ಭಾರತೀನಗರ: ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಂಟಿ ಸಲಗವೊಂದು ಶನಿವಾರ ಪ್ರತ್ಯಕ್ಷವಾಗಿದೆ.
ರೈತರು ತಮ್ಮ ಜಮೀನಿಗೆ ಹೋದಾಗ ಸಲಗ ಕಾಣಿಸಿಕೊಂಡಿದ್ದು, ಇದರಿಂದ ಜನರು ಭಯಗೊಂಡು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ರೈತ ಶೇಖರ್, ಶಿವಲಿಂಗೇಗೌಡ ಎಂಬವರು ಪೊಲೀಸ್ ಠಾಣೆಗೆ ಮತ್ತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಯು ಗ್ರಾಮಕ್ಕೆ ಪ್ರವೇಶಿಸದಂತೆ ಕ್ರಮ ಕೈಗೊಂಡಿದ್ದಾರೆ.
ಮಳವಳ್ಳಿ ಭಾಗದ ಅರಣ್ಯ ಪ್ರದೇಶದಿಂದ ಈ ಸಲಗ ಬಂದಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿ ಗವಿಯಪ್ಪ ತಿಳಿಸಿದ್ದಾರೆ.
ಈ ಸಲಗವನ್ನು ಸಂಜೆ ೬ ಗಂಟೆಯ ನಂತರ ಅರಣ್ಯ ಪ್ರದೇಶಕ್ಕೆ ಓಡಿಸಲಾಗುವುದು. ಅಲ್ಲಿಯವರೆಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಆಟೋ ಮೂಲಕ ಮೈಕ್ ಅಳವಡಿಸಿಕೊಂಡು ಜಾಗೃತಿ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಆನೆಯನ್ನು ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡುಬಂದಿತು.