Mysore
24
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

29 ವರ್ಷದ ಬಳಿಕ ಬದನವಾಳು ಗ್ರಾಮದಲ್ಲಿ ವೀರಶೈವರು-ದಲಿತರ ಮಧ್ಯೆ ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಹಭೋಜನ

 ಮೈಸೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಂಜನಗೂಡು ಬದನವಾಳು ಗ್ರಾಮದಲ್ಲಿ 29 ವರ್ಷದ ಬಳಿಕ ವೀರಶೈವ ಮತ್ತು ದಲಿತ ಸಮುದಾಯದ ಜನರಿಂದ ಸಹಭೋಜನ ನಡೆಯಿತು. ಗ್ರಾಮದ ವಿವಿಧ ಸಮುದಾಯದ 28 ಜನರು ಭಾರತ್ ಜೋಡೋ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಹಭೋಜನ ಮಾಡಿದರು.

ಬದನವಾಳು ಗ್ರಾಮದಲ್ಲಿರುವ ಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮದ ಎಲ್ಲರೂ ದೇಣಿಗೆ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ, ದೇವಸ್ಥಾನದಲ್ಲಿ ಪ್ರವೇಶ ನೀಡದ ಕಾರಣ ದಲಿತರು ದೇಣಿಗೆ ನೀಡಲು ವಿರೋಧ ಮಾಡಿದ್ದರು. ದೇವಸ್ಥಾನದೊಳಗೆ ಪ್ರವೇಶ ನೀಡಿದರೆ ಮಾತ್ರ ದೇಣಿಗೆ ನೀಡುವುದಾಗಿ ಷರತ್ತು ಹಾಕಿದ್ದರು. ಆದರೆ ದೇಗುಲದ ಸಮಾರಂಭದ ಹೊತ್ತಿಗೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದರು. ಇದರಿಂದ ರೊಚ್ಚಿಗೆದ್ದ ದಲಿತರು ಸಮಾರಂಭ ರದ್ದಾಗುವಂತೆ ಮಾಡಿದ್ದರು. ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ವೀರಶೈವರು ದಲಿತರ ಮೇಲೆ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದರು

1993 ರಲ್ಲಿ ದೇವಸ್ಥಾನ ಉದ್ಘಾಟನೆ ವಿಚಾರವಾಗಿ ವೀರಶೈವ ಹಾಗೂ ದಲಿತರ ನಡುವೆ ಗಲಾಟೆ‌ ನಡೆದಿತ್ತು. ಇದೇ ವಿಚಾರವಾಗಿ ಮೂವರು ದಲಿತರ ಹತ್ಯೆಯೂ ನಡೆದಿತ್ತು. ಈ ಘಟನೆ ಹಿನ್ನಲೆಯಲ್ಲಿ ಎರಡು ಸಮುದಾಯದ ನಡುವೆ ವೈಷಮ್ಯ ಮೂಡಿತ್ತು. ಇದಕ್ಕೂ ಮೊದಲು ಬದನವಾಳು ಗ್ರಾಮದಲ್ಲಿ ಮುಚ್ಚಲ್ಪಟ್ಟಿದ್ದ ರಸ್ತೆಯನ್ನು ಶ್ರಮದಾನದ ಮೂಲಕ ಮತ್ತೆ ಎರಡು ಸಮುದಾಯದವರಿಗೆ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬದನವಾಳು ಗ್ರಾಮದಲ್ಲಿ ನಡೆದ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಹೃದಯಗಳನ್ನು ಒಟ್ಟು ಮಾಡುವ ನಿಟ್ಟಿನಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಸಂಪರ್ಕ ರಸ್ತೆ ನಿರ್ಮಾಣ ಮಾಡಿ ಶ್ರಮದಾನ ಮಾಡಿದ್ದೇವೆ. ರಾಹುಲ್ ಗಾಂಧಿ ಜೊತೆ ಎರಡು ಸಮಾಜದವರ ಸಹಭೋಜನ ಕೂಡಾ ಮಾಡಲಾಗಿದೆ. ದೇಶದಲ್ಲಿ ಮೊದಲನೇ ಬಾರಿ ಈ ಪ್ರಯತ್ನ ನಡೆದಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!