ಮೈಸೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳ ಅಮಾನತು ನಿರ್ಧಾರವನ್ನು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ ಕರ್ತವ್ಯ ಲೋಪ ಮೇರೆಗೆ ಅವರ ಮೇಲೆ ಕ್ರಮವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಂದಿನ ದಿನ ಕಾಲ್ತುಳಿತ ಸಂಭವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು 3:50ರಲ್ಲಿ, ಪೊಲೀಸರು ನನಗೆ ಮಾಹಿತಿ ನೀಡಿದ್ದು 5:45 ರಲ್ಲಿ. ಆದ್ದರಿಂದ ಯಾರ್ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ವಹಿಸಿದ್ದೇವೆ. ನಗರ ಪೊಲೀಸ್ ಆಯುಕ್ತರು ನನಗೆ ಮೊದಲು ಮಾಹಿತಿ ನೀಡಬೇಕಿತ್ತು. ಆದರೆ ನನಗೆ ಮಾಹಿತಿ ನೀಡಿಲ್ಲ. ಕರ್ತವ್ಯ ಲೋಪ ಮಾಡಿದವರ ಮೇಲೆ ಕ್ರಮವಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಏರ್ಪಡಿಸುವ ಸಂಬಂದ ರಾಜ್ಯದ ಮುಖ್ಯ ಕಾರ್ಯದರ್ಶಿ ನನ್ನೊಂದಿಗೆ ಮಾತನಾಡಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರೆ ಕಾರ್ಯಕ್ರಮ ಮಾಡಿ ಎಂದು ಹೇಳಿದ್ದೆ. ಅಲ್ಲಿ ರಾಜ್ಯಪಾಲರು ಕೂಡ ಭಾಗವಹಸಿದ್ದರು. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದರು.
ತಮ್ಮ ರಾಜೀನಾಮೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ಸರ್ಕಾರದ್ದೇನು ತಪ್ಪಿಲ್ಲ. ಎಚ್.ಡಿ ಕುಮಾರಸ್ವಾಮಿ ಸುಖಾಸುಮ್ಮನೆ ವೃತಾ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಇದ್ದಕ್ಕಿದ್ದ ಹಾಗೆ ಪೋಲೀಸರ ಮೇಲೆ ಪ್ರೀತಿ ಹುಟ್ಟಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ – ಜೆಡಿಎಸ್ ನಾಯಕರು ಒತ್ತಾಯಿಸಿದಂತೆ ನ್ಯಾಯಾಂಗ ತನಿಖೆಯಾಗುತ್ತಿದೆ. ನಾವು ವಿಧಾನಸೌಧದ ಬಳಿ ನಡೆಸಿದ ಕಾರ್ಯಕ್ರಮದಲ್ಲಿ ಯಾವುದೇ ಅನಾಹುತ ನಡೆದಿಲ್ಲ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಪ್ರಧಾನಿ ರಾಜೀನಾಮೆ ನೀಡಿದ್ರಾ?
ಇನ್ನೂ ಬಿಜೆಪಿ ನಾಯಕರು ತಮ್ಮ ರಾಜೀನಾಮೆ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕುಂಭಮೇಳದಲ್ಲಿ ಜನ ಸಾವನ್ನಪ್ಪಿದಾಗ ಪ್ರಧಾನಿ ರಾಜೀನಾಮೆ ನೀಡಿದ್ರಾ? ಆಗ ತಾನೆ ಉದ್ಘಾಟನೆಯಾದ ಸೇತುವೆ ಬಿದ್ದಾಗ ಯಾರಾದ್ರೂ ಪ್ರಧಾನಿಯನ್ನಾ ರಾಜೀನಾಮೆ ಕೇಳುದ್ರಾ.? ಆಗ ಕುಮಾರಸ್ವಾಮಿ ರಾಜೀನಾಮೆ ಕೇಳಬಹುದಿತ್ತಲ್ಲವೇ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದು ಮೈತ್ರಿ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು.





