ಮೈಸೂರು : ಆರ್ಸಿಬಿ ತಂಡದ ವಿದೇಶಿ ಆಟಗಾರರು ಅವರವರ ದೇಶಕ್ಕೆ ಹೋಗಲು ತುರ್ತಾಗಿ ಕಾರ್ಯಕ್ರಮ ನಡೆಸಲು ಒತ್ತಾಯ ಮಾಡಿದ್ದರಿಂದ ಸರ್ಕಾರವೂ ಕೂಡ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ ಎಂದು ಶಾಸಕ ಕೆ.ಹರೀಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಎನ್ನುವುದನ್ನ ಈಗ ಹೇಳಲಿಕ್ಕೆ ಆಗಲ್ಲ. ಏಕಕಾಲದಲ್ಲಿ ಅಷ್ಟೊಂದು ಜನ ಸೇರುತ್ತಾರೆ ಎನ್ನುವ ನಿರೀಕ್ಷೆ ಕೂಡ ಇರಲಿಲ್ಲ ಎಂದಿದ್ದಾರೆ.
ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ನೀಡಿ ಸೂಕ್ತ ಕಾನೂನು ಸುವ್ಯವಸ್ಥೆ ಕೊಡಬೇಕಿತ್ತು. ಆದರೆ ಮಾಹಿತಿ ನೀಡಿಲ್ಲ. ನಮ್ಮ ಸರ್ಕಾರದ ತಪ್ಪೂ ಕೂಡ ಇದೆ. ಹೋದ ಪ್ರಾಣ ಮತ್ತೆ ಬರಲ್ಲ ಘಟನೆ ಕುರಿತು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಬಿಜೆಪಿಗೆ ಕಿಂಚಿತ್ತು ಮರುಕವಿಲ್ಲ
ಬಿಜೆಪಿ,ಜೆಡಿಎಸ್ ಸಾವಿನ ಮನೆಯಲ್ಲಿ ಗಳ ಎಳೆಯುವ ಕೆಲಸ ಮಾಡುತ್ತಿದೆ. ಅವರಿಗೆ ಘಟನೆ ಬಗ್ಗೆ ಕಿಂಚಿತ್ತು ಮರುಕವಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:- ಬೆಂಗಳೂರು ಕಾಲ್ತುಳಿತ ಪ್ರಕರಣ : ಎನ್ಐಎ ತನಿಖೆ ಸಾಧ್ಯತೆ
ಸಾವಿನ ಮೇಲೆ ರಾಜಕೀಯ ಮಾಡುವುದು ಅವರಿಗೆ ಅಭ್ಯಾಸವಾಗಿದೆ. ಅವರು ಹಿಂದಿನಿಂದಲೂ ಜನರ ಭಾವನೆಗಳ ನಡುವೆ ಆಟ ಆಡಿ ಅಭ್ಯಾಸ. ಹಿಂದು ಮುಸ್ಲಿಂ ನಡುವೆ ಕೋಮು ದ್ವೇಷ ಸೃಷ್ಟಿಸಿ ಇದು ವರೆಗೆ ಲಕ್ಷಾಂತರ ಜನ ಸಾಯಿಸಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದರು.





