಉಳಿದು ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಹೇಳಿದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟು ಓದಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ ಎಂದು ಹೇಳಿದರು.
ಗುರು-ಹಿರಿಯರು ಹಾಗೂ ಅನುಭವಿಗಳು ಹೇಳುವ ಅನುಭವಗಳನ್ನು ಚಾಚುತಪ್ಪದೆ ಪಾಲಿಸಬೇಕು. ಅರಿವೇ ಗುರು ಎನ್ನುವ ಹಾಗೆ ನಿಮ್ಮನ್ನು ನೀವೆ ಆತ್ಮ ಅವಲೋಕನೆ ಮಾಡಿಕೊಳ್ಳಿ. ಯಶಸ್ಸಿಗೆ ಗುರಿ ದೊಡ್ಡದಾಗಿರಲಿ. ಎಲ್ಲರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭವಿಷ್ಯದಲ್ಲಿ ದೇಶಕ್ಕೆ ಮಾದರಿಯಾಗುವ ಅಧಿಕಾರಿಗಳಾಗಿ ಎಂದು ಶುಭಹಾರೈಸಿದರು.
ಕುಲಸಚಿವ ಪ್ರೊ.ಕೆ.ಬಿ ಪ್ರವೀಣ ಮಾತನಾಡಿ, ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ ವರ್ಕ್ ಮಾಡಬೇಕು. ಏನೇ ಮಾಡಿದರು ಆಸೆ ಪಟ್ಟು ಮಾಡಿ. ಆವಾಗ ಎಲ್ಲವೂ ಸಕಾರಗೊಳ್ಳುವುದು ಎಂದರು.
ನಮ್ಮ ಕೆ.ಎಸ್.ಒ.ಯು ವಿವಿಯು ಇಂತಹ ಅನೇಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಲಾಭ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ಸೇವೆ ಮಾಡಿ. ಜೊತೆಗೆ ಇಲ್ಲಿನ ಶೈಕ್ಷಣಿಕ ಕೋರ್ಸ್ಗಳನ್ನು ಸಹ ಬಳಸಿಕೊಳ್ಳಿ. ಇಲ್ಲಿಯೂ ಸಹ ಪದವಿ ಪಡೆದುಕೊಳ್ಳಿ. ಈ ವರ್ಷದ ಪ್ರವೇಶಾತಿಗಳು ಈಗಾಗಲೇ ಪ್ರಾರಂಭವಾಗಿದೆ. ಪ್ರವೇಶಾತಿ ಪಡೆದುಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಹೆಚ್.ವಿಶ್ವನಾಥ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್, ಗಣೇಶ್ ಸೇರಿದಂತೆ ಇತರರು ಹಾಜರಿದ್ದರು.