Mysore
21
scattered clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಮಲ್ಲಪ್ಪ ಬೆಟ್ಟದ ನರಹಂತಕ ಚಿರತೆ ಸೆರೆ

ಮಹಾರಾಜ ಕಾಲೇಜು ವಿದ್ಯಾರ್ಥಿಯನ್ನು ಬಲಿ ಪಡೆದ ಚಿರತೆ ಕೊನೆಗೂ ಸೆರೆ
ತಿ.ನರಸೀಪುರ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದ್ದ ಚಿರತೆಗಳ ಪೈಕಿ ಒಂದು ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಎರಡು ತಿಂಗಳ ಹಿಂದೆ ಮಹಾರಾಜ ಕಾಲೇಜು ವಿದ್ಯಾರ್ಥಿಯನ್ನು ಬಲಿ ಪಡೆದ ಚಿರತೆ ತಾಲೂಕಿನ ಎಂ.ಎಲ್.ಹುಂಡಿ ಗ್ರಾಮದ ಮಲ್ಲಪ್ಪನ ಬೆಟ್ಟದಲ್ಲಿ ಸೆರೆ ಸಿಕ್ಕಿದೆ.
ಶುಕ್ರವಾರ ಮುಂಜಾನೆ 4 ಘಂಟೆ ಸಮಯದಲ್ಲಿ ಸೆರೆ ಸಿಕ್ಕ ಚಿರತೆ ಸುಮಾರು 8 ವರ್ಷಗಳ ಗಂಡು ಚಿರತೆಯಾಗಿದ್ದು ದಷ್ಟಪುಷ್ಟವಾಗಿದೆ.
ಅಕ್ಟೋಬರ್ 30 ರಂದು ಮಹಾರಾಜ ಕಾಲೇಜು ಬಿಕಾಂ ವಿದ್ಯಾರ್ಥಿಯಾಗಿದ್ದ ಎಂ.ಎಲ್. ಹುಂಡಿ ಗ್ರಾಮದ ಮಂಜುನಾಥ್ ಸ್ನೇಹಿತರ ಜಾತ್ರೆಗೆ ಹೊರಟಿದ್ದ ವೇಳೆ ಇದೇ ಬೆಟ್ಟದಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ. ಇದೀಗ ಸೆರೆ ಸಿಕ್ಕ ಚಿರತೆ ಇದೇ ಆಗಿರಬಹುದು ಎಂದು ಗುರುತಿಸಲಾಗಿದೆ. ಮಂಜುನಾಥ್ ಸಾವಿನ ಬೆನ್ನಿಗೇ ತಾಲ್ಲೂಕಿನ ಎಸ್. ಕೆಬ್ಬೆಹುಂಡಿ ಗ್ರಾಮದ ಮೇಘನಾ ಕೂಡ ಚಿರತೆ ದಾಳಿಗೆ ಬಲಿಯಾಗಿದ್ದು ಚಿರತೆಗಳನ್ನು ಹಿಡಿಯದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ನರಹಂತಕ ಚಿರತೆಗಳನ್ನು ಕಂಡಲ್ಲಿ ಗುಂಡಿಕ್ಕಲು ಸರಕಾರ ಆದೇಶ ನೀಡಿತ್ತು. ಅರಣ್ಯ ಇಲಾಖೆಯು ಡಿ. 2 ನಂತರ ನುರಿತ 4 ತಂಡಗಳನ್ನು ಬಳಸಿಕೊಂಡು ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು. ಚಿರತೆ ಸೆರೆಗಾಗಿ ಮಲ್ಲಪ್ಪ ಬೆಟ್ಟ ಮತ್ತು ಕೆಬ್ಬೆ ಹುಂಡಿ ಸುತ್ತಮುತ್ತ ಬೋನುಗಳನ್ನು ಇಡಲಾಗಿತ್ತು.
ಚಿರತೆಯ ಚಲನವಲನ ಗುರುತಿಸಲು 30 ಆಧುನಿಕ ಥರ್ಮಲ್ ಡ್ರೋಣ್ ಕ್ಯಾಮೆರಾ ಬಳಸಲಾಗಿತ್ತು. ಹಲವು ದಿನಗಳಿಂದಲೂ ಕ್ಯಾಮೆರಾ ಮುಖೇನ ಚಿರತೆ ಓಡಾಟವನ್ನು ಅರಣ್ಯ ಇಲಾಖೆಯು ಗಮನಿಸಿತ್ತು .
ಮಲ್ಲಪ್ಪನ ಬೆಟ್ಟದಲ್ಲಿ ಅವಳಿ ಚಿರತೆಗಳು ಆಗಾಗ ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸುತಿದ್ದವು. ಇದೀಗ ಒಂದು ಚಿರತೆ ಸಿಕ್ಕಿರುವುದರಿಂದ ಸುತ್ತಮುತ್ತಲ ಗ್ರಾಮದ ಜನರು ಸ್ವಲ್ಪಮಟ್ಟಿಗೆ ನಿರುಮ್ಮಳರಾಗಿದ್ದಾರೆ. ಸೆರೆ ಸಿಕ್ಕಿರುವ ಚಿರತೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸಾಗಿಸಲು ಪ್ರಯಾಸಪಡಬೇಕಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕರು:

ಚಿರತೆ ಸೆರೆ ಸಿಕ್ಕ ಮಾಹಿತಿ ಸಿಕ್ಕಿದ ಕೂಡಲೇ ಶಾಸಕ ಎಂ.ಅಶ್ವಿನ್ ಕುಮಾರ್ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ತಾಲೂಕಿನ ಹಲೆವೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು, ಶೀಘ್ರ ಚಿರತೆಗಳನ್ನು ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳದಲ್ಲಿ ಸಿಎಫ್ ಮಾಲತಿ ಪ್ರಿಯ, ಡಿಸಿಎಎಫ್ ಕಮಲ ಕರಿಕಾಳನ್, ಎಸಿಎಫ್ ಲಕ್ಷೀಕಾಂತ್, ಸಮಾಜ ವಲಯ ಅರಣ್ಯಾಧಿಕಾರಿ ರಾಜೇಶ್, ಅರಣ್ಯ ಅಧಿಕಾರಿ ಯಮುನಾ ,ಮಂಜುನಾಥ್,ಉಮೇಶ್, ಸರ್ಕಲ್ ಇನ್ ಸ್ಪೆಕ್ಟರ್ ಲೋಲಾಕ್ಷಿ ಮತ್ತಿತರರು ಹಾಜರಿದ್ದರು .

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!