ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ 3.9ರ ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರದೇಶದಲ್ಲಿಯೂ ಸಾವು ನೋವು, ಆಸ್ತಿ ಹಾನಿ ಆದ ವರದಿಗಳಿಲ್ಲ. ಬೆಳಗ್ಗೆ 6.57 ಗಂಟೆಗೆ ಸಾಧಾರಣ ತೀವ್ರತೆಯ ಕಂಪನ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀನಗರದಿಂದ 38 ಕಿ.ಮೀಟರ್ ದೂರದಲ್ಲಿರುವ ಬಂಡಿಪೋರಾ ಪ್ರದೇಶದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಕಾಶ್ಮೀರವು ಭೂಕಂಪನ ಪೀಡಿತ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಹಿಂದೆಯೂ ಅಲ್ಲಿ ದೊಡ್ಡ ಮಟ್ಟದ ಕಂಪನಗಳು ಸಂಭವಿಸಿದ್ದವು.





