Mysore
20
overcast clouds
Light
Dark

ಯುವ ಸಮುದಾಯದಲ್ಲಿ ಇಂದು ಗೆಲ್ಲುವ ದಾವಂತ ಹೆಚ್ಚಾಗಿದೆ : ರಂಗಕರ್ಮಿ ಚಂದ್ರು ಮಂಡ್ಯ

ಮೈಸೂರು : ಯುವ ಸಮುದಾಯದಲ್ಲಿ ಇಂದು ಗೆಲ್ಲುವ ದಾವಂತ ಹೆಚ್ಚಾಗಿದೆ. ಗೆಲ್ಲುವ ಹಂತದಲ್ಲಿನ ಪ್ರಕ್ರಿಯೆ ಮತ್ತು ಸೋಲನ್ನು ಆನಂದಿಸುವ ಮನೋಭಾವವನ್ನೇ ತೊರೆದು ಬಿಟ್ಟಿದ್ದಾರೆ ಎಂದು ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಹಾಗೂ ಜೆ ಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ( ಸ್ವಾಯತ್ತ) ವತಿಯಿಂದ ಮೈಸೂರು ಪಕ್ಕದ ಬಸವನಹಳ್ಳಿ (ಗದ್ದಿಗೆ) ಗ್ರಾಮದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನರಲ್ಲಿ ಗೆಲುವು ಒಂದೇ ಮಾನದಂಡ ಎಂದು ಕೆಲವು ಪೋಷಕರು ಬಯಸುತ್ತಿದ್ದಾರೆ. ಗೆಲುವು ಕ್ಷಣಿಕವಾದ ಮನೋಲ್ಲಾಸ ಮತ್ತು ಸಂತೋಷವನ್ನು ನೀಡುತ್ತದೆ, ಅದರೆ ಗೆಲ್ಲುವ ಹಂತದಲ್ಲಿ ಸಾವಿರಾರು ಪ್ರಕ್ರಿಯೆಯನ್ನು ಆನಂದಿಸುವುದನ್ನು ಯುವ ಜನತೆ ಮತ್ತು ಪೋಷಕರು ಮರೆತಿದ್ದಾರೆ ಎಂದರು.
ಮಕ್ಕಳಿಗೆ ಕೂಡು ಕುಟುಂಬದ ಪರಿಕಲ್ಪನೆ ಮೂಡುವಂತೆ ಪೋಷಕರು ನಡೆದುಕೊಳ್ಳಬೇಕು. ಗುರು ಹಿರಿಯರಲ್ಲಿ ಭಯ, ಭಕ್ತಿ ಮತ್ತು ವಿಧೇಯತೆಯಿಂದ ಇರಬೇಕೆಂದು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ರೂಡಿ ಮಾಡಬೇಕು ಎಂದರು.
ಯುವ ಸಮುದಾಯ ಸಾಧ್ಯವಾದಷ್ಟು ಹೃದಯ ವೈಶಾಲ್ಯತೆ ಹೊಂದುವ ಕಡೆ ಗಮನಹರಿಸಬೇಕು. ತೀರಾ ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯನ್ನು ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕುವುದನ್ನು ಕಲಿಯಬೇಕು. ಜಾತಿ, ಧರ್ಮಗಳನ್ನು ಮೀರಿ ವಿಶ್ವ ಕವಿ ಕುವೆಂಪುರವರ ಆಶಯದಂತೆ ವಿಶ್ವ ಮಾನವರಾಗುವ ಕಡೆ ಸಾಗಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಯುವ ಸಮುದಾಯದ ಪಾತ್ರ ಅತಿ ಮುಖ್ಯವಾದದ್ದು. ನಾಡಿನ ಕಟ್ಟ  ಕಡೆಯ ಗ್ರಾಮವನ್ನು ಕೂಡ ನಗರದಷ್ಟೇ ಮುಖ್ಯವಾಗಿ ಮೇಲ್ಪಂಕ್ತಿ ಗೆ ತರಲು ಶ್ರಮಿಸಬೇಕು, ಹೆಣ್ಣು ಮಕ್ಕಳು ಪುರುಷನಷ್ಟೇ ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ಸಾದ್ಯವಿದೆ ಎಂದು ಗ್ರಾಮಿಣ ಪ್ರದೇಶದ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಕರ್ಮಿ ಚಂದ್ರು ಮಂಡ್ಯ ಸಲಹೆ ನೀಡಿದರು.
ಜೆ ಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ. ವಿ. ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮುಂದಿನ ದಿನಗಳಲ್ಲಿ ಜೆ ಎಸ್ ಎಸ್ ಸಂಸ್ಥೆ ಇನ್ನೂ ಹೆಚ್ಚಿನ ಸಹಕಾರ ನೀಡಲಿದೆ ಎಂದರು.
ಮಹಾತ್ಮ ಗಾಂಧೀಜಿಯವರ ಆಸೆಯಂತೆ ವಿದ್ಯಾರ್ಥಿಗಳು ಪರಸ್ಪರ ಪ್ರೀತಿ, ವಿಶ್ವಾಸ ಗೌರವದಿಂದ ಕಾಣಬೇಕು ಮತ್ತು ಗ್ರಾಮೀಣ ಪರಿಸರ ಅರಿತುಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸೂಕ್ತ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಚಲನಚಿತ್ರ ನಿರ್ದೇಶಕ ಎನ್. ತೇಜಸ್ವಿ, ಅಂತಾರಾಷ್ಟ್ರೀಯ ಜನಪದ ಕಲಾವಿದ ಅಮ್ಮ ರಾಮಚಂದ್ರ, ಜೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಪ್ರತಿಭಾ, ಚಲನಚಿತ್ರ ಕಲಾವಿದ ಎನ್. ಸ್ವಾಮಿ, ಬಸವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸವಿತಾ, ಗ್ರಾಮಸ್ಥರಾದ ಎನ್. ಕುಂಟೇಗೌಡ, ಸ್ವಾಮಿಗೌಡ ಉಪಸ್ಥಿತರಿದ್ದರು